ಕಾಂಗ್ರೆಸ್‍ನಿಂದ ಗೊಪ್ಪೆ ಮಂಜುನಾಥ್‍ಗೆ ಗೇಟ್‍ಪಾಸ್

ಚಿತ್ರದುರ್ಗ;

              ನಗರಸಭೆ ಮಾಜಿ ಅಧ್ಯಕ್ಷ ಗೊಪ್ಪೆ ಮಂಜುನಾಥ್ ಅವರನ್ನು ತಕ್ಷಣವೇ ಉಚ್ಚಾಟಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ತಾಕೀತು ಮಾಡಿದ್ದಾರೆ

             ಶುಕ್ರವಾರ ನಗರಸಭೆ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ಪಕ್ಷಕ್ಕೆ ದ್ರೋಹ ಮಾಡಿರುವ ಯಾರೇ ಆಗಲಿ ಮುಲಾಜಿಲ್ಲದೆ ಉಚ್ಚಾಟನೆ ಮಾಡಬೇಕು ಎಂದು ಹೇಳಿದರು
ಗೊಪ್ಪೆ ಮಂಜುನಾಥ್ ಅವರು 14ನೇ ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದಿಸಿದ್ದಾರೆ.

            ಇಲ್ಲಿ ಮೊದಲಿಗೆ ರಂಜಿತ್ ಎನ್ನುವರಿಗೆ ಪಕ್ಷದ ಭಿ ಫಾರಂ ಕೊಡಲಾಗಿತ್ತು. ತರುವಾಯ ಪಕ್ಷದ ಮುಖಂಡರಿಂದ ಒತ್ತಡ ತಂದು ತಮ್ಮ ಪತ್ನಿಗೆ `ಸಿ’ಫಾರಂ ಕೊಡಿಸಿದ್ದರು. ಕೊನೆಗೆ ಕಾಂಗ್ರೆಸ್‍ನ ಅಭ್ಯರ್ಥಿಯಾಗಿದ್ದ ತಮ್ಮ ಪತ್ನಿಯ ನಾಮಪತ್ರವನ್ನೇ ವಾಪಸ್ಸು ತೆಗೆಸಿ ತಾವೇ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದು, ಈ ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿದ ಸಚಿವರು, ಎರಡು-ಮೂರು ದಿನಗಳ ಒಳಗಾಗಿ ಪಕ್ಷಕ್ಕೆ ವಂಚನೆ ಮಾಡಿದ ಕಾರಣಕ್ಕಾಗಿ ಗೊಪ್ಪೆ ಮಂಜುನಾಥ್ ಅವರನ್ನು ಉಚ್ಚಾಟನೆ ಮಾಡಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

            ಇದೂ ಅಲ್ಲದೆ 11ನೇ ವಾರ್ಡಿನಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ದ ತಮ್ಮ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಪಕ್ಷದ ತತ್ವ ಮತ್ತು ಸಿದ್ದಾಂತಗಳಿಗೆ ವಿರುದ್ದವಾಗಿ ನಡೆದುಕೊಳ್ಳುವ ಇಂತಹ ವ್ಯಕ್ತಿಗಳು ನಮಗೆ ಬೇಕಾಗಿಲ್ಲ. ಯಾವುದೇ ಮುಲಾಜಿಲ್ಲದೆ ತುರ್ತಾಗಿ ಈ ಸಂಬಂಧ ಕ್ರಮ ಕೈಗೊಂಡು ಸ್ಪಷ್ಟ ಸಂದೇಶ ರವಾನಿಸಬೇಕಿದೆ ಎಂದು ಹೇಳಿದರು.

             ಇನ್ನು ಮುಂದೆ ಈ ಜಿಲ್ಲೆಯಲ್ಲಿ ಇಂತಹ ಪಕ್ಷ ವಿರೊಧಿಗಳ ಆಟ ನಡೆಯಲು ಬಿಡುವುದಿಲ್ಲ. ನಮ್ಮ ಪಕ್ಷದ ಮುಖಂಡರ ನಡವಳಿಕೆಯಿಂದಾಗಿಯೇ ಕಾಂಗ್ರೆಸ್ ಸೋಲುತ್ತಿದೆ. ಜಿಲ್ಲೆಯ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ಬಳಿ ವರದಿ ಇದೆ. ಯಾರು ಪಕ್ಷದ ವಿರುದ್ದ ನಡೆದುಕೊಳ್ಳುತ್ತಿದ್ದಾರೆಂಬುದರ ಬಗ್ಗೆಯೂ ಇನ್ನಷ್ಟು ಮಾಹಿತಿ ಪಡೆಯುವುದಾಗಿ ಹೇಳಿದರು.

             ಚುನಾವಣೆಯಲ್ಲಿ ಕಾರ್ಯಕರ್ತರು ನಿಷ್ಟೆಯಿಂದ ಕೆಲಸ ಮಾಡಬೇಕು. ಕೆಲವು ವಾರ್ಡ್‍ಗಳಲ್ಲಿ ಬೇರೆ ಪಕ್ಷಗಳ ಜೊತೆ ಕೆಲವರು ಶಾಮೀಲಾಗಿರುವ ಬಗ್ಗೆ ಮಾಹಿತಿ ಇದ್ದು, ಅಂತಹವರನ್ನು ಗುರ್ತಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಸಚಿವರು ಜಿಲ್ಲಾಧ್ಯಕ್ಷರಿಗೆ ಸೂಚಿಸಿದರು
ಈ ಬಾರಿ ಚಿತ್ರದುರ್ಗ ನಗರಸಭೆಯ ಆಡಳಿತ ಕಾಂಗ್ರೆಸ್ ವಶಕ್ಕೆ ಪಡೆದುಕೊಳ್ಳಬೇಕಾಗಿದ್ದು, ಎಲ್ಲಾ ಮುಖಂಡರು ನಮ್ಮ ಅಭ್ಯರ್ಥಿಗಳ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಬೇಕು. ಪಕ್ಷದ ಹಿತಾದೃಷ್ಟಿಯಿಂದ ಎಲ್ಲರೂ ಭಿನ್ನಾಭಿಪ್ರಾಯ ತ್ಯಜಿಸಿ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದರು.

             ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ನಗರಸಭೆಯ ಚುನಾವಣೆಯಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡಿದಾಗ ಮಾತ್ರ ಅಧಿಕಾರ ಹಿಡಿಯಲು ಸಾಧ್ಯವಾಗುತ್ತದೆ. ಪಕ್ಷದಲ್ಲಿ ನಿಷ್ಠೆಯಿಂದ ಇರುವವರಿಗೆ ಅವಕಾಶ ಸಿಕ್ಕೇ ಸಿಗುತ್ತದೆ. ಅಲ್ಲಿಯವರೆಗೂ ತಾಳ್ಮೆ ಮುಖ್ಯ ಎಂದರು.

              ಕಾಂಗ್ರೆಸ್ ಮುಖಂಡ ಹನುಮಲಿ ಷಣ್ಮುಖಪ್ಪ ಮಾತನಾಡಿ, ಚುನಾವಣೆಯಲ್ಲಿ ಪಕ್ಷದ ಎಲ್ಲಾ ನಾಯಕರು ಸೇರಿ ಅರ್ಹರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಟಿಕೆಟ್ ಸಿಗದಿದ್ದರೆ ಮುಂದಿನ ಅವಕಾಶಾಕ್ಕಾಗಿ ಕಾಯಬೇಕು. ಇಲ್ಲಿ ನಮ್ಮ ಪಕ್ಷದ ಶಾಸಕರಿಲ್ಲ, ನಗರದ ಅಭಿವೃದ್ದಿಯ ದೃಷ್ಠಿಯಿಂದ ಎಲ್ಲರೂ ಗೆಲುವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.

              ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್ ಮಾತನಾಡಿ, ಚುನಾವಣೆಯಲ್ಲಿ ಎಲ್ಲಾ ಜಾತಿಗೂ ಆದ್ಯತೆ ಕೊಟ್ಟಿದ್ದೇವೆ. ಸಾಧ್ಯವಾದಷ್ಟು ಅರ್ಹರಿಗೆ ಟಿಕೆಟ್ ಕೊಡಲಾಗಿದೆ. ವಿದ್ಯಾವಂತ ಯುವಕರಿಗೂ ಮನ್ನಣೆ ನೀಡಲಾಗಿದೆ ಎಂದು ಹೇಳಿದರು.

               ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಟಿ.ರಘುಮೂರ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಂ.ಅಜ್ಜಪ್ಪ, ಮುಖಂಡರಾದ ಮಹಡಿ ಶಿವಮೂರ್ತಿ, ನೇತ, ಡಿ.ಎನ್.ಮೈಲಾರಪ್ಪ ಇನ್ನಿತರರು ಸಭೆಯಲ್ಲಿ ಹಾಜರಿದ್ದರು.

Recent Articles

spot_img

Related Stories

Share via
Copy link