ಹುಳಿಯಾರು
ಪಟ್ಟಣದ ಅಮಾನಿಕೆರೆಯಲ್ಲಿ ಮಣ್ಣು ತುಂಬುತ್ತಿದ್ದ 3 ಟ್ರ್ಯಾಕ್ಟರ್ಗಳನ್ನು ತಿಪಟೂರು ಉಪವಿಭಾಗಾಧಿಕಾರಿ ಪೂವಿತಾ ಮಂಗಳವಾರ ವಶಪಡಿಸಿಕೊಂಡು ಪೊಲೀಸರ ವಶಕ್ಕೆ ನೀಡಿದ್ದಾರೆ.
ಹುಳಿಯಾರು ವಾರ್ಡ್ ವಿಂಗಡನೆ ಸಂಬಂಧ ಕೇಶವಾಪುರ ಹಾಗೂ ವಳಗೆರೆಹಳ್ಳಿಯ ಸೇರ್ಪಡೆ ಬಗ್ಗೆ ದೂರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗಾಗಿ ಕೆರೆ ಅಂಗಳದ ಮೂಲಕ ವಳಗೆರೆಹಳ್ಳಿಗೆ ತೆರಳುವ ಮಾರ್ಗದಲ್ಲಿ ಟ್ರ್ಯಾಕ್ಟರ್ಗೆ ಮಣ್ಣು ತುಂಬಿದವರನ್ನು ಗಮನಿಸಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ಟ್ರ್ಯಾಕ್ಟರ್ ಚಾಲಕ ಈ ಮಣ್ಣು ಇಟ್ಟಿಗೆ ಕಾರ್ಖಾನೆ ತೆಗೆದುಕೊಂಡು ಹೋಗುತ್ತಿರುವುದಾಗಿ ಪ್ರತಿಕ್ರಿಯಿಸಿದ್ದಾನೆ.
ನೀರಾವರಿ ಇಲಾಖೆಯ ಅನುಮತಿಯಿಲ್ಲದೆ ಇಟ್ಟಿಗೆ ಕಾರ್ಖಾನೆಗಳಿಗೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಕೆರೆ ಮಣ್ಣು ಬಳಸುವುದು ಕಾನೂನು ಉಲ್ಲಂಘನೆ ಮಾಡಿದಂತಾಗುವುದು. ಹೀಗಾಗಿ ಅನಧಿಕೃತವಾಗಿ ಮಣ್ಣು ತುಂಬುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ರಾಕ್ಟರ್ಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಿ ಸಣ್ಣ ನೀರಾವರಿ ಇಲಾಖೆ ಎಇಇ ರವಿ ಅವರಿಗೆ ದೂರು ನೀಡುವಂತೆ ಆದೇಶ ನೀಡಿದರು.
ಈಚೆಗೆ ನಡೆದ ಸಭೆಯಲ್ಲಿ ಇಟ್ಟಿಗೆ ಕಾರ್ಖಾನೆ ಮಾಲೀಕರು ಶಾಸಕ ಜೆ.ಸಿ.ಮಾಧುಸ್ವಾಮಿ ಅವರನ್ನು ಭೇಟಿ ಮಾಡಿ ಕೆರೆಯಲ್ಲಿ ಮಣ್ಣು ತುಂಬಲು ಅವಕಾಶ ನೀಡವಂತೆ ಕೋರಿದ್ದರು. ಶಾಸಕರು ಆ ಸಂದರ್ಭದಲ್ಲಿ ಮಣ್ಣು ತುಂಬಲು ತಕರಾರಿಲ್ಲ, ಆದರೆ ಮರಳು ತೆಗೆಯಲು ಅವಕಾಶವಿಲ್ಲ. ಕೆರೆಯ ಹೂಳು ತೆಗೆಯಲು ಸರ್ಕಾರವೇ ಲಕ್ಷಾಂತರ ವ್ಯಯಿಸುತ್ತಿದ್ದು ಹೀಗಾಗಿ ಯಾರು ಬೇಕಾದರೂ ಹೂಳು ತೆಗೆಯಬಹುದು ಎಂದು ತುಂಬಿದ ಸಭೆಯಲ್ಲಿ ಘೋಷಿಸಿದ್ದರು. ಆದರೆ ಸ್ಥಳದಲ್ಲಿಯೇ ಅವರೊಂದಿಗೆ ಹಾಜರಿದ್ದ ಉಪವಿಭಾಗಾಧಿಕಾರಿ ಪೂವಿತಾ ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಸ್ಥಳ ನಿಗದಿ ಮಾಡಿ ಅನುಮತಿಪತ್ರ ಪಡೆಯುವವರೆಗೂ ಮಣ್ಣು ತುಂಬದಂತೆ ಸೂಚನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ