ಬೆಂಗಳೂರು:
ಬಡವರ,ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಅಟಲ್ ಸಾರಿಗೆಯನ್ನು ಪುನಶ್ಚೇತನಗೊಳಿಸುವ ಮೂಲಕ ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ರಾಜ್ಯ ಸರ್ಕಾರ ನಮನ ಸಲ್ಲಿಕೆ ಮಾಡಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಒಂದು ವರ್ಷದ ನೆನಪಿನಲ್ಲಿ ಕೊಳಗೇರಿ ನಿವಾಸಿಗಳು,ಕೂಲಿ ಕಾರ್ಮಿಕರ ಅನುಕೂಲಕ್ಕಾಗಿ ಶೇ.50 ರ ರಿಯಾಯತಿ ದರದಲ್ಲಿ ಸಾರಿಗೆ ಸೇವೆ ನೀಡುವ ಅಟಲ್ ಸಾರಿಗೆಯನ್ನು ಪರಿಚಯ ಮಾಡಿದ್ದೆವೆ, ಬಿಎಂಟಿಸಿಯಿಂದ 25 ಅಟಲ್ ಸಾರಿಗೆ ಬಸ್ಸುಗಳ ಸಂಚಾರಕ್ಕೆ ಚಾಲನೆ ನೀಡಿದ್ದೆವು,ಆದರೆ ನಂತರ ಬಂದ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಅಟಲ್ ಸಾರಿಗೆ ನಿರ್ಲಕ್ಷ್ಯಕ್ಕೆ ಒಳಗಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಅಟಲ್ ಸಾರಿಗೆ ಕೂಲಿ ಕಾರ್ಮಿಕರ, ಬಡವರ ಪಾಲಿಗೆ ಒಳ್ಳೆಯ ಯೋಜನೆದ, ಅಟಲ್ ಸಾರಿಗೆ ಹೆಸರು ಅದು ಬಿಜೆಪಿ ಪಕ್ಷದ ಹೆಸರಲ್ಲ, ಸರ್ಕಾರಕ್ಕೆ ಇದು ದೊಡ್ಡ ಹೊರೆಯೂ ಅಲ್ಲ, 1 ಕೋಟಿ ರೂ.ಗಳ ಹೆಚ್ಚುವರಿ ಖರ್ಚುಬರಬಹುದು ಅಷ್ಟೆ,ಇಷ್ಟು ಹಣದ ಸಹಾಯಧನ ನೀಡಲು ಸರ್ಕಾರಕ್ಕೆ ಕಷ್ಟವೂ ಅಲ್ಲ. ಇಂತಹ ಯೋಜನೆ ಮೂಲಕ ರಾಜ್ಯ ಸರ್ಜಾರ ಅಜಾತ ಶತ್ರು ವಾಜಪೇಯಿ ಅವರಿಗೆ ನಮನ ಸಲ್ಲಿಕೆ ಮಾಡಬೇಕು ಎಂದು ಮನವಿ ಮಾಡಿದರು.
ಕೂಡಲೇ ರಾಜ್ಯ ಸರ್ಕಾರ ಅಟಲ್ ಸಾರಿಗೆಯನ್ನು ಪುನಶ್ಚೇತನಗೊಳಿಸಿ ಪ್ರತಿ ವಾರ್ಡ್ ಗೆ ಒಂದು ಬಸ್ಸಿನಂತೆ ಓಡಿಸಲು ಮುಂದಾಗಬೇಕು, ಸ್ಲಂಗಳು ಇರುವ ಕಡೆ ಅಟಕ್ ಸಾರಿಗೆ ಬಸ್ಸುಗಳನ್ನು ಓಡಿಸಲಿ, ಇದರಿಂದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಡಿಸಿಎಂ ಡಾ.ಜಿ ಪರಮೇಶ್ವರ್ ಅವರಿಗೆ ಒಳ್ಳೆಯ ಹೆಸರು ಬರಲಿದೆ ಹಾಗಾಗಿ ಮತ್ತೆ ಸರ್ಕಾರ ಅಟಲ್ ಸಾರಿಗೆ ಯೋಜನೆ ಜಾರಿಗೆ ತರಲಿ ಎಂದು ಅಶೋಕ್ ಆಗ್ರಹಿಸಿದರು.
