ಚಿತ್ರದುರ್ಗ:
ಗಿಡ-ಮರಗಳನ್ನು ರಕ್ಷಿಸಿ ಪರಿಸರವನ್ನು ಕಾಪಾಡದಿದ್ದರೆ ಮುಂದೊಂದು ದಿನ ಹನಿ ನೀರಿಗೂ ಪರದಾಡುವಂತ ಭೀಕರತೆ ಎದುರಾಗುವುದರಲ್ಲಿ ಅನುಮಾನವಿಲ್ಲ. ಅದಕ್ಕಾಗಿ ವಿದ್ಯಾರ್ಥಿಗಳು ತಮ್ಮ ತಮ್ಮ ಶಾಲಾ ಆವರಣ, ಮನೆ, ಹೊಲ ಗದ್ದೆ, ಸಾರ್ವಜನಿಕ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಿ ಪರಿಸರವನ್ನು ಸಂರಕ್ಷಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಜೆ.ಆಂತೋನಿ ಕರೆ ನೀಡಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಕುರುಬರಹಳ್ಳಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಶನಿವಾರ ಗಿಡನೆಟ್ಟು ನೀರೆರೆದು ನಂತರ ಮಾತನಾಡುತ್ತ ಹಿರೇಗುಂಟನೂರು ಹೋಬಳಿಯಲ್ಲಿ ತಲೆಎತ್ತಿರುವ ಈ ಶಾಲೆ ವಿಶಾಲವಾದ ಮೈದಾನವನ್ನು ಹೊಂದಿದೆ. ಸುಸಜ್ಜಿತವಾದ ತರಗತಿ ಕೋಣೆಗಳು, ನಾಲ್ಕು ಸ್ಮಾರ್ಟ್ ಕ್ಲಾಸ್ ಕೊಠಡಿಗಳು, ಅಡುಗೆ ಕೋಣೆ ನಿರ್ವಹಣೆ ಉತ್ತಮವಾಗಿದೆ. ಗ್ರಾಮೀಣ ಭಾಗದಲ್ಲಿ ಇಷ್ಟು ಅಚ್ಚುಕಟ್ಟಾಗಿ ಶಾಲೆಯನ್ನಿಟ್ಟುಕೊಂಡಿರುವ ಶಿಕ್ಷಕರ ಪರಿಸರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿ ಇಂತಹ ಸುಂದರ ವಾತಾವರಣದಲ್ಲಿ ಕಲಿಯುವ ನೀವುಗಳು ನೆಲ, ಜಲ, ಗಿಡ-ಮರಗಳನ್ನು ಸಂರಕ್ಷಿಸಿ ಪರಿಸರಕ್ಕೆ ಹಸಿರು ಕೊಡುಗೆ ನೀಡುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಗಿಡ-ಮರಗಳನ್ನು ಕಡಿದು ನಾಶಪಡಿಸುವುದರಿಂದ ವಾತಾವರಣದಲ್ಲಿ ಉಷ್ಣಾಂಶ ಜಾಸ್ತಿಯಾಗಿ ಸಕಲ ಜೀವರಾಶಿಗಳು ತತ್ತರಿಸುವಂತಾಗಿದೆ. ಯಾವುದೇ ಕಾರಣಕ್ಕೂ ಗಿಡ-ಮರಗಳನ್ನು ಕಡಿಯಬಾರದು. ಆದ್ದರಿಂದ ವಿದ್ಯಾರ್ಥಿ ಜೀವನದಲ್ಲಿಯೇ ಪ್ರತಿಯೊಬ್ಬರು ಗಿಡ ನೆಟ್ಟು ಜೋಪಾನ ಮಾಡಿ ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಶಾಲೆಯ ಮುಖ್ಯ ಶಿಕ್ಷಕರುಗಳು ಆನ್ಲೈನ್ನಲ್ಲಿ ವಿದ್ಯಾರ್ಥಿಗಳ ವಿವರವನ್ನು ನೊಂದಾಯಿಸಿ ವಿದ್ಯಾರ್ಥಿವೇತನ ಕೊಡಿಸುವಲ್ಲಿ ಮುತುವರ್ಜಿ ವಹಿಸುವಂತೆ ಸೂಚಿಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಡಿ.ಹೆಚ್.ರವಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರುಗಳಾದ ಪ್ರಭುಪ್ರಸಾದ್, ಹುರುಳಿ ಬಸವರಾಜ್, ಮುಬಾರಕ್, ಮಂಜುಳ, ಶೇಖರ್, ರಘು, ಲಕ್ಷ್ಮಿಕಾಂತ, ಗೀತ, ಪಲ್ಲವಿ, ನಾಯಿದ, ಇಂದಿರಮ್ಮ, ಮೆಹತಾಬ್, ಡಿ.ಡಿ.ಪಿ.ಐ.ಕಚೇರಿಯ ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕರಾದ ಎಸ್.ಟಿ.ಮಹಲಿಂಗಪ್ಪ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.