ತುಮಕೂರು:
ತುಮಕೂರು ವಿಶ್ವವಿದ್ಯಾನಿಲಯದ ವಿಶ್ವೇಶ್ವರಯ್ಯ ಆಡಿಟೋರಿಯಂನಲ್ಲಿ ಅಚರ್ಡ್ ಮದ್ಯವರ್ಜನ ಮತ್ತು ಸಮಗ್ರ ಪುನರ್ವಸತಿ ಕೇಂದ್ರ ತುಮಕೂರು ಹಾಗೂ ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಸದೃಢ ಆರೋಗ್ಯಕ್ಕಾಗಿ ವ್ಯವನಮುಕ್ತ ಸಮಾಜ ಯುವ ಅಭಿಯಾನದ ಅಡಿಯಲ್ಲಿ ಕರ್ನಾಟಕ ಬೆಟಾಲಿಯನ್-2 ಎನ್.ಸಿ.ಸಿ. ವಿಭಾಗದಲ್ಲಿ ಭಾಗವಹಿಸಿದ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 250 ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರದಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅಚರ್ಡ್ ಕೇಂದ್ರದ ಹಿರಿಯ ಸಮಾಲೋಚಕರಾದ ವೈ.ಕೆ.ಸುಬ್ಬಕೃಷ್ಣ ಅವರು ಪವರ್ ಪಾಯಿಂಟ್ ಪ್ರಾಜೆಕ್ಟರ್ ಮೂಲಕ ಮಾದಕ ವಸ್ತುಗಳಿಂದ ಯುವ ಜನತೆಯ ಮೇಲಾಗುವ ದುಷ್ಪರಿಣಾಮಗಳು ಮತ್ತು ದೇಶದ ಪ್ರಗತಿಯಲ್ಲಿ ಯುವಕರ ಪಾತ್ರದ ಬಗ್ಗೆ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಸಂವಾದವನ್ನು ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೆ. ಕರ್ನಲ್ ವರುಣ್ ಲೂಥರ್, ಕಮಾಂಡಿಂಗ್ ಆಫೀಸರ್, ಕರ್ನಾಟಕ ಬೆಟಾಲಿಯನ್-2, ಎನ್.ಸಿ.ಸಿ. ಬೆಂಗಳೂರು ಇವರು ಮಾತನಾಡಿ ಕ್ರೀಡಾ ವಿಭಾಗದಲ್ಲಿ ಮಾದಕ ವಸ್ತುಗಳನ್ನು ಬಳಸಿ ಅನರ್ಹರಾದ ಕ್ರೀಡಾಪಟುಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಲೆ. ಕರ್ನಲ್ ಎಸ್.ಬಿ.ಚೆಟ್ರಿ, ಅಡ್ಮಿನಿಸ್ಟೇಟಿವ್ ಆಫೀಸರ್, ಸಹಾಯಕ ಎನ್.ಸಿ.ಸಿ. ಅಧಿಕಾರಿಗಳು, ಎನ್.ಸಿ.ಸಿ. ಕಛೇರಿ ಸಿಬ್ಬಂದಿ ವರ್ಗದವರು, ಅಚರ್ಡ್ ಕೇಂದ್ರ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಚ್.ಜಿ.ಸದಾಶಿವಯ್ಯ, ಅಚರ್ಡ್ ಸಮಾಲೋಚಕರಾದ ವಿ.ಮುತ್ತುರಾಯಪ್ಪ, ತುಮಕೂರು ವಿ.ವಿ. ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅತಿಥಿ ಉಪನ್ಯಾಸಕ ಶಶಿಕಾಂತರಾವ್ ಮತ್ತು ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.