ದಾವಣಗೆರೆ:
ಕಳೆದ ಎಂಟು ತಿಂಗಳಿಂದ ಬಾಕಿ ಇರುವ ಕಿರಿಯ ವೈದ್ಯರ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ನಗರದ ಜಿಲ್ಲಾಸ್ಪತ್ರೆ ಮತ್ತು ಹೆರಿಗೆ ಆಸ್ಪತ್ರೆಗಳ ಸರ್ಕಾರಿ ಕೋಟಾದ ಗೃಹ ವೈದ್ಯರು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಆರಂಭಿಸಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹವು ಮಂಗಳವಾರ 2ನೇ ದಿನಕ್ಕೆ ಕಾಲಿರಿಸಿದ್ದು, ಸಂಜೆ ಕ್ಯಾಂಡಲ್ ಲೈನ್ ಮಾರ್ಚ್ ನಡೆಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಗಳ ಸರ್ಕಾರಿ ಕೋಟಾದ ಗೃಹ ವೈದ್ಯರು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕೆಳೆದ 8 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಹಾಗೂ ತಮ್ಮ ಬೇಡಿಕೆಗೆ ಸ್ಪಂದಿಸದ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಾ ಮಂಗಳವಾರ ಸಂಜೆ ಕ್ಯಾಂಡಲ್ ಹಿಡಿದುಕೊಂಡು ಚಿಗಟೇರಿ ಆಸ್ಪತ್ರೆ ಆವರಣದಿಂದ ಗುಂಡಿ ವೃತ್ತ, ಚರ್ಚ್ ರಸ್ತೆ, ಎವಿಕೆ ಕಾಲೇಜು ರಸ್ತೆ, ಚೇತನ ಹೊಟೆಲ್ ರಸ್ತೆ, ಅಂಬೇಡ್ಕರ್ ವೃತ್ತ, ವಿದ್ಯಾರ್ಥಿ ಭವನದ ಮಾರ್ಗವಾಗಿ ಮರಳಿ ಆಸ್ಪತ್ರೆಯ ಆವರಣ ತಲುಪಿ ಮುಕ್ತಾಯವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಜಿಲ್ಲಾಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಕೋಟಾದ ಗೃಹ ವೈದ್ಯರು, ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ 8 ತಿಂಗಳಿಂದ ಶಿಷ್ಯ ವೇತನ ಪಾವತಿಯಾಗಿಲ್ಲ. ವೈದ್ಯಕೀಯ ಶಿಕ್ಷಣ ಇಲಾಖೆ ಅನಗತ್ಯವಾಗಿ ಶಿಷ್ಯ ವೇತನ ತಡೆ ಹಿಡಿಯುವ ಮೂಲಕ ನಮ್ಮಿಂದ ಪುಕ್ಕಟೆ ಸೇವೆ ಮಾಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಿಷ್ಯ ವೇತನವೇ ಶಿಕ್ಷಣ ಮುಂದು ವರೆಸಲು ಮೂಳ ಆಧಾರವಾಗಿದೆ. ಹೀಗಾಗಿ ಕಳೆದ 8 ತಿಂಗಳಿಂದ ಶಿಷ್ಯ ವೇತನ ಬಾರದಿರುವುದರಿಂದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷವನ್ನು ಮೊಟಕುಗೊಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲವತ್ತುಕೊಂಡರು.
ಜಿಲ್ಲಾಸ್ಪತ್ರೆ ಹೊರ ರೋಗಿ ವಿಭಾಗ, ಆಪರೇಷನ್ ಥೇಟರ್, ಹೆರಿಗೆ ಕೋಣೆ, ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಸುಮಾರು 230 ವೈದ್ಯ ವಿದ್ಯಾರ್ಥಿಗಳು ಸೇವೆ ಸಲ್ಲಿಸುತ್ತಿದ್ದು, ಎಲ್ಲರೂ ಕೆಲಸ ಸ್ಥಗಿತಗೊಳಿಸಿ, ನಮಗೆ ಸಿಗಬೇಕಾದ ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದೇವೆ. ನಮ್ಮ ಸೇವೆಗೆ ಪ್ರತಿಯಾಗಿ ಸರ್ಕಾರ ನೀಡುವ ಶಿಷ್ಯ ವೇತನವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಅಸಂಬದ್ಧ ಕಾರಣ ನೀಡಿ ದಿಢೀರನೇ ತಡೆ ಹಿಡಿದಿರುವುದು ಘೋರ ಅನ್ಯಾಯವಾಗಿದೆ. ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಮಾಡುವ ಸೇವೆಗೆ ಶಿಷ್ಯ ವೇತನ ಪಡೆಯುವುದು ನಮ್ಮ ಮೂಲಭೂತ ಹಕ್ಕಾಗಿದೆ. ಹೀಗಾಗಿ ನಮ್ಮ ನ್ಯಾಯಯುತ ಬೇಡಿಕೆಗಾಗಿ ಅನಿರ್ಧಿಷ್ಠಾವಧಿ ಧರಣಿ ಆರಂಭಿಸಿದ್ದು, ನಮ್ಮ ಹೋರಾಟಕ್ಕೆ ಐಎಂಎ ದಾವಣಗೆರೆ ಶಾಖೆ, ಜೆಜೆಎಂ ವೈದ್ಯಕೀಯ ಕಾಲೇಜು ಪ್ರಾಚಾರ್ಯರು, ಬೋಧಕರು, ಎಸ್ಸೆಸ್ಐಎಂಎಸ್ ಆಸ್ಪತ್ರೆ ವೈದ್ಯರು, ಹಿರಿಯ ವೈದ್ಯರು ಬೆಂಬಲ ಸೂಚಿಸಿದ್ದಾರೆ. ಆದ್ದರಿಂದ ಬಾಕಿ ಇರುವ ಶಿಷ್ಯ ವೇತನ ಬಿಡುಗಡೆಯಾಗುವ ವರೆಗೂ ತಮ್ಮ ಹೋರಾಟವ ಮುಂದುವರೆಸುತ್ತೇವೆ ಎಂದು ಹೇಳಿದರು.
ಕ್ಯಾಂಡಲ್ ಲೈಟ್ ಮಾರ್ಚ್ನಲ್ಲಿ ಕಿರಿಯ ವೈದ್ಯರಾದ ಡಾ.ಸುಜಿತ್, ಡಾ.ಸಂತೋಷ, ಡಾ.ಎಂ.ಎಚ್.ಅಭಿಷೇಕ್, ಡಾ.ಚಂದನ, ಡಾ.ಸ್ವರೂಪ್, ಡಾ.ಸೈಯದ್ ಅಬ್ರಾರ್ ಬಾಷಾ, ಡಾ.ಪ್ರಿಯಾಂಕ, ಡಾ.ಅರುಣ, ಡಾ.ವೀರೇಶ, ಡಾ.ರಕ್ಷಿತಾ, ಡಾ.ಇಳಾ, ಡಾ.ಅಭಿಲಾಶ್, ಡಾ.ಮನುಗೌಡ, ಡಾ.ಮನೀಶ್, ಡಾ.ಪ್ರಸನ್ನ, ಡಾ.ವಿಜಯ ಚಿನಕಟ್ಟೆ, ಡಾ.ವಿಶಾಲ್, ಡಾ.ತೇಜಸ್, ಡಾ.ಚಿರಾಗ್, ಡಾ.ಅಪೂರ್ವ, ಡಾ.ಎಚ್.ಟಿ.ಭಾವನಾ, ಡಾ.ಎಂ.ಆರ್.ಮೇಘನಾ, ಡಾ.ಸಮೀಕ್ಷಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ರೋಗಿಗಳ ಪರದಾಟ
ಚಿಗಟೇರಿ ಆಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಗಳ ಹೊರ ರೋಗಿ ವಿಭಾಗ, ಆಪರೇಷನ್ ಥೇಟರ್, ಹೆರಿಗೆ ಕೋಣೆ, ತುರ್ತು ಚಿಕಿತ್ಸಾ ಘಟಕ, ತೀವ್ರ ನಿಗಾ ಘಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 230 ಜನ ಕಿರಿಯ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಸ್ಥಗಿತಗೊಳಿಸಿ ಧರಣಿ ನಡೆಸುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಳಿಗ್ಗೆಯಿಂದಲೂ ವೈದ್ಯರ ಸೇವೆ ಸಿಗದೇ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ದೂರದ ಹಳ್ಳಿ, ಬೇರೆ ತಾಲೂಕು, ಜಿಲ್ಲೆಗಳಿಂದ ಚಿಕಿತ್ಸೆಗಾಗಿ, ಆರೋಗ್ಯ ತಪಾಸಣೆಗಾಗಿ ಬಂದಿದ್ದ ರೋಗಿಗಳು ನಿನ್ನೆಯಂತೆ ಮಂಗಳವಾರವೂ ವೈದ್ಯರು ಇಲ್ಲದ್ದರಿಂದ ತೀವ್ರ ತೊಂದರೆ ಅನುಭವಿಸಬೇಕಾಯಿತು. ಆದರೆ, ಸೇವೆಯಲ್ಲಿದ್ದ ಸರ್ಕಾರಿ ವೈದ್ಯರೇ ರೋಗಿಗಳ ತಪಾಸಣೆ ನಡೆಸಿ, ಚಿಕಿತ್ಸೆ ನೀಡಬೇಕಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
