ದಾವಣಗೆರೆ:
ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮನ ನೆಲೆವೀಡಾದ ಕಿತ್ತೂರನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ಒತ್ತಾಯಿಸಿದ್ದಾರೆ.
ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಜಿಲ್ಲಾ ವೀರಶೈವ ಪಂಚಮಸಾಲಿ ಸಮಾಜ ಇವುಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮರ ಜಯಂತ್ಯುತ್ಸವದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುಂಚೆಯೇ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿ ಎಲ್ಲರೆದೆಯಲ್ಲೂ ದೇಶಪ್ರೇಮದ ಕಿಚ್ಚು ಹೊತ್ತಿಸಿದ ವೀರಮಾತೆಯಾಗಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ಭದ್ರ ಬುನಾದಿ ಹಾಕಿದ ಕಿತ್ತೂರು ರಾಣಿ ಚೆನ್ನಮ್ಮರ ಖಡ್ಗ ವಿಜಯದ ಸಂಕೇತವಾಗಿದ್ದು, ಆ ಖಡ್ಗವನ್ನು ಹುಡುಕಿಸಲು ಸರ್ಕಾರ ಮುಂದಾಗಬೇಕು ಹಾಗೂ ಆಕೆಯ ನೆಲೆವೀಡಾದ ಕಿತ್ತೂರನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಪ್ರಸ್ತುತ ಜನರಿಂದ ಇತಿಹಾಸವನ್ನು ಮರೆ ಮಾಚಲಾಗುತ್ತಿದೆ. ದೇಶಕ್ಕೆ ಬೇಡವಾದ ವ್ಯಕ್ತಿಗಳ ಹಾಗೂ ಕ್ರಿಕೇಟ್ ಆಟಗಾರರ ಬಗ್ಗೆ ಪಠ್ಯಗಳಲ್ಲಿ ಸೇರಿಸಿ, ದೇಶಕ್ಕೆ ಕೊಡುಗೆ ನೀಡಿದ, ಸ್ವಾತಂತ್ರ್ಯ ತಂದುಕೊಟ್ಟ ದಾರ್ಶನಿಕರನ್ನು ಮರೆ ಮಾಚುತ್ತಿರುವುದು ಸರಿಯಲ್ಲ. ಆದ್ದರಿಂದ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ವೀರರ ಇತಿಹಾಸವನ್ನು ಪಠ್ಯಗಳಲ್ಲಿ ಕಟ್ಟಿ ಕೊಡುವ ಮೂಲಕ ಇಂದಿನ ವಿದ್ಯಾರ್ಥಿ-ಯುವಜನರಲ್ಲಿ ಅವರ ತತ್ವಾದರ್ಶ ಬಿತ್ತಿ, ದೇಶ ಪ್ರೇಮ ಬೆಳೆಸಲು ಸರ್ಕಾರ ಮುಂದಾಗಬೇಕೆಂದು ಸಲಹೆ ನೀಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಪತಿ ಹಾಗೂ ಮಗನನ್ನು ಕಳೆದುಕೊಂಡು ಎದೆಗುಂದದೆ ಬ್ರಿಟೀಷರ ವಿರುದ್ಧ ರಾಜೀರಹಿತ ಹೋರಾಟ ನಡೆಸಿದ್ದ ಚೆನ್ನಮ್ಮ ದೇಶದ ಪ್ರಪ್ರಥಮ ಹೋರಾಟಗಾರ್ತಿ ಎಂಬುದನ್ನು ಸರ್ಕಾರಿ ದಾಖಲೆಗಳಲ್ಲಿ ದಾಖಲಿಸಬೇಕು. ವಿಧಾನಸೌಧದಲ್ಲಿ ಚೆನ್ನಮ್ಮರ ಪುತ್ಥಳಿ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲ ಮಾತನಾಡಿ, ಅತ್ಯಂತ ಶೌರ್ಯ-ಧೈರ್ಯದಿಂದ ನಾಡು-ನುಡಿಗಾಗಿ ಹೋರಾಡಿದ ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮ ಇಡೀ ದೇಶಕ್ಕೆ ಪ್ರೇರಣೆಯಾದ ಹೆಣ್ಣು ಮಗಳು. ಗಂಡಿನ ರೀತಿಯಲ್ಲೇ ನಾಡು ನುಡಿಗಾಗಿ ಹೆಣ್ಣುಮಕ್ಕಳೂ ಹೋರಾಡಬಲ್ಲರೂ ಎಂಬುದನ್ನು ತೋರಿಸಿಕೊಟ್ಟ ಚೆನ್ನಮ್ಮ ಹೆಣ್ಣು ಅಬಲೆಯಲ್ಲ, ಸಬಲೆ ಎಂಬುದನ್ನು ಅಂದೇ ಸಾರಿದ್ದರು ಎಂದು ಸ್ಮರಿಸಿದರು.
ಮಹಿಳೆಯರು ತೊಟ್ಟಿಲು ತೂಗುವುದರ ಜತೆಗೆ ದೇಶವನ್ನೂ ಆಳಬಲ್ಲರು ಎಂಬುದಕ್ಕೆ ಚೆನ್ನಮ್ಮ ಕೈಗನ್ನಡಿಯಾಗಿದ್ದಾರೆ. ಕರ್ನಾಟಕದಲ್ಲಿ ಇದು ವರೆಗೂ ಮುಖ್ಯಮಂತ್ರಿಗಳ ಸ್ಥಾನ ಮಹಿಳೆಯರಿಗೆ ದೊರೆತಿಲ್ಲ. ಹೀಗಾಗಿ ಮಹಿಳೆಯರು ಮುಖ್ಯಮಂತ್ರಿ ಗಾದಿ ಪಡೆಯುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದು ಸಲಹೆ ನೀಡಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಶೌರ್ಯ, ಸಾಹಸಗಳ ಪ್ರೇರಣೆಗಳನ್ನು ಬಾಲ್ಯದಲ್ಲೇ ಮಕ್ಕಳಲ್ಲಿ ಬರುವಂತೆ ಮಾಡಲು ಸರ್ಕಾರ, ಶಾಲಾ ಮತ್ತು ಕಾಲೇಜುಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಜಯಂತಿಯನ್ನು ಆಚರಿಸಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ, 1857ರ ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಣಿ ಚೆನ್ನಮ್ಮನವರ ಹೋರಾಟವೇ ಮೂಲ ಪ್ರೇರಣೆಯಾಗಿದೆ. ಕಿತ್ತೂರು ರಾಣಿ ಚೆನ್ನಮ್ಮನವರ ಚರಿತ್ರೆಯಿಂದ ಸ್ಪೂರ್ತಿಗೊಂಡು ಅನೇಕರು ಪುಸ್ತಕಗಳನ್ನು ಬರೆದಿದ್ದಾರೆ. ರಾಣಿ ಚೆನ್ನಮ್ಮ ರಾಷ್ಟ್ರೀಯ ಐಕ್ಯತೆಗೆ ಒಂದು ಉತ್ತಮ ನಿದರ್ಶನವಾಗಿದ್ದಾರೆ ಎಂದು ಹೇಳಿದರು.
ಜಿ.ಪಂ.ಸದಸ್ಯ ಕೆ.ಎಸ್.ಬಸವಂತಪ್ಪ ಮಾತನಾಡಿ, ಹಿಂದೆ ಮಹಿಳೆ ದೇಶಕ್ಕಾಗಿ ಹೋರಾಡುತ್ತಿದ್ದಳು. ಆದರೆ, ಇಂದು ತನ್ನ ರಕ್ಷಣೆಗಾಗಿ ಹೋರಾಡಬೇಕಾಗಿರುವ ಸನ್ನಿವೇಶದ ಬಗ್ಗೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಿದೆ. ಸಮಾನತೆ ಮತ್ತು ಎಲ್ಲರಲ್ಲಿ ಉತ್ತಮ ಭಾವನೆಗಳು ಮೂಡಿದಾಗ ಮಾತ್ರ ಸಮಾಜದಲ್ಲಿ ಶಾಂತಿ-ಶಿಸ್ತು ಸಾಧ್ಯವಾಗುತ್ತದೆ. ದೇವಸ್ಥಾನ ಪ್ರವೇಶಕ್ಕಾಗಿ ಹೆಣ್ಣು ಮಕ್ಕಳು ಹೋರಾಡುತ್ತಿದ್ದಾರೆ. ಸಂವಿಧಾನಾತ್ಮಕವಾಗಿ ಎಲ್ಲರೂ ಸಮಾನರು. ಸಂವಿಧಾನವನ್ನು ಪಾಲಿಸಿದಲ್ಲಿ ಎಲ್ಲಿಯೂ ಅನ್ಯಾಯ ಆಗುವುದಿಲ್ಲ. ಆದ್ದರಿಂದ ಹೆಣ್ಣು ಮಕ್ಕಳು ವಿಧಾನಸೌಧ, ಜಿಲ್ಲಾ ಪಂಚಾಯತ್, ತಾ.ಪಂ. ಗ್ರಾ ಪಂ ನಂತರ ಸಂಸ್ಥೆಗಳ ಪ್ರವೇಶ ಮಾಡಬೇಕು. ಆಗ ಅಭಿವೃದ್ಧಿ ಹಾಗೂ ಸ್ಥಾನ ಮಾನ ತಾನಾಗೇ ಸಿಗುತ್ತದೆ. ಈ ನಿಟ್ಟಿನಲ್ಲಿ ಮೂಢನಂಬಿಕೆಯಿಂದ ಹೊರಬಂದು ಅಕ್ಷರಜ್ಞಾನ ಹೊಂದಿ ಸಮಾಜಮುಖಿ ಕೆಲಸ ಮಾಡಿ ಜೀವನ ಸಾರ್ಥಕ ಮಾಡಿಕೊಳ್ಳೋಣವೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮೇಯರ್ ಶೋಭಾ ಪಲ್ಲಾಗಟ್ಟೆ, ಪಾಲಿಕೆ ಸದಸ್ಯೆ ಅಶ್ವಿನಿ ಪ್ರಶಾಂತ್, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಸಿ.ಉಮಾಪತಿ ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿದರು. ಬೀರೇಶ್ ನಿರೂಪಿಸಿದರು.
ಕಿತ್ತೂರು ರಾಣಿ ಚೆನ್ನಮ್ಮ ನವೆಂಬರ್ 14ರಂದು ಜನಿರಿಸುವ ಬಗ್ಗೆ ಕೆಲವು ಪುರಾವೆ ಇವೆ. 1824ರ ಅಕ್ಟೋಬರ್ 23ರಂದು ರಾಣಿ ಚೆನ್ನಮ್ಮ ತಮ್ಮ ಆಪ್ತ ಬಂಟರಾದ ಅಮಟೂರು ಬಾಳಪ್ಪ, ಸಂಗೊಳ್ಳಿ ರಾಯಣ್ಣರೊಂದಿಗೆ ಬ್ರಿಟೀಷರ ವಿರುದ್ಧ ಜಯ ಸಾಧಿಸಿದ ದಿನವಾಗಿದೆ. ಆದ್ದರಿಂದ ಇಂದು ವಿಜಯೋತ್ಸವದ ದಿನವಾಗಿದೆ. ಆದರೆ, ಅ.23ನ್ನು ಕಳೆದ ಎರಡು ವರ್ಷಗಳಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಗುತ್ತಿದೆ. ಹೀಗಾಗಿ ಗೊಂದಲ ಉಂಟಾಗುತ್ತಿದೆ. ಆದ್ದರಿಂದ ಸರ್ಕಾರ ಇನ್ನೊಮ್ಮೆ ಚೆನ್ನಮ್ಮರ ಜನ್ಮ ದಿನವನ್ನು ಖಚಿತ ಪಡಿಸಿಕೊಂಡು ಜಯಂತಿ ಆಚರಿಸಬೇಕು.
-ಶ್ರೀವಚನಾನಂದ ಸ್ವಾಮೀಜಿ,
ಜಗದ್ಗುರು,
ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
