ಉಪ ಪೊಲೀಸ್ ವರಿಷ್ಠಾಧಿಕಾರಿ ಅಮಾನತು ಮಾಡುವಂತೆ ಹೈಕೋರ್ಟ್ ಆದೇಶ

ಬೆಂಗಳೂರು

      ಕೊಲೆ ಪ್ರಕರಣದಲ್ಲಿ ಸಮರ್ಪಕವಾಗಿ ತನಿಖೆ ನಡೆಸದ ತುಮಕೂರು ಗ್ರಾಮಾಂತರ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಒ.ಬಿ. ಕಲ್ಲೇಶಪ್ಪ ಅವರನ್ನು ಅಮಾನತು ಮಾಡುವಂತೆ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ.

      ತನಿಖಾಧಿಕಾರಿಗಳು ಸಾಕ್ಷ್ಯ ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಆರು ಜನ ಆರೋಪಿಗಳನ್ನು ಹೈಕೋರ್ಟ್ ದೋಷಮುಕ್ತಗೊಳಿಸಿತು.

      ನ್ಯಾಯಮೂರ್ತಿ ರವಿ ಮಳಿಮಠ್ ಹಾಗೂ ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ ಅವರಿದ್ದ ವಿಭಾಗೀಯ ನ್ಯಾಯಪೀಠ ಪೊಲೀಸರ ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಚಾಟಿ ಬೀಸಿದೆ.

      ತುಮಕೂರು ತಾಲ್ಲೂಕು ಕೋರಾ ಹೋಬಳಿಯ ಬೆಳಧರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಶಿಕ್ಷಕಿ ಕೊಲೆ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸಿಲ್ಲ ಎಂದು ಆಪಾದಿಸಿದೆ.

      ಆರೋಪಿಗಳಾದ ಎಚ್.ಎಸ್. ಮನು ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಪೀಠ, ನ್ಯಾಯಾಲಯದ ನಿರ್ದೇಶನದಂತೆ ಡಿವೈಎಸ್‍ಪಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ಸಂಗ್ರಹದಲ್ಲಿ ಆಗಿರುವ ಲೋಪದ ಬಗ್ಗೆ ವಿವರಣೆ ನೀಡಲಿಲ್ಲ. ಇದು ಸಹ ನ್ಯಾಯಪೀಠದ ಆಕ್ರೋಶಕ್ಕೆ ಕಾರಣವಾಗಿತ್ತು.

      ತನಿಖಾಧಿಕಾರಿಯಾಗಿ ಸಿಕ್ಕ ಸಾಕ್ಷ್ಯಗಳನ್ನು ಸಂಗ್ರಹಿಸದೆ ಆಪಾದಿತರಿಗೆ ನೆರವಾಗಿದ್ದಾರೆ. ಅಲ್ಲದೆ, ತನಿಖೆಯ ವೇಳೆ ಸಂಗ್ರಹಿಸಿದ ಆರೋಪಿಗಳ ಮೊಬೈಲ್ ಹಾಗೂ ಸಿಮ್ ಕಾರ್ಡ್ ಅನ್ನು ಅಧೀನ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ ಎಂದು ನ್ಯಾಯಪೀಠ ಹೇಳಿತು.

     ಸಾಕಮ್ಮ (59) ಎಂಬುವರು ತುಮಕೂರು ತಾಲ್ಲೂಕು ಕೋರಾ ಹೋಬಳಿಯ ಬೆಳಧರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿಯಾಗಿದ್ದರು. 2010ರ ಫೆ 8ರಂದು ಸಾಕಮ್ಮ ಸಂಜೆ ಶಾಲೆ ಮುಗಿಸಿಕೊಂಡು ಸಮೀಪದ ನರಸೀಪುರ ಗ್ರಾಮಕ್ಕೆ ಮೂವರು ವಿದ್ಯಾರ್ಥಿಗಳ ಜೊತೆ ನಡೆದು ಹೋಗುತ್ತಿದ್ದಾಗ ದಾರಿ ಮಧ್ಯೆ ಅವರ ಬಳಿ ಕಾರಿನಲ್ಲಿ ಬಂದ ಆರೋಪಿಗಳು ದಾರಿ ಕೇಳಿದರು. ಅವರು ದಿಕ್ಕನ್ನು ತೋರಿಸಲು ಮುಂದಾಗುತ್ತಿದ್ದಂತೆ ಅವರನ್ನು ಕಾರಿನೊಳಗೆ ಎಳೆದುಕೊಂಡು ಉಸಿರುಗಟ್ಟಿ ಸಾಯಿಸಿ ನಂತರ ಸಮೀಪದ ಬಾವಿಯಲ್ಲಿ ಎಸೆಯಲಾಗಿತ್ತು.

     ಈ ಪ್ರಕರಣದ ವಿಚಾರಣೆ ನಡೆಸಿದ್ದ ತುಮಕೂರು ತ್ವರಿತ ನ್ಯಾಯಾಲಯ 2013ರ ಡಿ.28ರಂದು ಆರು ಜನ ಆರೋಪಿಗಳಾದ ಕೃಷ್ಣಪ್ಪ, ಶಿವಣ್ಣ, ಪುರುಷೋತ್ತಮ, ಮಂಜುನಾಥ, ರೋಷನ್ ಮತ್ತು ಮನು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಶಿಕ್ಷೆ ರದ್ದು ಕೋರಿ ಅಪರಾಧಿಗಳು ಹೈಕೋರ್ಟ್‍ನಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಅದನ್ನು ನ್ಯಾಯಪೀಠ ಮಾನ್ಯ ಮಾಡಿದೆ.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link