ಚಳ್ಳಕೆರೆ:
ರಾಷ್ಟ್ರವನ್ನು ಕೊರೋನಾ ಮುಕ್ತವನ್ನಾಗಿ ಮಾಡಿ ಸರ್ವರ ಬದುಕಿಗೂ ಹೊಸ ಕಾಯಕಲ್ಪ ನೀಡಿದ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ದಿಟ್ಟ ನಿರ್ಧಾರ ಹಾಗೂ ಸಮಯೋಚಿತ ಕಾರ್ಯತಂತ್ರದಿಂದ ರಾಷ್ಟ್ರದ ಲಕ್ಷ, ಲಕ್ಷ ಜನರ ಪ್ರಾಣ ರಕ್ಷಣೆಯಾಗಿದ್ದು,ಮೋದಿಯವರ ಕಾರ್ಯವನ್ನು ಇಡೀ ವಿಶ್ವವೇ ಪ್ರಶಂಸಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ.ಜಯಪಾಲಯ್ಯ ತಿಳಿಸಿದರು.
ಅವರು, ಶುಕ್ರವಾರ ಇಲ್ಲಿನ ನಗರ ಆರೋಗ್ಯ ಘಟಕದ ಸಭಾಂಗಣದಲ್ಲಿ ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಶತಕೋಟಿ ಲಸಿಕೆ ಯೋಜನೆ ಯಶಸ್ವಿಗೊಳಿಸಿದ ಹಿನ್ನೆಲೆಯಲ್ಲಿ ವೈದ್ಯರು, ಶುಶ್ರೂಷಕಿಯರು ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಸನ್ಮಾನಿಸಿ, ಅಭಿನಂದಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರಾರಂಭದ ಹಂತದಲ್ಲಿ ಲಸಿಕೆಯಬಗ್ಗೆ ಅಪಪ್ರಚಾರ ಹಿನ್ನೆಲ್ಲೆಯಲ್ಲಿ ಹೆಚ್ಚಿನ ಜನರು ಲಸಿಕೆ ಪಡೆಯಲು ಮುಂದೆ ಬರಲಿಲ್ಲ. ಸರ್ಕಾರವೂ ಸಹ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಸರಬರಾಜು ಮಾಡಲು ಸಾಧ್ಯವಾಗಲಿಲ್ಲ. ವೈದ್ಯರೂ ಸೇರಿದಂತೆ ಹಲವಾರು ಜನರನ್ನು ನಾವು ಕಳೆದುಕೊಳ್ಳಬೇಕಾಯಿತು. ಆದರೆ, ಪ್ರಧಾನ ಮಂತ್ರಿಯವರು ದೇಶದಲ್ಲಿ ಲಸಿಕೆಯನ್ನು ಉತ್ಪಾದಿಸುವ ಮೂಲಕ ಆರೋಗ್ಯ ಇಲಾಖೆಯಲ್ಲಿ ಹೊಸ ಕ್ರಾಂತಿ ಸೃಷ್ಠಿಸಿದರು ಎಂದರು. ಶತಕೋಟಿ ಲಸಿಕೆ ಗುರಿ ಮುಟ್ಟಿದ್ದು ಇದಕ್ಕೆ ಸಹಕರಿಸಿದ ವೈದ್ಯರು ಮತ್ತು ಸಿಬ್ಬಂದಿಯನ್ನು ಪಕ್ಷದ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ, ಇಂದಿಗೂ ಸಹ ಗ್ರಾಮೀಣ ಭಾಗದಲ್ಲಿ ಲಸಿಕೆ ಪಡೆಯಲು ಜನರು ಮುಂದೆ ಬರುತ್ತಿಲ್ಲ. ಆಶಾ, ಅಂಗನವಾಡಿ, ಆರೋಗ್ಯ ಕಾರ್ಯಕರ್ತೆಯರು ಜನರ ಮನವಲಿಸಿ ಲಸಿಕೆ ಹಾಕುತ್ತಿದ್ದು, ಗ್ರಾಮೀಣ ಭಾಗದಲ್ಲಿ ಈಗಾಗಲೇ ಶೇ.70ರಷ್ಟು, ನಗರ ಪ್ರದೇಶದಲ್ಲಿ ಶೇ.90ರಷ್ಟು ಪ್ರಗತಿ ಇದೆ ಎಂದರು.
ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಜೆ.ಡಿ.ವೆಂಕಟೇಶ್ ಮಾತನಾಡಿ, ಇಂದು ರಾಷ್ಟ್ರ ನೂರು ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಹೊಸ ಇತಿಹಾಸವನ್ನು ಸೃಷ್ಠಿಸಿದೆ. ವೈದ್ಯರನ್ನು ಮತ್ತು ವೈದ್ಯ ಸಿಬ್ಬಂದಿಗೆ ದೈರ್ಯ ತುಂಬಿ ಸ್ವದೇಶದಲ್ಲೇ ಲಸಿಕೆ ಉತ್ಪಾದಿಸಲು ಪ್ರಧಾನ ಮಂತ್ರಿ ನರೇಂದ್ರಮೋದಿಯವರ ಮಾರ್ಗದರ್ಶನ ಕಾರಣವಾಗಿದೆ. ದೇಶದ ಜನತೆ ಕೊರೋನಾ ಸಂದರ್ಭವನ್ನು ಎಂದಿಗೂ ಮರೆಯಲಾರರು. ರಾಷ್ಟ್ರದ ಬಹುಪಾಲು ಜನರಿಗೆ ಉಚಿತ ಲಸಿಕೆ ನೀಡುವ ಮೂಲಕ ಭಾರತ ವಿಶ್ವಕ್ಕೆ ಮಾದರಿಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ.ಜೆ.ಡಿ.ವೆಂಕಟೇಶ್, ಡಾ.ಎನ್.ಪ್ರೇಮಸುಧಾ, ಡಾ.ರವಿ, ಸ್ಟಾಫ್ ನರ್ಸ್ ರೂಪಿಣಿ, ಗಾಯಿತ್ರಿ, ತಾಲ್ಲೂಕು ಆರೋಗ್ಯ ಯೋಜನಾಧಿಕಾರಿ ಅಮೃತ್ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿರಾಮದಾಸ್, ಮಾಜಿ ಅಧ್ಯಕ್ಷ ಬಿ.ವಿ.ಸಿರಿಯಣ್ಣ, ಪಕ್ಷದ ಮುಖಂಡರಾದ ಬಿ.ಎಂ.ಶ್ರೀನಿವಾಸ್, ಚಿದಾನಂದ, ಜಗದೀಶ್, ಬಿ.ಎಸ್.ಶಿವಪುತ್ರಪ್ಪ, ಸಿ.ಎಸ್.ಪ್ರದಾಸ್, ಮಹಿಳಾ ಘಟಕದ ಅಧ್ಯಕ್ಷೆ ಜಗದಾಂಭ, ಅಂಬಿಕಾ, ಉಮಾ, ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಜೆರಾಜು, ರತ್ನಮ್ಮ, ವನಜಾಕ್ಷಮ್ಮ, ಭಾರತಿ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಲಾಯಿತು.