ಚಳ್ಳಕೆರೆ
ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಮಳೆ ಸಂಪೂರ್ಣವಾಗಿ ವಿಫಲವಾಗಿ ರೈತರೂ ಸೇರಿದಂತೆ ಎಲ್ಲಾ ಜನರು ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ದಯಾಮಯನಾದ ಶ್ರೀರಾಘವೇಂದ್ರಸ್ವಾಮಿ ಉತ್ತಮ ಮಳೆ ನೀಡಿ ಎಲ್ಲರ ಬದುಕಿನಲ್ಲೂ ಹೊಸ ಬರವಸೆಯನ್ನು ಮೂಡಿಸಲಿ ಎಂದು ಶ್ರೀರಾಘವೇಂದ್ರರವರನ್ನು ಪ್ರಾರ್ಥಿಸಿರುವುದಾಗಿ ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಟಿ.ಎಸ್.ಗುಂಡೂರಾವ್ ತಿಳಿಸಿದರು.
ಅವರು ಮಂಗಳವಾರ ಇಲ್ಲಿನ ಶ್ರೀರಾಮಮಂದಿರದಲ್ಲಿ ತಾಲ್ಲೂಕು ಬ್ರಾಹ್ಮಣ ಸಂಘ ಹಮ್ಮಿಕೊಂಡಿದ್ದ 347ನೇ ಆರಾಧನಾ ಮಹೋತ್ಸವದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಪ್ರತಿನಿತ್ಯ ನಾವು ದೇವರನ್ನು ಪ್ರಾರ್ಥಿಸುವುದು ಉತ್ತಮ ಜೀವನ ಹಾಗೂ ಆರೋಗ್ಯವನ್ನು ನೀಡುವುದಕ್ಕಾಗಿ ಆದರೆ, ಪ್ರತಿಯೊಬ್ಬರ ಬದುಕಿಗೂ ಆಸರೆಯಾಗುವ ವರುಣ ದೇವ ಮಾತ್ರ ಈ ಜನರ ಮೇಲೆ ಕರುಣೆ ತೋರಿಲ್ಲ. ಅದ್ದರಿಂದ ಹಲವಾರು ಪವಾಡಗಳ ಮೂಲಕ ಭಕ್ತರ ಸಂಕಷ್ಟಗಳಿಗೆ ನೆರವಾದ ಶ್ರೀರಾಘವೇಂದ್ರ ಸ್ವಾಮಿಗಳು ಇಲ್ಲಿನ ಭಕ್ತರಿಗೂ ಸಹ ಉತ್ತಮ ಭವಿಷ್ಯಕ್ಕಾಗಿ ಆಶೀರ್ವಾದಿಸಬೇಕೆಂದರು.
ಉಪನ್ಯಾಸ ನೀಡಿದ ಖ್ಯಾತ ಜೋತಿಷಿ ಹಾಗೂ ಸಂಘದ ನಿರ್ದೇಶಕ ಅನಂತರಾಮ್ ಗೌತಮ್ ರಾಘವೇಂದ್ರಸ್ವಾಮಿಗಳ ಅನೇಕ ಅವತಾರಗಳ ಬಗ್ಗೆ ಮಾಹಿತಿ ನೀಡಿದರು. ಗುರು ರಾಘವೇಂದ್ರರರು ಕೇವಲ ವ್ಯಕ್ತಿಯಾಗಿ ಬೆಳೆಯದೆ ಈ ನಾಡನ್ನು ಕಟ್ಟುವ ಸರ್ವಶಕ್ತಿಯ ರೂಪವಾಗಿ ಜನರ ಸಂಕಷ್ಟಗಳನ್ನು ಈಡೇರಿಸುತ್ತಾರೆ ಎಂದರು. ಎಲ್ಲಿ ಬಡತನವಿರುತ್ತದೆಯೋ ಅಲ್ಲಿ ಭಕ್ತಿ ಉದಯವಾಗುತ್ತದೆ. ಎಲ್ಲಿ ಭಕ್ತಿ ಉದಯವಾಗುತ್ತದೆಯೋ ಅಲ್ಲಿ ದೈವತ್ವದ ಸಾಕ್ಷಾತ್ಕಾರವಾಗುತ್ತದೆ. ಈ ದೈವತ್ವವೇ ನಮ್ಮ ಬದುಕಿನ ಸಂಕಷ್ಟಗಳನ್ನು ಎದುರಿಸಲು ಶಕ್ತಿ ನೀಡುತ್ತದೆ. ಗುರು ರಾಘವೇಂದ್ರರು ಬಾಲ್ಯದಿಂದಲೇ ಸಂಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿದ್ದರು. ಅವರು ನಂಬಿದ ಭಕ್ತರಿಗೆ ಸದಾಕಾಲ ಆಶ್ರಯದಾತದಾಗಿದ್ದರು. ಅವರ ದೈತ್ವದ ಶಕ್ತಿ ಇಂದಿಗೂ ನಮಗೆ ಉತ್ತಮ ಶ್ರೇಯಸ್ಸಿನತ್ತ ಸಾಗಲು ಪ್ರೇರಣಾ ಶಕ್ತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎಂ.ವಾಸುದೇವರಾವ್, ಉಪಾಧ್ಯಕ್ಷ ಎಚ್.ವಿ.ಯೋಗೀಶ್, ಪ್ರಧಾನ ಕಾರ್ಯದರ್ಶಿ ಎಚ್.ಡಿ.ಶಂಕರನಾರಾಯಣ, ಖಜಾಂಚಿ ಪ್ರಕಾಶ್, ನಿರ್ದೇಶಕರಾದ ಶ್ರೀಧರ, ಎನ್.ಗೋಪಿನಾಥ, ಎಂ.ಸತ್ಯನಾರಾಯಣ, ಪ್ರಕಾಶ್, ಮಹಿಳಾ ಘಟಕದ ಅಧ್ಯಕ್ಷ ಸೀತಾಲಕ್ಷ್ಮಿವಾದಿರಾಜ್, ಶಾಂತಮ್ಮ, ಶೈಲಜಾ, ಸಿ.ಎಸ್.ಗೋಪಿನಾಥ, ಅನಂತಪ್ರಸಾದ್, ಮುರಳೀಧರ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
