ತಿರುವನಂತಪುರಂ:

ಕೇರಳದ 38 ವರ್ಷದ ಮಹಿಳೆ ವಿನೀತಾ ಅವರನ್ನು 2022ರಲ್ಲಿ ಕೊಲೆಗೈದ ಆರೋಪದಡಿ ತಮಿಳುನಾಡಿನ 42 ವರ್ಷದ ರಾಜೇಂದ್ರನ್ಗೆ ತಿರುವನಂತಪುರಂನ ನ್ಯಾಯಾಲಯವು ಗುರುವಾರ ಗಲ್ಲುಶಿಕ್ಷೆ ವಿಧಿಸಿದೆ. ತಿರುವನಂತಪುರಂನ ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಪ್ರಸೂನ್ ಮೋಹನ್, ಫೆಬ್ರವರಿ 6, 2022ರಂದು ವಿನೀತಾ ಅವರ ಕೊಲೆಗೈದ ರಾಜೇಂದ್ರನ್ನನ್ನು ಗಲ್ಲಿಗೇರಿಸುವಂತೆ ಆದೇಶಿಸಿದ್ದಾರೆ. ನ್ಯಾಯಾಲಯವು ರಾಜೇಂದ್ರನ್ಗೆ 4 ಲಕ್ಷ ರೂಪಾಯಿ ದಂಡವನ್ನು ವಿಧಿಸಿದ್ದು, ದಂಡ ಪಾವತಿಸಲು ವಿಫಲವಾದರೆ ಐದು ವರ್ಷ ಮತ್ತು ಒಂದು ತಿಂಗಳ ಹೆಚ್ಚುವರಿ ಜೈಲು ಶಿಕ್ಷೆಯನ್ನು ಅನುಭವಿಸಬೇಕು. ಈ ದಂಡದ ಮೊತ್ತವನ್ನು ವಿನೀತಾ ಅವರ ಅಪ್ರಾಪ್ತ ಮಕ್ಕಳಿಗೆ, ಅವರ ಅಜ್ಜ-ಅಜ್ಜಿಯರೊಂದಿಗೆ ವಾಸಿಸುತ್ತಿರುವವರಿಗೆ ಪಾವತಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ಸಲಾಹುದ್ದೀನ್ ಮಾತನಾಡಿ, “ರಾಜೇಂದ್ರನ್ 2014ರಲ್ಲಿ ಕನ್ಯಾಕುಮಾರಿಯಲ್ಲಿ ಒಂದು ಕುಟುಂಬದ ಮೂವರ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಆ ಪ್ರಕರಣದ ವಿಚಾರಣೆ ಕೆಳ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಆತ ಸರಣಿ ಕೊಲೆಗಾರನಾಗಿದ್ದು, ಸಮಾಜಕ್ಕೆ ಭೀತಿ ಒಡ್ಡುತ್ತಾನೆ ಮತ್ತು ಸುಧಾರಣೆಗೆ ಯಾವುದೇ ಅವಕಾಶವಿಲ್ಲ” ಎಂದು ನ್ಯಾಯಾಲಯದ ಮುಂದೆ ವಾದಿಸಿದರು. ಈ ವಾದವನ್ನು ವಿಚಾರಣಾ ನ್ಯಾಯಾಲಯ ಒಪ್ಪಿಕೊಂಡಿದೆ.
ಕೊಲೆಗೆ ಯಾವುದೇ ಪ್ರತ್ಯಕ್ಷ ಸಾಕ್ಷಿಗಳಿರಲಿಲ್ಲ. ಹೀಗಾಗಿ, ಸುತ್ತಮುತ್ತಲಿನ ಮತ್ತು ವೈಜ್ಞಾನಿಕ ಪುರಾವೆಗಳು ಹಾಗೂ ಫೋರೆನ್ಸಿಕ್ ಸುಳಿವುಗಳ ಮೂಲಕ ಆರೋಪಿಯ ವಿರುದ್ಧ ಆರೋಪ ಸಾಬೀತುಪಡಿಸಲಾಯಿತು. “ರಾಜೇಂದ್ರನ್ ಕ್ರೂರ ಮತ್ತು ಅಮಾನವೀಯ ಕೃತ್ಯದ ಮೂಲಕ ಕೊಲೆಗೈದಿದ್ದಾನೆ. ತಮಿಳುನಾಡಿನ ತ್ರಿಗುಂಟಿಕ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾಗ ತಿರುವನಂತಪುರಂನಲ್ಲಿ ವಿನೀತಾ ಅವರನ್ನು ಕೊಂದಿದ್ದಾನೆ. ಆತ ಸಮಾಜಕ್ಕೆ ಗಂಭೀರ ಬೆದರಿಕೆ” ಎಂದು ಸಲಾಹುದ್ದೀನ್ ಪತ್ರಕರ್ತರಿಗೆ ತಿಳಿಸಿದರು.
ಇತಿಹಾಸ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ರಾಜೇಂದ್ರನ್, ಆನ್ಲೈನ್ ಷೇರು ವ್ಯಾಪಾರಕ್ಕೆ ವ್ಯಸನಿಯಾಗಿದ್ದ. ತನ್ನ ಹೂಡಿಕೆಗಳಿಗೆ ಹಣ ಸಂಗ್ರಹಿಸಲು ಕಳ್ಳತನ ಮತ್ತು ಕೊಲೆಗಳನ್ನು ಮಾಡುತ್ತಿದ್ದ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಫೆಬ್ರವರಿ 6, 2022ರಂದು, ರಾಜೇಂದ್ರನ್ ವಿನೀತಾ ಕೆಲಸ ಮಾಡುತ್ತಿದ್ದ ನರ್ಸರಿಗೆ ಕುಂಡಗಳನ್ನು ಖರೀದಿಸುವ ಗೋಜಿನಲ್ಲಿ ಹೋಗಿ, ಅವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ನಂತರ, ಅವರು ಧರಿಸಿದ್ದ 4.5 ಸಾವರಿನ್ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ವಿನೀತಾ ಜೊತೆಗಿನ ಜಟಾಪಟಿಯಲ್ಲಿ ಆತನ ರಕ್ತದ ಕಲೆ ಗೋಡೆಯ ಮೇಲೆ ಬಿದ್ದಿದ್ದು, ಪ್ರಮುಖ ಪುರಾವೆಯಾಯಿತು.
ವಿನೀತಾ ಅವರ ತಾಯಿ, ನ್ಯಾಯಾಲಯದ ಗಲ್ಲು ಶಿಕ್ಷೆಯ ತೀರ್ಪಿನಿಂದ ತೃಪ್ತಿಯಾಗಿದೆ ಎಂದು ತಿಳಿಸಿದ್ದಾರೆ. “ರಾಜೇಂದ್ರನ್ನನ್ನು ಬಿಡುಗಡೆ ಮಾಡಿದರೆ, ಚಿನ್ನಕ್ಕಾಗಿ ಇನ್ನಷ್ಟು ಮಹಿಳೆಯರನ್ನು ಕೊಲ್ಲುವುದರಲ್ಲಿ ಸಂಶಯವಿಲ್ಲ. ವಿನೀತಾ ಅವರನ್ನು ಕೊಂದು, ಆತ ಆಕೆಯ ಮಕ್ಕಳನ್ನು ಅನಾಥರನ್ನಾಗಿ ಮಾಡಿದ್ದಾನೆ. ಆಕೆಯ ಗಂಡ ವರ್ಷಗಳ ಹಿಂದೆಯೇ ನಿಧನರಾಗಿದ್ದರು. ಆತನಿಗೆ ಮೇಲ್ಮನವಿ ಸಲ್ಲಿಸಲು ಸಹಾಯ ಮಾಡುವವರು, ನಮ್ಮಂತಹ ಪೋಷಕರ ಮತ್ತು ಆಕೆಯ ಎರಡು ಮಕ್ಕಳ ಕಣ್ಣೀರನ್ನು ತುಳಿದುಕೊಂಡು ಹೋಗುತ್ತಾರೆ ಎಂಬುದನ್ನು ತಿಳಿಯಬೇಕು” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
