ಪಾವಗಡ:
ಕಳೆದ 10 ತಿಂಗಳ ಹಿಂದೆ ಮದ್ದಿಬಂಡೆ ಗ್ರಾಮದ ಅಂಗನವಾಡಿ ಕೇಂದ್ರದ ಸಹಾಯಕಿ ಹುದ್ದೆಯ ಆಯ್ಕೆ ಪ್ರಕ್ರಿಯೆ ಆಗಿದ್ದರೂ ಸಹ ಕರ್ತವ್ಯ ನಿರ್ವಹಣೆಗೆ ಮದ್ದಿಬಂಡೆ ಗ್ರಾಮಸ್ಥರು ಅಡ್ಡಿ ಮಾಡುತ್ತಾ ಬಂದಿದ್ದು, ಕೊನೆಗೂ ಪಾವಗಡ ತಹಸೀಲ್ದಾರ್ ಕೆ. ಆರ್. ನಾಗರಾಜ್ ಮತ್ತು ಶಿಶು ಅಭಿವೃದ್ದಿ ಯೋಜನಾಧಿಕಾರಿ ನಾರಾಯಣ್ ಹಾಗೂ ಪೋಲಿಸ್ ಬಂದೋಬಸ್ತ್ನಲ್ಲಿ ಕರ್ತವ್ಯಕ್ಕೆ ವರದಿ ಮಾಡಿಸಿರುವ ಘಟನೆ ಬುಧವಾರ ಜರುಗಿದೆ.
ಏನಿದು ಪ್ರಕರಣ? :
ತಾಲ್ಲೂಕಿನ ಮದ್ದಿಬಂಡೆ ಗ್ರಾಮದಲ್ಲಿ ಖಾಲಿಯಿದ್ದ ಅಂಗನವಾಡಿ ಸಹಾಯಕಿ ಹುದ್ದೆಗೆ 2020 ರ ಡಿಸೆಂಬರ್ನಲ್ಲಿ ಅರ್ಜಿ ಕರೆದಿದ್ದರು. ಮದ್ದಿಬಂಡೆ ಗ್ರಾಮದ ಇಬ್ಬರು ಅಲ್ಲದೆ ಮದ್ದಿಬಂಡೆ ಮಜರೆ ಗ್ರಾಮವಾದ ಹೊಸಹಟ್ಟಿಯ ವಿಧವಾ ಮಹಿಳೆ ಮಂಜುಳಾ ಅರ್ಜಿ ಸಲ್ಲಿಸಿದ್ದರು. 2021 ರ ಜನವರಿಯಲ್ಲಿ ಎಲ್ಲಾ ಅರ್ಹತೆಗಳೊಂದಿಗೆ ಮಂಜುಳಾ ಆಯ್ಕೆಯಾಗಿದ್ದರು. ಆದರೆ ಗ್ರಾಮಸ್ಥರು ಆಯ್ಕೆ ಮಾಡಿಕೊಂಡಿದ್ದ ಮಹಿಳೆಗೆ ನಿಯಮಾನುಸಾರ ಹೆಚ್ಚಿನ ವಯಸ್ಸಾಗಿದ್ದರಿಂದ ಆಕೆಯ ಅರ್ಜಿ ವಜಾಗೊಳಿಸಿ ಮಂಜುಳಾ ಆಯ್ಕೆಯಾಗಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
6 ತಿಂಗಳು ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದಿದ್ದ ಗ್ರಾಮಸ್ಥರು
ಮಂಜುಳಾ ಆಯ್ಕೆಯನ್ನು ವಿರೋಧಿಸಿ ಗ್ರಾಮಸ್ಥರು ಕಳೆದ 6 ತಿಂಗಳುಗಳ ಕಾಲ ಬೀಗ ಹಾಕಿಸಿದ್ದರು. ಆದರೆ ಕೆಲ ಪೋಷಕರು ತಮ್ಮ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿ ಕೇಂದ್ರವನ್ನು ಪ್ರಾರಂಭ ಮಾಡಿಸಿದ್ದರು. ಅಷ್ಟರಲ್ಲಿ ಕೋವಿಡ್ನಿಂದ ಲಾಕ್ ಡೌನ್ ಆಗಿದ್ದರಿಂದ ಮತ್ತೆ 3 ತಿಂಗಳು ಕೇಂದ್ರ ಮುಚ್ಚಲಾಯಿತು. ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಇತ್ತೀಚೆಗೆ ಕೇಂದ್ರವನ್ನು ಪುನಃ ತೆರೆಯಲಾಗಿದೆ. ಆಗ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬಂದ ಮಂಜುಳಾಗೆ ಗ್ರಾಮಸ್ಥರು ಅವಕಾಶ ನೀಡಿರಲಿಲ್ಲ ಎನ್ನಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶವನ್ನೆ ಧಿಕ್ಕರಿಸಿದ ಗ್ರಾಮಸ್ಥರು
ಆಯ್ಕೆಯಾದ ಮಂಜುಳಾ ಕರ್ತವ್ಯಕ್ಕೆ ಹಾಜರಾಗಲು ಹೋದಾಗ ಇಡೀ ಮದ್ದಿಬಂಡೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಅನೇಕ ಬಾರಿ ಪ್ರಯತ್ನ ಪಟ್ಟರೂ ಸಹ ಸಾಧ್ಯವಾಗಿರಲಿಲ್ಲ. ಹೀಗಾಗಿ ಕಳೆದ 10 ತಿಂಗಳಿಂದಲೂ ಮಂಜುಳಾ ಅಂಗನವಾಡಿ ಕೇಂದ್ರಕ್ಕೂ ಮತ್ತು ಪಾವಗಡದ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿಗೂ ಅಲೆದು ಅಲೆದು ಬೇಸತ್ತು ಹೋಗಿದ್ದಾರೆ.
ಕೊನೆಗೆ ಅನ್ಯದಾರಿ ಕಾಣದ ಮಂಜುಳಾ ತನ್ನ ತಂದೆಯ ಜೊತೆ ಮಂಗಳವಾರ ಪಾವಗಡದ ಶಿಶು ಅಭಿವೃದ್ದಿ ಯೊಜನಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಸತ್ಯಾಗ್ರಹ ಕುಳಿತರು. ಆಗ ತಹಸೀಲ್ದಾರ್ ಕೆ. ಆರ್.ನಾಗರಾಜ್, ಪೋಲೀಸರ ನೆರವನ್ನು ಪಡೆದುಕೊಂಡು ಬುಧವಾರ ಮಂಜುಳಾರನ್ನು ಕರ್ತವ್ಯಕ್ಕೆ ಹಾಜರಾಗಲು ಅನುವು ಮಾಡಿಕೊಟ್ಟಿದ್ದಾರೆ.
ಪೋಲಿಸರಿಗೂ ಧಮಕಿ ಹಾಕಿದ ಕೆಲ ಗ್ರಾಮಸ್ಥರು..!
ಬುಧವಾರ ಮಂಜುಳಾರನ್ನು ಕರ್ತವ್ಯಕ್ಕೆ ನಿಯೋಜಿಸಲು ತೆರಳಿದ ಪಾವಗಡ ಪೋಲಿಸ್ ಠಾಣಾ ಎಸ್.ಐ. ಗುರುನಾಥ್ ಮತ್ತು ಸಿಬ್ಬಂದಿ ನಾಗಭೂಷಣ ರೆಡ್ಡಿ ವಿರುದ್ದವೆ ಕೆಲ ಗ್ರಾಮಸ್ಥರು ಧಮಕಿ ಹಾಕಿದ್ದಾರೆ ಎನ್ನಲಾಗಿದೆ.
ಈ ವೇಳೆ ಬಾಧಿತ ಮಹಿಳೆ ಮಂಜುಳಾ ಮಾತನಾಡಿ, ನನ್ನ ಗಂಡ ವಿದ್ಯುತ್ ಆಘಾತದಿಂದ 5 ವರ್ಷಗಳ ಹಿಂದೆ ಮರಣ ಹೊಂದಿದ್ದು, ನನಗೆ ಇಬ್ಬರು ಮಕ್ಕಳ ಪೈಕಿ ಮಾತು ಬಾರದ ಹೆಣ್ಣು ಮಗೂ ಕೂಡ ಇದೆ. ನಾನು ಪಿಯೂಸಿ ಪಾಸ್ ಮಾಡಿದ್ದು, ಮದ್ದಿಬಂಡೆ ಗ್ರಾಮದ ಹೊರವಲಯದ ಹೊಸಹಟ್ಟಿಯಲ್ಲಿದ್ದೇನೆ;. ನಿಯಮನುಸಾರ ಎಲ್ಲಾ ದಾಖಲೆಗಳೊಂದಿಗೆ ಸಹಾಯಕಿ ಹುದ್ದೆಗೆ ಜಿಲ್ಲಾಧಿಕಾರಿಗಳು ಆಯ್ಕೆಗೊಳಿಸಿದ್ದರೂ ಸಹ ನನ್ನ ಆಯ್ಕೆಯನ್ನು ವಿರೋಧಿಸಿ, ನಾನು ಕರ್ತವ್ಯ ನಿರ್ವಹಿಸಲು ಕೆಲ ಗ್ರಾಮಸ್ಥರು ಅಡ್ಡಿಪಡಿಸಿದ್ದರು. ಕೊನೆಗೆ ಬುಧವಾರ ತಹಸೀಲ್ದಾರ್, ಸಿ.ಡಿ.ಪಿ.ಓ. ಮತ್ತು ಪೋಲೀಸರು ನಾನು ಕರ್ತವ್ಯಕ್ಕೆ ಹಾಜರಾಗಲು ಸಹಕರಿಸಿದ್ದಾರೆಂದು ಅವರುಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಆದರೂ ಪುನಃ ಅಂಗನವಾಡಿಗೆ ಬೀಗ ಹಾಕಿಸಿದ ಗ್ರಾಮಸ್ಥರು
ತಹಸೀಲ್ದಾರ್, ಅಧಿಕಾರಿಗಳು ಮತ್ತು ಪೋಲೀಸರು ಸ್ಥಳದಿಂದ ನಿರ್ಗಮಿಸಿದ ನಂತರ ಗ್ರಾಮಸ್ಥರು ಅಂಗನವಾಡಿ ಶಿಕ್ಷಕಿ ಯಶೋಧÀಮ್ಮ ಜೊತೆ ಗಲಾಟೆ ಮಾಡಿ, ಕೇಂದ್ರಕ್ಕೆ ಬೀಗ ಹಾಕುವಂತೆ ತಾಕೀತು ಮಾಡಿ ಬೀಗ ಹಾಕಿಸಿದ್ದಾರೆ.
ಮಂಜುಳಾ ತನ್ನ ತಂದೆಯ ಜೊತೆ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಛೇರಿ ಮುಂಭಾಗ ಧರಣಿ ಕುಳಿತಿರುವುದು.
ಮದ್ದಿಬಂಡೆ ಗ್ರಾಮದಲ್ಲಿ ಮಂಜುಳಾ ಕರ್ತವ್ಯಕ್ಕೆ ಹಾಜರಾದ ನಂತರವೂ ಗ್ರಾಮಸ್ಥರು ಅಂಗನವಾಡಿ ಶಿಕ್ಷಕಿಯಿಂದ ಕೇಂದ್ರಕ್ಕೆ ಬಾಗಿಲು ಹಾಕಿಸುತ್ತಿರುವುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
