ಶಿರಾ:
ಹೇಮಾವತಿ ನೀರು ಶಿರಾ ದೊಡ್ಡಕೆರೆ ತುಂಬುವವರೆಗೂ ಹರಿಯಲಿದ್ದು ಶಿರಾ ನಗರದ ಜನ ಆತಂಕ ಪಡುವ ಅವಶ್ಯಕತೆ ಇಲ್ಲ. ಕಳ್ಳಬೆಳ್ಳ ಕರೆಯು ಕೂಡಾ ಭರ್ತಿಯಾಗುತ್ತಿದ್ದು ಈ ಭಾಗದ ಯಾವುದೇ ರೈತರು ಆತಂಕಕ್ಕೆ ಒಳಗಾಗಬಾರದು ಎಂದು ಶಾಸಕ ಬಿ.ಸತ್ಯನಾರಾಯಣ ತಿಳಿಸಿದರು.
ತಾಲೂಕಿನ ಐತಿಹಾಸಿಕ ಪ್ರಸಿದ್ದ ಶ್ರೀಸುಕ್ಷೇತ್ರ ಶ್ರೀಗುಂಡಾಜನೇಯಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನಡೆದ ಶ್ರೀಗುಂಡಾ ಜನೇಯ ಸ್ವಾಮಿ ಮೂಲ ವಿಗ್ರಹ ಪ್ರತಿಷ್ಠಾಪನೆ ಹಾಗೂ ಆರತಿ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.ಪೈಪ್ ಲೈನ್ ಮೂಲಕ ನೀರು ಬರುವಂತ ಸ್ಥಿತಿ ಇದ್ದಿದ್ದರೆ ಇಷ್ಟೊತ್ತಿಗೆ ಶಿರಾ ಕೆರೆ ತುಂಬುತ್ತಿತ್ತು, ನೈಸರ್ಗಿಕ ಹಳ್ಳದ ಮೂಲಕ ಹರಿಯುವಂತ ಯಲಿಯೂರು ಸೇರಿದಂತೆ ಹಲವಾರು ಬ್ಯಾರೇಜ್ಗಳು ತುಂಬಿ ಕೊಂಡು ಬರುವುದು ತಡವಾಗುತ್ತಿದೆ. ನೀರು ತಡವಾದರೆ ಶಿರಾ ನಗರದ ಲಕ್ಷಾಂತರ ಜನರ ಕುಡಿಯುವ ನೀರಿನ ಬವಣೆ ಹೆಚ್ಚಾಗುತ್ತದೆ ಎಂಬ ಉದ್ದೇಶದಿಂದ ಕಳ್ಳಂಬೆಳ್ಳ, ಯಲಿಯೂರು ಬ್ಯಾರೇಜ್ ಭಾಗದ ರೈತರಿಗೆ ವಸ್ತುಸ್ಥಿತಿ ಮನವರಿಕೆ ಮಾಡಿ ಕೊಟ್ಟಿದ್ದು ಸಹಕರಿಸುವಂತೆ ಮನವಿ ಮಾಡಿದ ಕಾರಣ ಗೇಟ್ ಎತ್ತಿ ನೀರು ಬಿಡಲು ಒಪ್ಪಿದ್ದು, ಸೆ.17 ರಂದು ನೀರು ಶಿರಾ ದೊಡ್ಡ ಕೆರೆ ಪ್ರವೇಶ ಮಾಡಲಿವೆ, ಕೆರೆ ತುಂಬುವವರೆಗೂ ನೀರು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಹಾಗೆಯೇ ಮದಲೂರು ಕೆರೆಗೂ ನೀರು ಹರಿಸಲು ಶ್ರಮಿಸಲಾಗುವುದು ಎಂದರು.
ಗ್ರಾಮೀಣ ಪ್ರದೇಶದ ಜನರ ಭಾಂದವ್ಯ ಮತ್ತಷ್ಟು ಗಟ್ಟಿಗೊಳ್ಳಲು ಇಂತಹ ದೇವತ ಉತ್ಸವಗಳು ಸಮ್ಮಿಲನ ವಾತಾವರಣ ಕಲ್ಪಿಸಿವೆ. ಭಕ್ತಿ ಶ್ರದ್ಧೆ, ಶುದ್ಧ ಮನಸ್ಸಿನಿಂದ ಆರಾಧನೆ ಮಾಡಿದರೆ ಶ್ರೀಗುಂಡಾಂಜನೇಯ ಸ್ವಾಮಿ ಇಷ್ಟಾರ್ಥ ನೆರವೇರಿಸಲಿದ್ದಾನೆ. ಉದ್ಭವ ಮೂರ್ತಿಯಾದ ಶ್ರೀಗುಂಡಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಅಪಾರ ಭಕ್ತ ಸಮೂಹವಿದ್ದು, ಇಂತಹ ದೇವಸ್ಥಾನದ ಆಭಿವೃದ್ಧಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ನೇತೃತ್ವದ ಸರ್ಕಾರದಲ್ಲಿ ಹೆಚ್ಚು ಅನುದಾನ ಕೊಡಿಸುವುದಾಗಿ ಭಕ್ತರಿಗೆ ಭರವಸೆ ನೀಡಿದರು. ಜಿಲ್ಲೆಯಲ್ಲಿ ಮಳೆ ಬಾರದ ಕಾರಣ ಬರದಿಂದ ರೈತ ಮತ್ತು ಜನ ಸಾಮಾನ್ಯರು ಬಳಲು ವಂತ ಪರಿಸ್ಥಿತಿ ನಿರ್ಮಾಣವಾಗಿದ್ದು, ವರುಣ ಕೃಪೆ ತೊರಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಗುಂಡಪ್ಪಚಿಕ್ಕೇನಹಳ್ಳಿ, ಶಿವನಯ್ಯನಪಾಳ್ಯ, ಬ್ರಹ್ಮಸಂದ್ರ ಸೇರಿದಂತೆ ಹತ್ತಾರು ಗ್ರಾಮಗಳ ಸಹಸ್ರಾರು ಮಹಿಳೆಯರು ಶ್ರೀಗುಂಡಾಂಜನೇಯ ಸ್ವಾಮಿಗೆ ಆರತಿ ಉತ್ಸವ ನಡೆಸುವ ಮೂಲಕ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿದರು.ಹನುಮಂತರಾಜು, ನಿಡಗಟ್ಟೆ ಚಂದ್ರಶೇಖರ್, ಸೋಮಣ್ಣ ಸೇರಿದಂತೆ ಹಲವಾರು ಗ್ರಾಮಗಳ ಮುಖಂಡರು ಪಾಲ್ಗೊಂಡಿದ್ದರು.
