ದಾವಣಗೆರೆ:
ಹರಿಹರ ತಾಲೂಕಿನ ಮಲೇಬೆನ್ನೂರು ಗ್ರಾಮದ ಶ್ರೀಏಕನಾಥೇಶ್ವರಿದೇವಿ, ಶ್ರೀಕೋಡಿ ಮಾರೇಶ್ವರಿದೇವಿ, ಶ್ರೀಹಟ್ಟಿ ದುರ್ಗಾಂಭಿಕಾದೇವಿ ಅಮ್ಮನವರುಗಳ ಜಾತ್ರಾ ಮಹೋತ್ಸವ ಏ.9ರಂದು ನಡೆಯಲಿದೆ.
ಜಾತ್ರಾ ಮಹೋತ್ಸವದ ಪ್ರಯುಕ್ತ ಏ.6ರಂದು ರಾತ್ರಿ 9 ಗಂಟೆಗೆ ಶ್ರೀಮಹಾಗಣಪತಿ ಪೂಜೆಯೊಂದಿಗೆ ಕಂಕಣ ಧಾರಣೆ, ಬಲಿ, ನೈವೇದ್ಯ, ಕುಂಕುಮಾರ್ಚನೆ, ಪ್ರಸಾದ ವಿನಿಯೋಗ ನಡೆಯಲಿದೆ. ಏ.7ರಿಂದ 9ರ ವರೆಗೆ ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಸಣ್ಣ ಉತ್ಸವ ಬಲಿದಾನ ಸಕಲ ವಾದ್ಯಗಳೊಂದಿಗೆ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ ಜರುಗಲಿದೆ.
ಏ.9ರಂದು ರಾತ್ರಿ 10 ಗಂಟೆಗೆ ಗ್ರಾಮದೇವತೆಗಳಾದ ಶ್ರೀಏಕನಾಥೇಶ್ವರಿ ರಥವು, ಶ್ರೀಕೋಡಿ ಮಾರೇಶ್ವರಿದೇವಿ ಜೊತೆಗೂಡಿ ಊರಿನ ಒಳಗಿರುವ ದೇವಸ್ಥಾನದಿಂದ ವಿದ್ಯುತ್ ದೀಪಾಲಂಕಾರದೊಂದಿಗೆ ಡೊಳ್ಳು, ವಾದ್ಯ, ಬಾಜಾ-ಭಜಂತ್ರಿ ಮತ್ತು ಜಾಂಜ್ ಮೇಳಗಳ ಜೊತೆಗೆ ಬಾಣ ತಮಾಷೆಮದ್ದಿನ ಪ್ರದರ್ಶನದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಊರ ಹೊರಗಿನ ದೇವಸ್ಥಾನಕ್ಕೆ ಹೋಗಿ ನೆಲೆಗೊಳ್ಳಲಿವೆ.
ಏ.10ರಂದು ಬೆಳಗಿನಜಾವ ಶ್ರೀಹಟ್ಟಿ ದುರ್ಗಮ್ಮ ದೇವಸ್ಥಾನದಿಂದ ಘಟೆಬಂದ ನಂತರ ಹಿಟ್ಟಿನ ಕೋಣನ ಬಲಿ ನಂತರ ದೇವಿಗೆ ಪೂಜೆ ಮಂಗಳಾರತಿ, ಬೇವಿನ ಉಡುಗೆ, ಬಾಯಿ ಬೀಗ ಇತರೆ ಹರಕೆ ಸೇವೆಗಳು ನಡೆಯಲಿವೆ. ಬೆಳಿಗ್ಗೆ 10 ಗಂಟೆಗೆ ಚಿನ್ನ-ಬಣ್ಣ ಒಪ್ಪಿಸಿ ಅಮ್ಮನವರುಗಳಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ನಂತರ ಹಾಸ್ಯ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.
ಈ ಜಾತ್ರಾ ಮಹೋತ್ಸವದಲ್ಲಿ ಸುಮಾರು 80 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆಂದು ಶ್ರೀಏಕನಾಥೇಶ್ವರಿ ದೇವಸ್ಥಾನ ಸಮಿತಿಯ ತಹಶೀಲ್ದಾರ್ ಮಲ್ಲಿಕಾರ್ಜುನ, ಟಿ.ಬಸಪ್ಪ, ಕೆ.ಜಿ.ಪರಮೇಶ್ವರಪ್ಪ, ನಿಂಗಪ್ಪ, ಪಿ.ಪ್ರಕಾಶ್, ಪಿ.ಕೊಟ್ರೇಶಪ್ಪ, ಬಸವರಾಜಪ್ಪ, ಎ.ಕೆ.ನರಸಿಂಹಪ್ಪ, ವೈ.ವಸಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/05_dvg_02_2.gif)