ಕೋಟೆನಗರಿಯಲ್ಲಿ ಮೊದಲ ಬಾರಿ ಅರಳಿದ ಕಮಲ ಕಾಂಗ್ರೆಸ್, ಜೆಡಿಎಸ್‍ಗೆ ಭಾರೀ ಮುಖಭಂಗ

ಚಿತ್ರದುರ್ಗ;
                ನಿರೀಕ್ಷೆಯಂತೆಯೇ ಈ ಬಾರಿಯ ನಗರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳ ಹೀನಾಯ ಸೋಲು ಅನುಭವಿಸಿದೆ.
                ನಗರಸಭೆಯ ಇತಿಹಾಸದಲ್ಲಿಯೇ ಇದುವರೆಗೂ ಒಂದೇ ಒಂದು ಸ್ಥಾನಗಳಿಸಿರದ ಭಾರತೀಯ ಜನತಾ ಪಾರ್ಟಿ ಈ ಬಾರಿಯ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಎಲ್ಲರ ಲೆಕ್ಕಾಚಾರಗನ್ನು ಉಲ್ಟಾ ಮಾಡಿದೆ. ಸ್ಥಳೀಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಚಾಣಕ್ಯ ರಾಜಕಾರಣ ಮತ್ತು ಟಿಕೆಟ್ ಹಂಚಿಕೆಯಲ್ಲಿ ತಾಳಿದ ನಿಲುವು ಈ ಗೆಲುವಿಗೆ ಪ್ರಮುಖ ಕಾರಣವೆಂದು ವಿಶ್ಲೇಷಣೆ ಮಾಡಲಾಗುತ್ತಿದೆ.
               ಕಳೆದ ಬಾರಿ ನಗರಸಭೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದ್ದ ಜಾತ್ಯಾತೀತ ಜನತಾ ದಳ ಈ ಚುನಾವಣೆಯಲ್ಲಿ ಬಾರೀ ಮುಖಭಂಗಕ್ಕೆ ಈಡಾಗಿದೆ. ಕಾಂಗ್ರೆಸ್ ನಾಯಕರಿಗೂ ಈ ಚುನಾವಣೆ ದೊಡ್ಡ ಮುಖಭಂಗವೇ ಆಗಿದೆ.
             ನಗರಸಭೆಯಲ್ಲಿ ಬಿಜೆಪಿ 17, ಕಾಂಗ್ರೆಸ್ ಐದು, ಜಾತ್ಯಾತೀತ ಜನತಾ ದಳದ ಅಭ್ಯರ್ಥಿಗಳು ಗೆದಿದ್ದರೆ,ಏಳು ಕಡೆ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಸರಳ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದ್ದು, ಈಗಾಗಲೇ ಮೂವರು ಪಕ್ಷೇತರ ಸದಸ್ಯರು ಬಿಜೆಪಿಯ ಜೊತೆಗೆ ಹೋಗಿದ್ದಾರೆ. ಈ ಕಾರಣದಿಂದ ಬಿಜೆಪಿ ಕೈಗೆ ನಗರಸಭೆ ವಾಲಿದೆ.
              ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಹೀನಾಯ ಸೋಲುಕಂಡಿದ್ದ ಕಾಂಗ್ರೆಸ್ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಸೋತಿದೆ. ಮೂರು ಸಂಸ್ಥೆಗಳ ಪೈಕಿ ಚಳ್ಳಕೆರೆಯಲ್ಲಿ ಮಾತ್ರ ಗೆದಿದ್ದರೆ, ಉಳಿದಂತೆ ಚಿತ್ರದುರ್ಗ ಮತ್ತು ಹೊಸದುರ್ಗದಲ್ಲಿ ಸೋಲುಕಂಡಿದೆ. ಇದು ಚಿತ್ರದುರ್ಗ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಹಾಗೂ ಮಾಜಿ ಸಚಿವ ಹೆಚ್.ಆಂಜನೇಯ ಅವರಿಗೆ ದೊಡ್ಡ ಮುಖಭಂಗವೆಂದು ಹೇಳಲಾಗುತ್ತಿದೆ. ಹೊಸದುರ್ಗದಲ್ಲಿಯೂ ಬಿ.ಜಿ.ಗೋವಿಂದಪ್ಪ ಅವರಿಗೆ ಮುಖಭಂಗವಾಗಿದೆ

ತಿಪ್ಪಾರೆಡ್ಡಿ ಪ್ರತಿಷ್ಠೆ ಪಣ;

           ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಬಿಜೆಪಿಯ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಈ ಬಾರಿ ತಮ್ಮ ಪ್ರತಿಷ್ಠೆ ಪಣಕ್ಕಿಟ್ಟು ಅಖಾಡಕ್ಕೆ ಇಳಿದಿದ್ದರು. ಚುನಾವಣೆಗೂ ಮುನ್ನವೇ ಗೇಮ್‍ಪ್ಲಾನ್ ರೆಡಿ ಮಾಡಿಕೊಂಡಿದ್ದ ತಿಪ್ಪಾರೆಡ್ಡಿ ಅವರು, ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಅತ್ಯಂತ ಸೂಕ್ಷ್ಮವಾಗಿ ನಡೆದುಕೊಂಡಿದ್ದರು. ಈ ಕಾರಣದಿಂದಾಗಿ ಇಲ್ಲಿ ದೊಡ್ಡ ಪ್ರಮಾಣದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗಿದೆ.
ಚಿತ್ರದುರ್ಗದ ಇತಿಹಾಸದಲ್ಲಿಯೇ ನಗರಸಭೆಯಲ್ಲಿ ಒಮ್ಮೆ ಚಂದ್ರಮ್ಮ ಅವರು ಗೆದಿದ್ದು ಬಿಟ್ಟರೆ ಈ ಹಿಂದೆ ಮತ್ತು ನಂತರದ ದಿನಗಳಲ್ಲಿ ಬಿಜೆಪಿ ಒಂದು ಖಾತೆಯನ್ನೂ ತೆರೆದಿರಲಿಲ್ಲ. ಕಳೆದ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದರು. ಐದು ವರ್ಷಗಳ ಅವರ ಆಡಳಿತದ ವಿರುದ್ದ ಅಸಮಧಾನ ವ್ಯಕ್ತಪಡಿಸುತ್ತಲೇ ಇದ್ದ ತಿಪ್ಪಾರೆಡ್ಡಿ ಅವರು ಈ ಬಾರಿ ನಗರಸಭೆಯನ್ನು ತಮ್ಮ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್‍ನಲ್ಲಿ ಟಿಕೇಟ್ ಯಡವಟ್ಟು;

                   ನಗರಸಭೆ ಚುನಾವಣೆಯ ವೇಳೆ ಕಾಂಗ್ರೆಸ್ ನಾಯಕರು ಟಿಕೆಟ್ ಹಂಚಿಕೆಯಲ್ಲಿ ಬಾರೀ ಪ್ರಮಾಣದಲ್ಲಿ ಯಡವಟ್ಟು ಮಾಡಿಕೊಂಡಿದ್ದರಿಂದ ಭಾರೀ ಮುಖಭಂಗ ಅನುಭವಿಸುವಂತಾಗಿದೆ. ಬಹುತೇಕ ವಾರ್ಡ್‍ಗಳಲ್ಲಿ ಸಮರ್ಥರಿಗೆ ಟಿಕೆಟ್ ಹಂಚಿಕೆಯಾಗಿಲ್ಲವೆಂಬ ಅಸಮಧಾನ ಆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಮನೆ ಮಾಡಿತ್ತು.
ಪಕ್ಷದ ನಿಷ್ಠಾವಂತರಿಗೆ ಮತ್ತು ಗೆಲ್ಲುವ ಸಾಮಥ್ರ್ಯ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ಸಿಕ್ಕಿಲ್ಲ. ಪಕ್ಷದ ಮುಖಂಡರು ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ವಿಚಾರದಲ್ಲಿ ತೋರಿದ ಆಸಕ್ತಿ ಚುನಾವಣಾ ಪ್ರಚಾರದಲ್ಲಿ ತೋರಲಿಲ್ಲ ಎನ್ನುವ ಮಾತುಗಳು ಕಾಂಗ್ರೆಸ್ ವಲಯಲ್ಲಿ ಕೇಳಿ ಬರುತ್ತಿದೆ.
                ಜಾತ್ಯಾತೀತ ಜನತಾದಳದ್ದೂ ಇದೇ ಸ್ಥಿತಿ. ಹಿಂದಿನ ಅವಧಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಗೆದ್ದು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ನಡೆಸಿದ ಜೆಡಿಎಸ್ ನಾಯಕರು, ಈ ಚುನಾವಣೆಯಲ್ಲಿ ಮುಗ್ಗರಿಸಿದ್ದಾರೆ.
ನಗರಸಭೆ ಚುನಾವಣೆಯ ಹೊಣೆ ಹೊತ್ತಿದ್ದ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್‍ನ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜುಗೆ ಈ ಚುನಾವಣೆಯಲ್ಲಿ ಮುಖಭಂಗವಾಗಿದೆ. ಸ್ವತಃ ತಮ್ಮ ಪತ್ನಿ ಅವರನ್ನೂ ಗೆಲ್ಲಿಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link