ಚಳ್ಳಕೆರೆ
ತಾಲ್ಲೂಕಿನ ಕಸಬಾ ಹೋಬಳಿಯ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಇಲ್ಲಿನ ಬಿ.ಎಂ. ಸರ್ಕಾರಿ ಮೈದಾನದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು ಗುರುವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಗಳು ಆರೋಗ್ಯ ಸಂರಕ್ಷಣೆಗೆ ಉತ್ತಮ ಸಾಧನವಾಗಿದ್ದು, ಪ್ರತಿಯೊಬ್ಬ ಕ್ರೀಡಾಪಟುವು ಕ್ರೀಡಾಸ್ಪೂರ್ತಿಯಿಂದ ತಮ್ಮ ಆಟವನ್ನು ಪ್ರದರ್ಶಿಸಬೇಕು ಎಂದರು.
ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ, ತಾಲ್ಲೂಕಿನಿಂದ ಈಗಾಗಲೇ ಸರ್ಕಾರಿ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಯಶಸ್ಸಿಯಾಗಿ ಪೂರೈಸಲಾಗಿದೆ. ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಚಾಲನೆ ನೀಡಲಾಗಿದೆ. ತಾಲ್ಲೂಕಿನಲ್ಲಿ ಏರ್ಪಡಿಸಿದ್ದ ಎಲ್ಲಾ ಕ್ರೀಡೆಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಕ್ರೀಡಾಪಟುಗಳು ಉತ್ಸಾಹದಿಂದ ಪಾಲ್ಗೊಂಡಿರುವುದು ವಿಶೇಷವಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಷ್ಟೇ ಮಹತ್ವವನ್ನು ಕ್ರೀಡೆಗಳಿಗೆ ನೀಡುವ ಮೂಲಕ ಕ್ರೀಡೆಗೆ ವಿಶೇಷ ಗೌರವವನ್ನು ತಂದುಕೊಟ್ಟಿದ್ಧಾರೆ. ಕ್ರೀಡಾಪಟುಗಳಿಗೆ ಉತ್ತಮ ಸ್ಪೂರ್ತಿ ತುಂಬಿದ ತಾಲ್ಲೂಕಿನ ಎಲ್ಲಾ ದೈಹಿಕ ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ಎಚ್ಟಿಟಿ ಶಾಲೆಯ ಮುಖ್ಯೋಪಾಧ್ಯಾಯ ಎಚ್.ಅಜ್ಜಣ್ಣ, ಶಿಕ್ಷಕರ ಸಂಘದ ಕಾರ್ಯದರ್ಶಿ ಎ.ರಾಜಣ್ಣ, ಬಿಆರ್ಸಿ ಮಂಜಪ್ಪ, ಜಿಲ್ಲಾ ಅನುದಾನಿಯ ಶಾಲೆಗಳ ಒಕ್ಕೂಟದ ಅಧ್ಯಕ್ಷ ಸೂರನಾಯಕ, ಮುಂತಾದವರು ಭಾಗವಹಿಸಿದ್ದರು. ಬಿ.ಎಂ.ಶಾಲೆ ಮುಖ್ಯ ಶಿಕ್ಷಕ ಸಂಪತ್ಕುಮಾರ್ ಎಲ್ಲರನ್ನೂ ಸ್ವಾಗತಿಸಿದರು.