ನವದೆಹಲಿ:
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಅಬಕಾರಿ ನೀತಿ ಹಗರಣದ “ಕಿಂಗ್ ಪಿನ್ ಮತ್ತು ಪ್ರಮುಖ ಪಿತೂರಿದಾರ” ಆಗಿದ್ದಾರೆ ಮತ್ತು ಸಾಕ್ಷ್ಯಗಳ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ಸುಪ್ರೀಂ ಕೋರ್ಟ್ ಗೆ ಮಾಹಿತಿ ನೀಡಿದೆ.
ದೆಹಲಿ ಸಿಎಂ ಬಂಧನಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂ ಕೋರ್ಟ್ ಗೆ 734 ಪುಟಗಳ ಅಫಿಡವಿಟ್ ಸಲ್ಲಿಸಿದ ಇಡಿ, “ಮುಕ್ತ ಮತ್ತು ನ್ಯಾಯಯುತ ಚುನಾವಣೆಯ ಪರಿಕಲ್ಪನೆಯನ್ನು” ಎಂದಿಗೂ ಉಲ್ಲಂಘಿಸುವುದಿಲ್ಲ ಎಂದು ಹೇಳಿದೆ.
ಕೇಜ್ರಿವಾಲ್ ಅವರು ತಮ್ಮ ಸಚಿವರು ಮತ್ತು ಎಎಪಿ ನಾಯಕರೊಂದಿಗೆ ಶಾಮೀಲಾಗಿ ಕೆಲಸ ಮಾಡಿದ್ದಾರೆ. ನೀತಿಯಲ್ಲಿ ನೀಡಲಾದ ಅನುಕೂಲಗಳಿಗೆ ಬದಲಾಗಿ ಮದ್ಯದ ಉದ್ಯಮಿಗಳಿಂದ “ಕಿಕ್ಬ್ಯಾಕ್ಗೆ ಬೇಡಿಕೆ ಇಟ್ಟಿದ್ದಾರೆ” ಎಂದು ಜಾರಿ ನಿರ್ದೇಶನಾಲಯ ಅಫಿಡವಿಟ್ ನಲ್ಲಿ ಆರೋಪಿಸಿದೆ.
“ಅರವಿಂದ್ ಕೇಜ್ರಿವಾಲ್ ಅವರು ಕೆಲವು ವ್ಯಕ್ತಿಗಳಿಗೆ ಅನುಕೂಲವಾಗುವಂತೆ ರೂಪಿಸಿದ್ದ ಅಬಕಾರಿ ನೀತಿ 2021-22 ರ ಪಿತೂರಿಯ ಭಾಗಿಯಾಗಿದ್ದಾರೆ ಮತ್ತು ಈ ನೀತಿಯಲ್ಲಿ ಮದ್ಯದ ಉದ್ಯಮಿಗಳಿಂದ ಪಡೆದ ಕಿಕ್ಬ್ಯಾಕ್ನಲ್ಲಿ ಭಾಗಿಯಾಗಿದ್ದಾರೆ” ಎಂದು ಇಡಿ ಹೇಳಿದೆ.
PMLA, 2002ರ ಕಾಯ್ದೆಯಲ್ಲಿ ಮುಖ್ಯಮಂತ್ರಿ ಮತ್ತು ಸಾಮಾನ್ಯ ನಾಗರಿಕರನ್ನು ಬಂಧಿಸಲು ಬೇರೆ ಬೇರೆ ಮಾನದಂಡಗಳು ಇಲ್ಲ. ಲಭ್ಯವಿರುವ ಸಾಕ್ಷ್ಯಾಧಾರಗಳು ಸಾಮಾನ್ಯ ನಾಗರಿಕರಂತೆ ಮುಖ್ಯಮಂತ್ರಿಯನ್ನು ಬಂಧಿಸಬಹುದು. ಆರೋಪಿ ಕೇಜ್ರಿವಾಲ್ ಅವರು ತಮ್ಮ ಸ್ಥಾನವನ್ನು ಒತ್ತಿಹೇಳುವ ಮೂಲಕ ತನಗಾಗಿ ವಿಶೇಷ ವರ್ಗವನ್ನು ರೂಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಇಡಿ ಹೇಳಿದೆ.
ತಮ್ಮ ಬಂಧನವು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಮೂಲ ರಚನೆ ಮತ್ತು ಸಿದ್ಧಾಂತವನ್ನು ಉಲ್ಲಂಘಿಸುತ್ತದೆ ಎಂಬ ಕೇಜ್ರಿವಾಲ್ ವಾದವನ್ನು ತಳ್ಳಿಹಾಕಿದ ತನಿಖಾ ಸಂಸ್ಥೆ, “ಒಬ್ಬ ವ್ಯಕ್ತಿ ಎಷ್ಟೇ ಎತ್ತರದಲ್ಲಿದ್ದರೂ, ಅಪರಾಧದ ಸಾಕ್ಷ್ಯಗಳ ಆಧಾರದ ಮೇಲೆ ಬಂಧಿಸುವುದು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಪರಿಕಲ್ಪನೆಯನ್ನು ಎಂದಿಗೂ ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
![](https://prajapragathi.com/wp-content/uploads/2023/04/supreme.jpg)