ಚಂದ್ರನ ಅಂಗಳದಲ್ಲಿ ಇಳಿಯಲಿದ್ದಾನೆ ವಿಕ್ರಮ….!

ಬೆಂಗಳೂರು: 

    ಚಂದ್ರನ ಅಂಗಳಕ್ಕೆಇಂದು  ಲ್ಯಾಂಡರ್ (ವಿಕ್ರಮ್ ಮತ್ತು ರೋವರ್) ಒಳಗೊಂಡಿರುವ ನೌಕೆ ಬುಧವಾರ ಸಂಜೆ 6:04ಕ್ಕೆ ಚಂದ್ರನ ಮೇಲೆ ಇಳಿಯಲಿದ್ದು.ಇದು ಯಶಸ್ವಿಯಾದರೆ ಭಾರತ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ನಾಲ್ಕನೇ ದೇಶವಾಗಲಿದೆ. ಚೀನಾ, ರಷ್ಯಾ, ಅಮೆರಿಕ ಈಗಾಗಲೇ ತಮ್ಮ ಪ್ರಯತ್ನದಲ್ಲಿ ಯಶಸ್ಸು ಕಂಡಿವೆ.

ಚಂದ್ರನ ಮೇಲೆ ಸಂಚರಿಸಿ, ಸ್ಥಳದಲ್ಲಿ ವೈಜ್ಞಾನಿಕ ಪ್ರಯೋಗ ನಡೆಸಲಿದೆ. 2019ರ ಸೆಪ್ಟೆಂಬರ್​ನಲ್ಲಿ ಚಂದ್ರಯಾನ-3 ವೇಳೆ ಲ್ಯಾಂಡರ್​ನಲ್ಲಿನ ಬ್ರೇಕಿಂಗ್ ಸಿಸ್ಟಮ್ ವೈಪರೀತ್ಯದಿಂದಾಗಿ ಲ್ಯಾಂಡರ್ ‘ವಿಕ್ರಮ್ ಚಂದ್ರನ ಮೇಲ್ಮೈಗೆ ಅಪ್ಪಳಿಸಿತ್ತು. ಹೀಗಾಗಿ ಸಾಫ್ಟ್ ಲ್ಯಾಂಡಿಂಗ್ ವಿಫಲವಾಗಿತ್ತು. 600 ಕೋಟಿ ರೂ. ವೆಚ್ಚದ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಲಾಗಿತ್ತು. 41 ದಿನಗಳ ಪ್ರಯಾಣದ ನಂತರ ಅದು ಚಂದ್ರನ ಕಕ್ಷೆ ತಲುಪಿದೆ.

    ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗಿ ಗೊತ್ತು ಪಡಿಸಿದ ಲ್ಯಾಂಡಿಂಗ್ ಪ್ರದೇಶದಲ್ಲಿ ಸೂರ್ಯೋದಯ ಕ್ಕಾಗಿ ಕಾಯುತ್ತಿದೆ ಎಂದು ಇಸ್ರೋ ಹೇಳಿದೆ. ಸಂಜೆ 5:45ರ ಸುಮಾರಿಗೆ ಅವರೋಹಣ ಪ್ರಕ್ರಿಯೆ ಪ್ರಾರಂಭಿಸುವ ನಿರೀಕ್ಷೆಯಿದೆ. ಚಂದ್ರಯಾನ-3 ಮಿಷನ್ ನಿಗದಿತವಾಗಿ ಕೆಲಸ ಮಾಡುತ್ತಿದೆ. ಲ್ಯಾಂಡಿಂಗ್ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಇಸ್ರೋ ಮಂಗಳವಾರ ದೃಢಪಡಿಸಿದೆ. ಲ್ಯಾಂಡರ್​ನ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (ಎಲ್​ಪಿಡಿಸಿ) ಮತ್ತು ಲ್ಯಾಂಡರ್ ಇಮೇಜರ್ ಕ್ಯಾಮೆರಾ ಸೆರೆಹಿಡಿದ ಚಂದ್ರನ ಚಿತ್ರಗಳನ್ನು ಇಸ್ರೋ ಮಂಗಳವಾರ ಬಿಡುಗಡೆ ಮಾಡಿದೆ. ಇವು ಚಂದ್ರನ ಅಕ್ಷಾಂಶ ಮತ್ತು ರೇಖಾಂಶ ನಿರ್ಧರಿಸುವಲ್ಲಿ ಸಹಾಯ ಮಾಡುತ್ತವೆ. ಅವುಗಳನ್ನು ಆನ್​ಬೋರ್ಡ್ ಚಂದ್ರನ ನಕ್ಷೆಯೊಂದಿಗೆ ಹೊಂದಿಸುವ ಮೂಲಕ ಸರಾಗವಾಗಿ ಲ್ಯಾಂಡಿಂಗ್ ಪ್ರಕ್ರಿಯೆ ನಡೆಯಲಿದೆ.

     ಸಾಫ್ಟ್ ಲ್ಯಾಂಡಿಂಗ್​ನ 17 ನಿಮಿಷಗಳ ನಿರ್ಣಾಯಕ ಪ್ರಕ್ರಿಯೆಯು ಯೋಜನೆಯ ಯಶಸ್ಸನ್ನು ನಿರ್ಧರಿಸುತ್ತದೆ ಇಸ್ರೋ ಅಧಿಕಾರಿಗಳು ಹೇಳಿದ್ದಾರೆ. ಲ್ಯಾಂಡರ್ ನಿಗದಿತ ಸಮಯ ಮತ್ತು ನಿಗದಿತ ಎತ್ತರದಲ್ಲಿ ಇರಬೇಕಾಗುತ್ತದೆ. ಎಂಜಿನ್​ಗಳು ಸರಿಯಾದ ಪ್ರಮಾಣದ ಇಂಧನವನ್ನು ಬಳಸಿ ಶಕ್ತಿ ಬಿಡುಗಡೆ ಮಾಡಬೇಕು. ಈ ಸಂಪೂರ್ಣ ಪ್ರಕ್ರಿಯೆಯನ್ನು ಲ್ಯಾಂಡರ್ ಸ್ವಯಂ ಚಾಲಿತವಾಗಿ ನಡೆಸುತ್ತದೆ. ಅಂತಿಮವಾಗಿ ಚಂದ್ರನ ಮೇಲೆ ರ್ಸ³ಸುವ ಮೊದಲು ಯಾವುದೇ ಅಡೆತಡೆಗಳು ಅಥವಾ ಬೆಟ್ಟಗಳು ಅಥವಾ ಕುಳಿಗಳಿಗಾಗಿ ಇಲ್ಲ ಎಂಬುದನ್ನು ಖಚಿತ ಮಾಡಿಕೊಳ್ಳಬೇಕು.

    ಕ್ಯಾಮೆರಾಗಳ ಮೂಲಕ ಚಂದ್ರನ ಮೇಲ್ಮೈಯನ್ನು ಸ್ಕಾಯನ್ ಮಾಡಿ ನೌಕೆ ಈ ಸ್ಥಳವನ್ನು ನಿರ್ಧಾರ ಮಾಡುತ್ತದೆ. ನಿಗದಿತ ಟಚ್​ಡೌನ್​ಗೆ ಒಂದೆರಡು ಗಂಟೆಗಳ ಮೊದಲು ಅಗತ್ಯವಿರುವ ಎಲ್ಲಾ ಕಮಾಂಡ್​ಗಳನ್ನು ಅಪ್​ಲೋಡ್ ಮಾಡಲಾಗುತ್ತದೆ. ಸುಮಾರು 30 ಕಿಮೀ ಎತ್ತರದಲ್ಲಿದ್ದಾಗ ಲ್ಯಾಂಡರ್ ಸ್ವಯಂಚಾಲಿತ ಬ್ರೇಕಿಂಗ್ ಹಂತವನ್ನು ಪ್ರವೇಶಿಸುತ್ತದೆ. ಅದರ ನಾಲ್ಕು ಥ್ರಸ್ಟರ್ ಎಂಜಿನ್​ಗಳ ರೆಟ್ರೋ ಫೈರಿಂಗ್ ಮೂಲಕ ಚಂದ್ರನ ಮೇಲ್ಮೈಯನ್ನು ಸಮೀಪಕ್ಕೆ ತರಲಾಗುತ್ತದೆ. ಕ್ರಮೇಣ ವೇಗವನ್ನು ಕಡಿಮೆ ಮಾಡಲಾಗುತ್ತದೆ. ಚಂದ್ರನ ಗುರುತ್ವಾಕರ್ಷಣೆಯು ಲ್ಯಾಂಡಿಂಗ್ ವೇಳೆ ಸಹಾಯ ಮಾಡುತ್ತದೆ. ಹೀಗಾಗಿ ವಿಕ್ರಮ್ ಲ್ಯಾಂಡರ್ ಕ್ರಾಯಷ್ ಆಗುವ ಸಾಧ್ಯತೆ ತೀರಾ ಕಡಿಮೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

     ಚಂದ್ರನ ದಕ್ಷಿಣ ಧ್ರುವದಲ್ಲಿ ಸೂರ್ಯನು ಮುಳುಗಿದ ಕ್ಷಣದಲ್ಲಿ ಸಂಪೂರ್ಣ ಕತ್ತಲೆ ಆವರಿಸಲಿದೆ. ತಾಪಮಾನವು ಮೈನಸ್ 180 ಡಿಗ್ರಿ ಸೆಲ್ಸಿಯಸ್​ನಷ್ಟು ಕಡಿಮೆಯಾಗುತ್ತದೆ. ಆದ್ದರಿಂದ ಇಲ್ಲಿ ಯಾವುದೇ ಜೀವಿಗಳು ಬದುಕುವುದು ಅಸಾಧ್ಯ. ಚಂದ್ರನ ಧ್ರುವೀಯ ಪ್ರದೇಶಗಳು ಅಲ್ಲಿನ ಪರಿಸರದ ಕಾರಣ ವಿಭಿನ್ನವಾದ ಪ್ರದೇಶಗಳಾಗಿವೆ. ಚಂದ್ರನನ್ನು ತಲುಪಿದ ಹಿಂದಿನ ಎಲ್ಲಾ ಬಾಹ್ಯಾಕಾಶ ನೌಕೆಗಳು ಸಮಭಾಜಕ ಪ್ರದೇಶದಲ್ಲಿ, ಸಮಭಾಜಕದ ಉತ್ತರ ಭಾಗದಲ್ಲಿ ಇಳಿದಿದ್ದವು. ಈ ಕಾರಣಕ್ಕೆ ಇಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಸುತ್ತ ಶಾಶ್ವತವಾಗಿ ನೆರಳಿನ ಪ್ರದೇಶ ಇದೆ. ಇಲ್ಲಿ ನೀರಿನ ಅಂಶ ಇರುವ ಸಾಧ್ಯತೆಯಿದೆ.

    ಸುಮಾರು 6.8 ಕಿಮೀ ಎತ್ತರದ ಕಕ್ಷೆ ತಲುಪಿದಾಗ ಎರಡು ಎಂಜಿನ್​ಗಳನ್ನು ಮಾತ್ರ ಬಳಸಲಾಗುತ್ತದೆ. ಇನ್ನೆರಡು ಎಂಜಿನ್​ಗಳನ್ನು ಸ್ಥಗಿತಗೊಳಿಸಲಾಗುತ್ತದೆ. ಲ್ಯಾಂಡರ್ ಇಳಿಯುತ್ತಿದ್ದಂತೆ ರಿವರ್ಸ್ ಥ್ರಸ್ಟ್ ಬಳಕೆ ಮಾಡಲಾಗುತ್ತದೆ. ಸುಮಾರು 150-100 ಮೀಟರ್ ಎತ್ತರವನ್ನು ತಲುಪಿದಾಗ ಲ್ಯಾಂಡರ್ ತನ್ನ ಸಂವೇದಕಗಳು ಮತ್ತು ಕ್ಯಾಮೆರಾಗಳನ್ನು ಬಳಸಿ, ಯಾವುದೇ ಅಡೆತಡೆಗಳಿವೆಯೇ ಎಂದು ಪರಿಶೀಲಿಸಲು ಚಂದ್ರನ ಮೇಲ್ಮೈ ಸ್ಕಾಯನ್ ಮಾಡುತ್ತದೆ. ನಂತರ ಮೃದುವಾಗಿ ಲ್ಯಾಂಡಿಂಗ್ ಮಾಡಲು ಪ್ರಾರಂಭಿಸುತ್ತದೆ. ಲ್ಯಾಂಡಿಂಗ್ ಪ್ರಕ್ರಿಯೆಯ ಪ್ರಾರಂಭದ ವೇಗವು ಪ್ರತಿ ಸೆಕೆಂಡಿಗೆ ಸುಮಾರು 1.68 ಕಿಲೋ ಮೀಟರ್ ಆಗಿರಲಿದೆ.

    ಲ್ಯಾಂಡರ್​ನಲ್ಲಿ ಸಮಸ್ಯೆ ಎದುರಾದರೆ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಆಗಸ್ಟ್ 27ಕ್ಕೆ ಮುಂದೂಡಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಲ್ಯಾಂಡರ್ ಮಾಡ್ಯೂಲ್​ನಲ್ಲಿ ಅಸಹಜತೆ ಕಂಡುಬಂದರೆ, ಅದರ ವೇಗವನ್ನು ನಿಯಂತ್ರಣ ಮಾಡಲು ಆಗದಿದ್ದರೆ ನಾವು ಲ್ಯಾಂಡಿಂಗ್ ಅನ್ನು ಆಗಸ್ಟ್ 27ಕ್ಕೆ ಮುಂದೂಡುತ್ತೇವೆ ಎಂದು ಅವರು ಹೇಳಿದ್ದಾರೆ.

   ರೋವರ್ ಚಂದ್ರನ ಮೇಲ್ಮೈಯಲ್ಲಿ ಕೇವಲ ಐನೂರು ಮೀಟರ್ ಸಂಚರಿಸಲಿದೆ. ಆದರೆ ಇದು ಚಂದ್ರನ ಮೂಲದಿಂದ ಇಲ್ಲಿಯವರೆಗೆ ಬಗೆಹರಿಯದ ಅನೇಕ ರಹಸ್ಯಗಳ ಬಗ್ಗೆ ಮಾಹಿತಿಯನ್ನು ಸಂಗ್ರಹ ಮಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

    ನೌಕೆಯು ಹಲವು ವೈಜ್ಞಾನಿಕ ಪೇಲೋಡ್​ಗಳನ್ನು ಹೊಂದಿದೆ. ಇದು ಚಂದ್ರನ ಮೇಲ್ಮೈ ಪ್ಲಾಸ್ಮಾ ಅಯಾನುಗಳು ಮತ್ತು ಎಲೆಕ್ಟ್ರಾನ್​ಗಳ ಸಾಂದ್ರತೆ, ಅದರ ಬದಲಾವಣೆಗಳನ್ನು ಅಳೆಯಲು ನೆರವಾಗುತ್ತದೆ. ಭೌತಿಕ ಪ್ರಯೋಗ, ಧ್ರುವ ಪ್ರದೇಶದ ಬಳಿ ಚಂದ್ರನ ಮೇಲ್ಮೈಯ ಉಷ್ಣ ಗುಣಲಕ್ಷಣಗಳ ಮಾಪನ, ಚಂದ್ರನ ಭೂಕಂಪನ ಚಟುವಟಿಕೆ, ಅಲ್ಲಿನ ಖನಿಜ ಸಂಯೋಜನೆ, ಚಂದ್ರನ ಹೊರಪದರ ರಚನೆ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ. ಚಂದ್ರನ ಮಣ್ಣು ಮತ್ತು ಬಂಡೆಗಳ ಧಾತುರೂಪದ ಸಂಯೋಜನೆಯನ್ನು ನಿರ್ಧರಿಸುತ್ತದೆ

 ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಕೈಗೊಂಡಿರುವ ಅತ್ಯಂತ ಮಹತ್ವದ ಸಾಹಸಕ್ಕೆ ಇಡೀ ವಿಶ್ವವೇ ಬೆರಗು ಗಣ್ಣಿನಿಂದ ನೋಡುತ್ತಿದೆ. ಈ ಅದ್ಭುತವನ್ನು ಸಾಧಿಸುವ ಮೂಲಕ ಬಾಹ್ಯಾಕಾಶದಲ್ಲಿ ಸಾಧನೆ ಮಾಡಿದ ಇತರ ರಾಷ್ಟ್ರಗಳಲ್ಲಿ ಭಾರತವೂ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಿದ್ಧವಾಗಿದೆ. ಏಕೆಂದರೆ ಇದು ಚಂದ್ರನ ದಕ್ಷಿಣ ಧೃವವನ್ನು ತಲುಪಲಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರವೇಶಿಸಿದ ಮೊದಲ ದೇಶವಾಗಿ ಭಾರತ ಗುರುತಿಸಿಕೊಳ್ಳಲಿದೆ.

     ಚಂದ್ರಯಾನ-3 ರ ಲ್ಯಾಂಡರ್ ಮಾಡ್ಯೂಲ್ ಮಾನವನ ಜಾಣ್ಮೆ ಮತ್ತು ನಿರ್ಣಯಕ್ಕೆ ಸಾಕ್ಷಿಯಾಗಿದೆ. ಲ್ಯಾಂಡರ್ ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಒಳಗೊಂಡಿರುವ LM, ಚಂದ್ರನ ಭೂಪ್ರದೇಶದಲ್ಲಿ ಅತ್ಯಂತ ಸುರಕ್ಷಿತವಾಗಿ ಹಗುರವಾಗಿ ಚಂದ್ರನ ನೆಲವನ್ನು ಸ್ಪರ್ಶಿಸುವ ಮೂಲಕ ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಬುಧವಾರ ಸಂಜೆ ಅಂದೆ ಇಂದು ಸರಿಯಾಗಿ ಸಂಜೆ 6:04 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಲ್ಯಾಂಡ್​ ಆಗಲಿದೆ.

    ಸಾಫ್ಟ್ ಲ್ಯಾಂಡಿಂಗ್ ನಂತರ ಲ್ಯಾಂಡರ್​ನ ಒಳಗಿರುವ ರೋವರ್ ಚಂದ್ರನ ಮೇಲ್ಮೈಗೆ ಇಳಿಯುತ್ತದೆ. ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳನ್ನು ಅಧ್ಯಯನ ನಡೆಸಲಿದೆ. ಚಂದ್ರನ ಒಂದು ದಿನ (ಭೂಮಿಯ ಸುಮಾರು 14 ದಿನಗಳು) ಕಾಲ ಇದು ಕೆಲಸ ಮಾಡಲಿದೆ. ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ಇದು ಕೈಗೊಳ್ಳಲಿದೆ. ಲ್ಯಾಂಡರ್ ಮತ್ತು ರೋವರ್​ಗಳು ಚಂದ್ರನ ಮೇಲ್ಮೈಯಲ್ಲಿ ವಿವಿಧ ಪ್ರಯೋಗಗಳನ್ನು ಕೈಗೊಳ್ಳಲು ವೈಜ್ಞಾನಿಕ ಪೇಲೋಡ್​ಗಳನ್ನು ಹೊಂದಿವೆ.

     ಪ್ರಧಾನಿ ಮೋದಿ ಮೂರು ದಿನ ದಕ್ಷಿಣ ಆಫ್ರಿಕಾದಲ್ಲಿ ಇರಲಿದ್ದು, ಆನ್​ಲೈನ್ ಮೂಲಕ ಇಸ್ರೋ ದೊಂದಿಗೆ ಸಂಪರ್ಕ ಸಾಧಿಸಿ ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ನೇರ ಪ್ರಸಾರವನ್ನು ವೀಕ್ಷಿಸಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap