ಆಂಧ್ರ ಪ್ರದೇಶ:
ಚಿತ್ತೂರಿನಲ್ಲಿ ಲಾರಿ ಡಿಕ್ಕಿ ಹೊಡೆದು ಮೂರು ಆನೆಗಳು ಸಾವನ್ನಪ್ಪಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲೆಯ ಪಲಮನೇರು ಮಂಡಲದಲ್ಲಿ ಅವಘಡ ನಡೆದಿದೆ. ಮಾಹಿತಿ ಪ್ರಕಾರ, ಕರ್ನಾಟಕದಿಂದ ಆಂಧ್ರ ಪ್ರದೇಶಕ್ಕೆ ಟೊಮೆಟೊ ಸಾಗಿಸುತ್ತಿದ್ದ ಲಾರಿ ರಸ್ತೆ ದಾಟುತ್ತಿದ್ದ ಆನೆಗಳ ಹಿಂಡಿಗೆ ಗುದ್ದಿದೆ. ಪರಿಣಾಮ ಮೂರು ಆನೆಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಅಪಘಾತದ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಈ ಹಿಂದೆ ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ರೈತರೊಬ್ಬರ ಹೊಲದ ಸುತ್ತ ಹಾಕಲಾಗಿದ್ದ ವಿದ್ಯುತ್ ಬೇಲಿ ತಗುಲಿ ಮೂರು ಆನೆಗಳು ಸಾವನ್ನಪ್ಪಿದ್ದವು. ಪಾಲಕೋಡ್ ಪ್ರದೇಶದಲ್ಲಿ ಘಟನೆ ನಡೆದಿತ್ತು.
ಆನೆಗಳ ಸಾವಿಗೆ ಕಾರಣವಾದ ರೈತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳ ಪ್ರಕಾರ, ಎರಡು ಮರಿ ಆನೆಗಳು ಸೇರಿದಂತೆ ಐದು ಆನೆಗಳ ಹಿಂಡು ಧರ್ಮಪುರಿ ಜಿಲ್ಲೆಯ ಮಾರಂಡಹಳ್ಳಿ ಬಳಿಯ ಕಲಿಕೌಂಡನ್ ಕೋಟೈ ಗ್ರಾಮದ ಮುರುಗೇಶನ್ ಎಂಬವರ ಬೆಳೆ ತಿನ್ನಲು ಮುಂಜಾನೆ ಬಂದಿದ್ದವು. ಮುರುಗೇಶನ್ ಹೊಲಕ್ಕೆ ಬೇಲಿ ಹಾಕಿ ಸಮೀಪದ ವಿದ್ಯುತ್ ಕಂಬದಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದರು. ಆನೆಗಳು ಬೇಲಿಯಿಂದ ಗದ್ದೆಗೆ ನುಗ್ಗಲು ಯತ್ನಿಸಿದ್ದು ತಂತಿ ತಗುಲಿ ಸ್ಥಳದಲ್ಲೇ ಸಾವನ್ನಪ್ಪಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ