ದಾವಣಗೆರೆ:
ಉತ್ತಮ ಬದುಕು ಕಟ್ಟಿಕೊಳ್ಳಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಗಳು ಧನಾತ್ಮಕ ಧೋರಣೆ ಅನುಸರಿಸಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಶರಣಪ್ಪ ವಿ. ಹಲಸೆ ಕರೆ ನೀಡಿದರು.
ನಗರದ ಎ.ವಿ.ಕೆ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ಸಾಂಸ್ಕತಿಕ, ಕ್ರೀಡೆ, ಸ್ಕೌಟ್ಸ್&ಗೈಡ್ಸ್, ರೆಡ್ಕ್ರಾಸ್, ರೋವರ್ಸ್ ರೇಂಜರ್ಸ್, ಎನ್.ಎಸ್.ಎಸ್, ಮತ್ತು ಎನ್.ಸಿ.ಸಿ ಚಟುವಟಿಕೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳಬೇಕಾದರೆ ಧನಾತ್ಮಕ ದೋರಣೆಯನ್ನು ಹೊಂದಿರಬೇಕು ಎಂದರು.
ವಿದ್ಯಾರ್ಥಿಗಳು ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡಾಗ ಅವರಿಗಿಂತ ಉತ್ತಮವಾಗಿ ಬೆಳವಣಿಗೆ ಹೊಂದಬಹುದಾಗಿದೆ. ಹಾಗಾಗಿ ನಮ್ಮ ವೃತ್ತಿಯ ಕಡೆಗೆ ಅಭ್ಯಾಸದ ಕಡೆಗೆ ಗಮನ ಕೊಡಬೇಕು. ಆಗ ಮಾತ್ರ ನಮ್ಮ ಗುರಿ ಮುಟ್ಟಬಹುದು. ಪ್ರಸ್ತುತವಾಗಿ, ಮೊಬೈಲ್, ಟಿ.ವಿಗಳಿಂದ ವಿದ್ಯಾರ್ಥಿಗಳ ಮಾನಸಿಕ ಸಾಮಥ್ರ್ಯ ದೈಹಿಕ ಸಾಮಥ್ರ್ಯ ಕಡಿಮೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜ್ಯ ವಿಶ್ವವಿದ್ಯಾನಿಲಯಗಳ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ. ಸಿ. ಹೆಚ್. ಮುರಿಗೇಂದ್ರೆಪ್ಪ ಮಾತನಾಡಿ, ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದಬೇಕು. ವೈಚಾರಿಕ ವಿಷಯಗಳಿಗೆ ಪತ್ರಿಕೆಗಳನ್ನು ಉಪಯೋಗಿಸಿಕೊಳ್ಳಿ. ದಾವಣಗೆರೆ ವಿ.ವಿ ಈ ಭಾಗದ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ ಉನ್ನತ ಶಿಕ್ಷಣ ಸಂಸ್ಥೆ, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಪ್ರೊ. ಪಿ.ಎಸ್. ಶಿವಪ್ರಕಾಶ್ ಮಾತನಾಡಿ, ನಮ್ಮ ದೇಶದಲ್ಲಿ ಅತ್ಯಂತ ಶ್ರೀಮಂತರು ಹಾಗೂ ಅತ್ಯಂತ ಬಡವರ ಪಟ್ಟಿ ಇದೆ. ವಿದೇಶಿಯರು ಭಾರತದ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿರುವ ಭಿಕ್ಷುಕರನ್ನು ನೋಡಿ, ಭಿಕ್ಷುಕರು ಇರುವ ದೇಶದಂತೆ ಬಿಂಬಿಸುತ್ತಾರೆ. ಭಾರತದ ಸ್ಥಿತಿ ಹೀಗಿರುವುದಿಲ್ಲ ಇದರಲ್ಲಿ ಎರಡು ವರ್ಗಗಳ ನಡುವಿನ ಅಂತರ ಹೆಚ್ಚಾಗಿದೆ. ಇದು ಸುಧಾರಣೆಗೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಎ.ವಿ.ಕೆ. ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಿ. ಶಿವಪ್ಪ, ವಿದ್ಯಾರ್ಥಿ ಕ್ಷೇಮಾಧಿಕಾರಿಗಳಾದ ಡಾ.ಬಿ.ಪಿ.ಕುಮಾರ್, ಗೀತಾ ಉಪಸ್ಥಿತರಿದ್ದರು. ಲಕ್ಷ್ಮಿ ಪ್ರಾರ್ಥಿಸಿದರು. ಮೆಹರ್ತಾಜ್ ಸ್ವಾಗತಿಸಿದರು. ಸಂಗೀತಾ ನಾಯ್ಕ್ ಅತಿಥಿಗಳನ್ನು ಪರಿಚಯಿಸಿದರು. ನಾಗವೀಣಾ ವಂದಿಸಿದರು. ಸ್ಪೂರ್ತಿ ಮತ್ತು ಅಮೂಲ್ಯ ಕಾರ್ಯಕ್ರಮ ನಿರೂಪಿಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/09/halase.gif)