ಎಸ್ಸಿ-ಎಸ್ಟಿ ಹಾಸ್ಟೇಲ್‍ಗಳಲ್ಲಿ ಇತರರ ಪ್ರವೇಶಕ್ಕೂ ರಾಜ್ಯ ಸರ್ಕಾರ ಆದೇಶ ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಬೆಳೆಸಲು ಹೊಸ ಹೆಜ್ಜೆ

ದಾವಣಗೆರೆ:                                                                                                             –    ವಿನಾಯಕ ಪೂಜಾರ್ 

      ಸಮಾಜದಲ್ಲಿ ಮನೆ ಮಾಡಿರುವ ಜಾತಿವಾದಿ ಮನಸ್ಥಿತಿಯನ್ನು ನಿರ್ಮೂಲನೆ ಮಾಡಿ, ಜಾತ್ಯಾತೀತ ಭಾವನೆ ಬೆಳೆಸಿ, ಸಾಮರಸ್ಯದ ವಾತಾವರಣ ಸೃಷ್ಟಿಸಲು ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಲಿಕ್ಕಾಗಿ ಎಸ್ಸಿ-ಎಸ್ಟಿ ಹಾಸ್ಟೇಲ್‍ಗಳಲ್ಲಿ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲು ಮುಂದಾಗಿದೆ.

      ಹೌದು… ಇಷ್ಟು ವರ್ಷಗಳ ಕಾಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಮಾತ್ರ ಸಿಮೀತವಾಗಿದ್ದ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ನಡೆಯುತ್ತಿರುವ ಎಸ್ಸಿ-ಎಸ್ಟಿ ಹಾಸ್ಟೇಲ್‍ಗಳಲ್ಲಿ 2018-19ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಪ್ರವೇಶ ನೀಡಬೇಕು ಹಾಗೂ ಅದರಂತೆ ಹಿಂದುಳಿದ ವರ್ಗಗಳ ಹಾಸ್ಟೆಲ್‍ಗಳಲ್ಲಿ ಶೇ.25 ರಷ್ಟು ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿ ನಿಲಯಗಳಲ್ಲಿ ಶೇ.10 ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮೀಸಲಿಡುವುದನ್ನು ಕಡ್ಡಾಯ ಗೊಳಿಸಿ ಸರ್ಕಾರ ಸುತ್ತೋಲೆ ಹೊರಡಿಸಿದೆ.

      ವಿದ್ಯಾರ್ಥಿ ದೆಸೆಯಿಂದಲೇ ಮಕ್ಕಳಲ್ಲಿ ಜಾತ್ಯಾತೀತ ವ್ಯಕ್ತಿತ್ವ ರೂಪಿಸುವ ಮೂಲಕ ಸೌಹಾರ್ದಯುತ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ರಾಜ್ಯ ಸರ್ಕಾರ ಎಲ್ಲಾ ವರ್ಗದ ವಿದ್ಯಾರ್ಥಿಗಳನ್ನು ಒಂದೇ ಹಾಸ್ಟೇಲ್‍ನಲ್ಲಿ ಇಟ್ಟು, ಪರಸ್ಪರರ ಮಧ್ಯೆ ಸಾಮರಸ್ಯ ಬೆಳೆಸುವ ಮೂಲಕ ಸಂವಿಧಾನದ ಆಶಯವಾಗಿರುವ ಜಾತ್ಯಾತೀತ ಸಮಾಜ ನಿರ್ಮಾಣಕ್ಕಾಗಿ ಹೆಜ್ಜೆ ಇಟ್ಟಿದೆ.

      ಸರ್ಕಾರದ ಆದೇಶದಂತೆ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಎಸ್ಸಿ, ಎಸ್‍ಟಿ ಹಾಸ್ಟೇಲ್‍ಗಳಲ್ಲಿ ಆಯಾ ಹಾಸ್ಟೇಲ್‍ಗಳ ಸ್ಥಾನಗಳ ಸಾಮಥ್ರ್ಯಕ್ಕೆ ಅನುಗುಣವಾಗಿ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ಶೇ.3, ಪ್ರವರ್ಗ-2ಎ ವಿದ್ಯಾರ್ಥಿಗಳಿಗೆ ಶೇ.12 ರಷ್ಟು, ಪ್ರವರ್ಗ-2ಬಿ ವಿದ್ಯಾರ್ಥಿಗಳಿಗೆ ಶೇ.3, ಪ್ರವರ್ಗ-3ಎಗೆ ಶೇ.3 ಹಾಗೂ ಪ್ರವರ್ಗ-3ಬಿಗೆ ಶೇ.4 ರಷ್ಟು ಹೀಗೆ ಲಿಂಗಾಯತ, ಕುರುಬ, ಉಪ್ಪಾರ, ಮಡಿವಾಳ, ಈಡಿಗ, ಒಕ್ಕಲಿಗ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲಾ ಜಾತಿ-ಮತಗಳ ವಿದ್ಯಾರ್ಥಿಗಳಿಗೆ ಒಂದೇ ಸೂರಿನಡಿ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಮೂಡಿಸಲು ಸರ್ಕಾರ ಮುಂದಾಗಿದೆ.

      ಅದರಂತೆಯೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಶೇ.18 ರಷ್ಟು ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ.7 ರಷ್ಟು ಹೀಗೆ ಶೇ.25 ರಷ್ಟು ಸ್ಥಾನಗಳನ್ನು ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತ ಹಾಸ್ಟೇಲ್‍ಗಳಲ್ಲಿ ಎಸ್‍ಸಿಗೆ ಶೇ.7 ಹಾಗೂ ಎಸ್‍ಟಿಗೆ ಶೇ.3 ಸೇರಿ ಶೇ.10 ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಮೀಸಲಿಡಬೇಕಾಗಿದೆ.

      ಜಿಲ್ಲೆಯಲ್ಲಿ ಸುಮಾರು 35 ಎಸ್ಸಿ, ಎಸ್ಟಿ ಹಾಸ್ಟೇಲ್‍ಗಳಿದ್ದು, ಇವುಗಳಲ್ಲಿ ಸುಮಾರು 5 ಸಾವಿರ ವಿದ್ಯಾರ್ಥಿಗಳು ಹಾಸ್ಟೇಲ್ ಸೌಲಭ್ಯ ಪಡೆದಿದ್ದು, ಈ ಸಂಖ್ಯೆಗೆ ಅನುಗುಣವಾಗಿ ಶೇ.25 ರಷ್ಟು ಸ್ಥಾನಗಳನ್ನು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಮೀಸಲಿಟ್ಟರೆ, ಸುಮಾರು 1,250 ಜನ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಪ್ರವೇಶ ಪಡೆಯಲಿದ್ದಾರೆ.

      ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿಯಲ್ಲಿ ಬೆರೆಯುವುದರಿಂದ ಪರಸ್ಪರ ಸಾಮರಸ್ಯ ಬೆಳೆದು, ಸೌಹಾರ್ದಯುತ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದ್ದು, ತಕ್ಷಣವೇ ಈ ಆದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಅನುಷ್ಠಾನಗೊಳಿಸಬೇಕಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.

 
  ಮಕ್ಕಳಲ್ಲಿ ಸ್ಪರ್ಧಾತ್ಮ ಮನೋಭಾವದ ಜೊತೆಗೆ ಎಲ್ಲಾ ವರ್ಗದ ಮಕ್ಕಳಲ್ಲೂ ಭಾವೈಕ್ಯತೆ ಬೆಳೆಸಲು ಸರ್ಕಾರದ ಹೊಸ ನಿಯಮ ಸಹಕಾರಿಯಾಗಿದೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೇಲ್‍ಗಳ ಸಂಖ್ಯೆ ಮತ್ತು ಸಾಮಥ್ರ್ಯವನ್ನು ಹೆಚ್ಚಿಸಬೇಕು ಹಾಗೂ ಹಾಸ್ಟೇಲ್ ಪ್ರವೇಶ ಬಯಸಿ ಅರ್ಜಿ ಸಲ್ಲಿಸುವ ಎಲ್ಲಾ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೂ ಹಾಸ್ಟೇಲ್ ಸೌಲಭ್ಯ ಕಲ್ಪಿಸಬೇಕು.
                                                                              -ಹೆಗ್ಗೆರೆ ರಂಗಪ್ಪ, ಡಿ-ಎಸ್4 ಜಿಲ್ಲಾಧ್ಯಕ್ಷ.
 
 ಎಸ್ಸಿ-ಎಸ್ಟಿ ಹಾಸ್ಟೇಲ್‍ಗಳಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಶೇ.25 ರಷ್ಟು ಪ್ರವೇಶ ನೀಡುವ ಆದೇಶ ಮೊನ್ನೆ ತಾನೆ ಬಂದಿದೆ. ಆದರೆ, ಈಗಾಗಲೇ ಎಲ್ಲಾ ಹಾಸ್ಟೇಲ್‍ಗಳಲ್ಲಿ ಪ್ರವೇಶ ಪ್ರಕ್ರಿಯೆ ಮುಗಿದಿದ್ದು, ಎಲ್ಲಾ ಸ್ಥಾನಗಳು ಭರ್ತಿಯಾಗಿವೆ. ಆದ್ದರಿಂದ ಬರುವ ಶೈಕ್ಷಣಿಕ ವರ್ಷದಿಂದ ಈ ಆದೇಶವನ್ನು ಅನುಷ್ಠಾನಗೊಳಿಸಲಾಗುವುದು.
                                                                     
                                                                      -ಶಿವಾನಂದ ಕುಂಬಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ.

 

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link