ಚಳ್ಳಕೆರೆ
ಚಳ್ಳಕೆರೆ ನಗರದ ಎಚ್ಪಿಪಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿಯಾಗಿ 1 ಕೋಟಿ ವೆಚ್ಚದಲ್ಲಿ 7 ನೂತನ ಕೊಠಡಿಗಳನ್ನು ಕರ್ನಾಟಕ ಗೃಹ ನಿರ್ಮಾಣ ಮಂಡಳಿವತಿಯಿಂದ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿಯ ನಿಧಾನಗತಿಯ ಬಗ್ಗೆ ಕಾಲೇಜು ಪ್ರಾಂಶುಪಾಲ ಪ್ರೊ.ಜಿ.ವೆಂಕಟೇಶ್ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುರುವಾರ ಸಂಬಂಧಪಟ್ಟ ಇಲಾಖೆ ಇಂಜಿನಿಯರ್ ಸ್ಥಳಕ್ಕೆ ಆಗಮಿಸಿ ಕಾಮಗಾರಿಯ ಪ್ರಗತಿಯ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಇಂಜನಿಯರ್ ರವೀಂದ್ರ ಮಾತನಾಡಿ, ಈ ಹಿಂದೆ ಇದೇ ಕಾಲೇಜಿನ ಕೆಳಭಾಗದಲ್ಲಿ ಆರು ಕೊಠಡಿಗಳು ನಿರ್ಮಾಣ ಮಾಡಿದ್ದು, ಮತ್ತೆ ಈಗ ಹೆಚ್ಚುವರಿಯಾಗಿ 7 ಕೊಠಡಿಗಳ ನಿರ್ಮಾಣವನ್ನು ಟೆಂಡರ್ ಮೂಲಕ ಪಡೆಯಲಾಗಿದೆ. ಬೆಂಗಳೂರಿನ ಶ್ರೀಬಿಲ್ಡರ್ಸ್ರವರಿಗೆ ಕೊಠಡಿ ನಿರ್ಮಾಣದ ಜವಾಬ್ದಾರಿ ನೀಡಿದ್ದು, ಕಳೆದ ಎರಡು ತಿಂಗಳುಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ. ಹೆಚ್ಚುವರಿಯಾಗಿ ರೂಂ ನಿರ್ಮಿಸುತ್ತಿದ್ದು, ರೂಂಗೆ ಹೋಗಲು ಮೆಟ್ಟಿಲು ನಿರ್ಮಿಸಿದ್ದು, ಮೇಲ್ಭಾಗದಲ್ಲಿ ಮಾತ್ರ ಬಿಸಿಲಿನ ತಾಪದಿಂದ ಬಿರುಕು ಉಂಟಾಗಿರುವುದು ಸ್ವಾಭಾವಿಕವಾಗಿದೆ. ಇದರಿಂದ ಮೂಲ ಕಟ್ಟಡಕ್ಕೆ ಯಾವುದೇ ದಕ್ಕೆ ಇಲ್ಲ. ಪ್ರಾಂಶುಪಾಲರು ಆತಂಕದಿಂದ ಆರೋಪಿಸಿದ್ದು, ಈ ಬಗ್ಗೆ ಕೊಠಡಿಗಳ ನಿರ್ಮಾಣ ಕುರಿತಂತೆ ಹೆಚ್ಚು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ಶ್ರೀಬಿಲ್ಡರ್ಸ್ರವರಿಗೆ ಸೂಚಿಸಲಾಗಿದೆ ಎಂದರು.
ಪ್ರಾಂಶುಪಾಲ ಪ್ರೊ.ಜಿ.ವೆಂಕಟೇಶ್ ಮಾತನಾಡಿ, ಸಾವಿರಾರು ಮಕ್ಕಳು ಪ್ರತಿನಿತ್ಯ ಕಾಲೇಜಿಗೆ ಬರುತ್ತಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಈ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಕಾಮಗಾರಿ ನಿಧಾನಗತಿಯಲ್ಲಿದ್ದು ಚುರುಕುಗೊಳಿಸುವಂತೆ ಮನವಿ ಮಾಡಲಾಗಿದೆ ಎಂದರು.ಈ ಸಂದರ್ಭದಲ್ಲಿ ಪ್ರೊ.ಎಂ.ಶಿವಲಿಂಗಪ್ಪ, ಸೂಪರ್ಡೆಂಟ್ ಚಂದ್ರಶೇಖರ್, ಕೆ.ಚಿತ್ತಯ್ಯ, ಶ್ರೀಬಿಲ್ಡರ್ಸ್ನ ಗಿರೀಶ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
