ದಾವಣಗೆರೆ: – ವಿನಾಯಕ ಪೂಜಾರ್
ಇಂಗ್ಲಿಷ್ ಎಂದರೆ ಕಬ್ಬಿಣದ ಕಡಲೆ ಎಂಬ ಮಾತು ಜನಜನಿತವಾಗಿದೆ. ಆದರಲ್ಲೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗಂತೂ ಎಣ್ಣೆ-ಸೀಗೆಕಾಯಿ ಸಂಬಂಧ. ಆದರೆ, ಇಲ್ಲೊಬ್ಬ ಶಾಲಾ ಶಿಕ್ಷಕರ ಪ್ರಯತ್ನದಿಂದ ಮಕ್ಕಳು ಸರಾಗವಾಗಿ ಇಂಗ್ಲಿಷ್ ಮಾತಾಡುವುದರ ಜೊತೆಗೆ ಈ ಭಾಷೆಯಲ್ಲಿಯೇ ವಿವಿಧ ಪ್ರಕಾರಗಳಲ್ಲಿ ಅಭಿನಯಿಸುತ್ತಾರೆ.
ಹೌದು… ದಾವಣಗೆರೆ ತಾಲೂಕಿನ ನರಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಪ್ರಕಾಶ್ ಕೊಡಗನೂರ್ ಅವರ ಪ್ರಯತ್ನದ ಫಲದಿಂದಾಗಿ ಈ ಶಾಲೆಯ ಮಕ್ಕಳು ಸುಲಲಿತವಾಗಿ ಇಂಗ್ಲಿಷ್ ಮಾತನಾಡುವುದರ ಜೊತೆಗೆ ನಾಟಕಾಭಿನಯ, ಪದ್ಯಾಭಿನಯ, ಏಕಪಾತ್ರಾಭಿನಯಗಳನ್ನು ಲಯಬದ್ಧವಾಗಿ ಪ್ರಸ್ತುತ ಪಡೆಸುವುದಲ್ಲದೇ ಸಂಭಾಷಣೆಯನ್ನು ನಡೆಸುತ್ತಾರೆ.
ಗ್ರಾಮೀಣ ಪ್ರದೇಶದ ಸಾಮಾನ್ಯ ಕುಟುಂಬದಲ್ಲಿ 1975ರಲ್ಲಿ ಜನಸಿದ ಪ್ರಕಾಶ್, ಸರ್ಕಾರಿ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿ, ಟಿಸಿಹೆಚ್ ತರಬೇತಿ ಪಡೆದು ಶಿಕ್ಷಕ ವೃತ್ತಿಗೆ ನೇಮಕವಾಗಿ, ವೃತ್ತಿಯ ಜೊತೆಜೊತೆಯಾಗಿಯೇ ದೂರ ಶಿಕ್ಷಣ ಯೋಜನೆಯಡಿಯಲ್ಲಿ ಇಂಗ್ಲಿಷ್ ಬಿ.ಇಡಿ ಪದವಿ ಪಡೆದಿದ್ದಾರೆ. ಇವರು ಶಿಕ್ಷಕ ವೃತ್ತಿ ಆರಂಭಿಸಿದ ಪ್ರಾರಂಭದ ದಿನಗಳಲ್ಲಿ ಇವರು ಹಾಗೂ ಸಹಪಾಠಿಗಳು ಇಂಗ್ಲಿಷ್ ಓದಲು, ಬರೆಯಲು ಹೆಣಗುತ್ತಿದ್ದ ವಿದ್ಯಾರ್ಥಿ ಜೀವನ ನೆನೆದು, ನಾವು ಪಟ್ಟ ಕಷ್ಟ ನಮ್ಮ ಶಾಲಾ ಮಕ್ಕಳ್ಯಾರೂ ಅನುಭವಿಸಬಾರದು ಹಾಗೂ ಇಂಗ್ಲಿಷ್ ಕಾನ್ವೆಂಟ್ ಮಕ್ಕಳಿಗೆ ಸರ್ಕಾರಿ ಶಾಲೆ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕೆಂಬ ಸಂಕಲ್ಪ ತೊಟ್ಟು, ಕಳೆದ 20 ವರ್ಷದ ವೃತ್ತಿ ಜೀವನದಲ್ಲಿ ಮಕ್ಕಳಿಗೆ ಇಂಗ್ಲಿಷ್ ಭೋದನೆ ಮಾಡುವುದಲ್ಲದೆ, ಮಕ್ಕಳನ್ನು ನಾಟಕಾಭಿನಯ, ಪದ್ಯಾಭಿನಯ, ಏಕಪಾತ್ರಾಭಿನಯಗಳಿಗೂ ಅಣಿ ಗೊಳಿಸುತ್ತಿದ್ದಾರೆ.
ಗ್ರಾಮೀಣ ಶಾಲೆ ಮಕ್ಕಳಲ್ಲಿರುವ ಇಂಗ್ಲಿಷ್ ಕಬ್ಬಿಣದ ಕಡಲೆ ಎಂಬ ಮನೋಭಾವವನ್ನು ದೂರವಾಗಿಸಿ, ಸುಲಿದ ಬಾಳೆ ಹಣ್ಣಾಗಿಸುವ ಉದ್ದೇಶದಿಂದ ಮಕ್ಕಳು ಸರವಾಗಿ ಉಚ್ಛರಿಬಹುದಾದ ಸರಳ ಭಾಷೆಯಲ್ಲಿಯೇ ಪ್ರಕಾಶ್ ಅವರು 2006ರಲ್ಲಿ ಲಿಟ್ಲ್ ಪ್ಲೇಯ್ಸ್, 2013ರಲ್ಲಿ ಎ ಸೀಕ್ರೆಟ್ ಬಿಹೈಂಡ್ ದ ಸ್ಯಾಕ್ರಿಫೈಸ್, 2015ರಲ್ಲಿ ಕಂಗ್ಲಿಷ್ ಪ್ಲೇಯ್ಸ್, 2017ರಲ್ಲಿ ರೋಲ್ ಪ್ಲೇಯ್ಸ್ ಕೃತಿಗಳನ್ನು ಸ್ವತಃ ರಚಿಸಿ, ಈ ಕೃತಿಗಳಲ್ಲಿ ಬರುವ ‘ದ ಸ್ಕಾಲರ್ಸ್ ಮದರ್ ಟಂಗ್’, ‘ಏಕಲವ್ಯ’, ‘ದ ವೈಸೇಸ್’, ‘ವಾಟ್ ಗಾಡ್ ಡಸ್’, ‘ದ ಸಿಕ್ ಲಯನ್’, ‘ದ ಹಂಗ್ರಿ ಉಲ್ಫ್’ ಸೇರಿದಂತೆ ಇನ್ನಿತರೆ ಕಿರು ನಾಟಕಗಳನ್ನು ಮಕ್ಕಳಿಗೆ ಕಲಿಸಿ, ವಿವಿಧ ವೇದಿಕೆಗಳಲ್ಲಿ ರಂಗ ಪ್ರದರ್ಶನ ಕೊಡಸಿದ್ದಾರೆ. ಈ ಕಿರು ನಾಟಕಗಳಲ್ಲಿ ಅಭಿನಯಿಸಿರುವ ಮಕ್ಕಳು ನಿರರ್ಗಳವಾಗಿ ತಮ್ಮ ಪಾತ್ರಗಳಲ್ಲಿ ಬರುವ ಡೈಲಾಗ್ ಡಿಲೇವರಿ ಮಾಡುವುದನ್ನು ನೋಡಿದ ಪ್ರೇಕ್ಷಕರು, ಅಧಿಕಾರಿಗಳು ಶಿಕ್ಷಕ ಪ್ರಕಾಶ್ ಅವರ ಶ್ರಮಕ್ಕೆ ಶಹಬ್ಬಾಸ್ಗಿರಿ ಸಹ ನೀಡಿದ್ದಾರೆ.
ಕೊಡಗನೂರ್ ಅವರ ಪ್ರಯತ್ನದಿಂದಾಗಿ ಈ ಶಾಲೆಯಲ್ಲಿ ಓದಿರುವ ಹಾಗೂ ಓದುತ್ತಿರುವ ಮಕ್ಕಳು ಸುಲಲಿತವಾಗಿ ಇಂಗ್ಲಿಷ್ ಮಾತನಾಡುತ್ತಾರೆ ಹಾಗೂ ಕನ್ನಡದಲ್ಲಿ ಯಾವುದೇ ಪದ ಹೇಳಿದರೂ ಅದನ್ನು ಕ್ಷಣಾರ್ಧದಲ್ಲಿ ಇಂಗ್ಲಿಷ್ಗೆ ತರ್ಜುಮೆ ಮಾಡಿ ಒಪ್ಪಿಸುತ್ತಾರೆ. ಹೀಗಾಗಿ ಈ ಶಿಕ್ಷಕ ಗ್ರಾಮಸ್ಥರು ಹಾಗೂ ಶಾಲೆಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ-ಪೋಷಕರಿಗೆ ಅಚ್ಚುಮೆಚ್ಚಾಗಿದ್ದಾರೆ.
ಇನ್ನೂ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಾಭಿರುಚಿ ಬೆಳೆಸಿಕೊಂಡು ಬಂದಿರುವ ಪ್ರಕಾಶ್ ಅವರು ಬರೆದ ಕಾವ್ಯಗಳು ವಿವಿಧ ಪತ್ರಿಕೆ, ನಿಯತ ಕಾಲಿಕೆಗಳಲ್ಲಿ ಪ್ರಕಟವಾಗಿವೆ. ಅಲ್ಲದೆ, ಇವರು 1999ರಲ್ಲಿ “ಭ್ರಮೆ” ನಾಟಕ, 2003ರಲ್ಲಿ “ಎರಡು ಹಳ್ಳಿಗಳ ನಡುವೆ” ಕವನ ಸಂಕಲನ ರಚಿಸಿ ಪ್ರಕಟಿಸಿದ್ದು, ಈಗಾಗಲೇ ಅಚ್ಚಾಗಿರುವ “ಯೇಟ್ಸ್ ಮತ್ತು ನಾನು” ಬಿಡುಗಡೆಗೆ ಸಿದ್ಧಗೊಂಡಿದೆ.
ಹೀಗೆ ಶಿಕ್ಷಕ ವೃತ್ತಿಯ ಜೊತೆ ಜೊತೆಗೆ ಇಂಗ್ಲಿಷ್ ಕಾನ್ವೆಂಟ್ ಮಕ್ಕಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಮಕಳ್ಳನ್ನು ರೂಪಿಸಿ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿರುವ ಇಂಗ್ಲಿಷ್ ಭಯವನ್ನು ದೂರ ಮಾಡುತ್ತಿರುವ ಪ್ರಕಾಶ್ ಕೊಡಗನೂರ್ ಅವರು ಸಾಹಿತ್ಯ ಕ್ಷೇತ್ರ ಸೇರಿದಂತೆ ಇತರೆ ಕ್ಷೇತ್ರಗಳಲ್ಲೂ ಸಮಾಜಮುಖಿಯಾಗಿ ಮುನ್ನಡೆಯುತ್ತಿರುವುದು ಇತರೆ ಶಿಕ್ಷಕರಿಗೂ ಮಾದರಿಯಾಗಬೇಕಾಗಿದೆ.
ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆ ಹಾಗೂ ಇಂಗ್ಲಿಷ್ ಕಾನ್ವೆಂಟ್, ಖಾಸಗಿ ಶಾಲೆ ವಿದ್ಯಾರ್ಥಿಗಳ ನಡುವೆ ಇರುವ ಶೈಕ್ಷಣಿಕ ಅಸಮಾನತೆ ಮೊದಲು ತೊಲಗಬೇಕಾಗಿದೆ. ಸರ್ಕಾರ ಶಾಲೆ ಮಕ್ಕಳೂ ಎಲ್ಲರಂತೆ ಪ್ರತಿಭಾವಂತರಾಗಿದ್ದು, ಅವರು ಖಾಸಗಿ ಶಾಲೆಯ ಮಕ್ಕಳಂತೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡಬಲ್ಲರು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲೂ ಸಾಧನೆಗೈಯಬಲ್ಲರು ಎಂಬುದಕ್ಕೆ ನಮ್ಮ ಶಾಲೆಯ ಮಕ್ಕಳೇ ಸಾಕ್ಷಿ.
-ಪ್ರಕಾಶ ಕೊಡಗನೂರ್, ಶಿಕ್ಷಕ, ನರಗನಹಳ್ಳಿ ಸರ್ಕಾರಿ ಶಾಲೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ