ಜನತೆಗೆ ನೀಡಿದ ಭರವಸೆ ಉಳಿಸುವ ಬಜೆಟ್‌ ಮಂಡಿಸಿದ ಸಿಎಂ…

ಬೆಂಗಳೂರು

     ಜನತೆಗೆ ನೀಡಿದ ಐದು ಗ್ಯಾರಂಟಿ ಯೋಜನೆಗಳ ಈಡೇರಿಕೆಗೆ ಹಣ ಹೊಂದಿಸುವ,ಶಿಕ್ಷಣ,ನೀರಾವರಿ ಮತ್ತು ಇಂಧನ ಕ್ಷೇತ್ರಗಳಿಗೆ ಆದ್ಯತೆ ನೀಡುವ,3.37 ಲಕ್ಷ ಕೋಟಿ ರೂಪಾಯಿ ಗಾತ್ರದ 2023-24 ನೇ ಸಾಲಿನ ಪರಿಷ್ಕೃತ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಸಭೆಯಲ್ಲಿಂದು ಮಂಡಿಸಿದರು.

ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಈ ಹಿಂದಿನ ರಾಜ್ಯ ಸರ್ಕಾರಗಳ ಆರ್ಥಿಕ ನೀತಿ ತಮ್ಮ ಸರ್ಕಾರಗಳ ಆರ್ಥಿಕ ವೈಫಲ್ಯಗಳನ್ನು ನೇರವಾಗಿಯೇ ದೂರಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ,ಈ ನಡುವೆಯೇ ರಾಜ್ಯದ ಅಭಿವೃದ್ಧಿಗೆ ಪೂರಕವಾದ 8133 ಕೋಟಿ ರೂಗಳ ಕೊರತೆ ಬಜೆಟ್ಟನ್ನು ಮಂಡಿಸಿದ್ದಾರೆ.

3 ಲಕ್ಷ 37 ಸಾವಿರದ 747 ಕೋಟಿ ರೂ ಗಾತ್ರದ ಬಜೆಟ್ ಗೆ ಆರ್ಥಿಕ ಸಂಪನ್ಮೂಲವನ್ನು ಹೊಂದಿಸಲು ವಾಣಿಜ್ಯ ತೆರಿಗೆ,ಅಬಕಾರಿ,ನೋಂದಣಿ ಮತ್ತು ಮುದ್ರಾಂಕ ಮತ್ತು ಮೋಟಾರು ವಾಹನ ತೆರಿಗೆಗಳ ಬಾಬ್ತಿನಿಂದ ಹೆಚ್ಚಿನ ನಿರೀಕ್ಷೆ ಮಾಡಿರುವ ಮುಖ್ಯಮಂತ್ರಿಗಳು ಈ ವರ್ಷ 86 ಸಾವಿರ ಕೋಟಿ ರೂಪಾಯಿ ಸಾಲ ಪಡೆಯುವ ತೀರ್ಮಾನವನ್ನು ಪ್ರಕಟಿಸಿದ್ದಾರೆ.

ವಾಣಿಜ್ಯ ತೆರಿಗೆಗಳ ಮೂಲಕ ಒಂದು ಲಕ್ಷದ ಒಂದು ಸಾವಿರ ಕೋಟಿ ರೂಪಾಯಿ,ಅಬಕಾರಿಯಿಂದ ಮೂವತ್ತಾರು ಸಾವಿರ ಕೋಟಿ ರೂಪಾಯಿ,ನೋಂದಣಿ ಮತ್ತು ಮುದ್ರಾಂಕದ ಬಾಬ್ತಿನಿಂದ 25 ಸಾವಿರ ಕೋಟಿ ರೂಪಾಯಿ,ಮೋಟಾರು ವಾಹನ ತೆರಿಗೆಗಳಿಂದ 11,500 ಕೋಟಿ ರೂಪಾಯಿಗಳ ಆದಾಯ ನಿರೀಕ್ಷಿಸಲಾಗಿದೆ.

ಪರಿಣಾಮವಾಗಿ ಮಧ್ಯಪ್ರಿಯರ ಮೇಲೆ,ಭೂಮಿ ಖರೀದಿ ಮಾಡುವವರ ಮೇಲೆ ಮತ್ತು ಹೊಸ ವಾಹನಗಳನ್ನು ಕೊಳ್ಳುವವರ ಮೇಲೆ ಹೆಚ್ಚಿನ ಹೊರೆ ಬೀಳುವುದು ನಿಶ್ಚಿತವಾಗಿದೆ.

ಬಜೆಟ್ ಗೆ ಲಭ್ಯವಾಗುವ ಹಣದ ಪೈಕಿ ಶಿಕ್ಷಣಕ್ಕೆ 37,587 ಕೋಟಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣಕ್ಕೆ 24,166 ಕೋಟಿ,ಇಂಧನಕ್ಕೆ 22.779 ಕೋಟಿ,ನೀರಾವರಿಗೆ 19.044 ಕೋಟಿ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಗೆ 18.038 ಕೋಟಿ,ಒಳಾಡಳಿತ ಮತ್ತು ಸಾರಿಗೆಗೆ 16,638 ಕೋಟಿ,ಕಂದಾಯಕ್ಕೆ 16.167 ಕೋಟಿ,ಆರೋಗ್ಯಕ್ಕೆ 14950 ಕೋಟಿ,ಸಮಾಜ ಕಲ್ಯಾಣಕ್ಕೆ 11173 ಕೋಟಿ ರೂ ನೀಡಲಾಗಿದೆ.

ಇದೇ ರೀತಿ ಆಹಾರ ಮತ್ತು ನಾಗರೀಕ ಸರಬರಾಜಿಗೆ 10,460 ಕೋಟಿ,ಲೋಕೋಪಯೋಗಿಗೆ 10143 ಕೋಟಿ,ಕೃಇ ಮತ್ತು ಕೈಗಾರಿಕೆಗೆ 5860 ಕೋಟಿ,ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ 3024 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ನೀಡಲಾಗಿದೆ.

ಈ ಹಿಂದಿನ ಸರ್ಕಾರ ಮಂಡಿಸಿದ್ದ 3.09 ಕೋಟಿ ರೂಪಾಯಿಗಳ ಬಜೆಟ್ ಅನ್ನು ಪರಿಷ್ಕರಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಜೆಟ್ ಗಾತ್ರವನ್ನು ಪರಿಷ್ಕರಿಸಿ 3,27,747 ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದ್ದಾರೆ.

ಬಜೆಟ್ ನಲ್ಲಿ ಹೊಸ ಯೋಜನೆಗಳ ಜಾರಿಗೆ ಆದ್ಯತೆ ನೀಡುವ ಬದಲು,ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣ ಮಾಡಲು ಆದ್ಯತೆ ನೀಡಲಾಗಿದ್ದು,ಇದು ಕೇಂದ್ರ ಮತ್ತು ಈ ಹಿಂದಿನ ರಾಜ್ಯ ಸರ್ಕಾರದ ಆರ್ಥಿಕ ವೈಫಲ್ಯದ ಪರಿಣಾಮ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.

ಇದೇ ರೀತಿ ಈ ವರ್ಷ ಸರ್ಕಾರ ಮಾಡಲಿರುವ ಸಾಲದ ಪ್ರಮಾಣ ಈ ಹಿಂದೆ ಆಗಿರುವ ಒಟ್ಟಾರೆ ಸಾಲದ ಮೊತ್ತಕ್ಕೆ ಸೇರಿದರೆ ಕರ್ನಾಟಕದ ಹೆಗಲ ಮೇಲೆ ಆರು ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ಸಾಲದ ಗಂಟು ಕೂರಲಿದೆ.

ಈ ನಡುವೆಯೇ ಸರ್ಕಾರದ ವಿವಿಧ ಇಲಾಖೆಗಳ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗುವಂತಹ ಮತ್ತು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹಲವು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ.

ಗೃಹ ಜ್ಯೋತಿ,ಶಕ್ತಿ,ಅನ್ನಭಾಗ್ಯ,ಯುವ ನಿಧಿ ಮತ್ತು ಗೃಹ ಲಕ್ಷಿ÷್ಮ ಯೋಜನೆಗಳ ಮೂಲಕ ಸಮಾಜದ ಬಹುತೇಕರಿಗೆ ಸಾಮಾಜಿಕ ನ್ಯಾಯ ದಕ್ಕುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಮನೆ ಒಡತಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ನೀಡುವ ಗೃಹ ಲಕ್ಷಿ÷್ಮ ಯೋಜನೆಗೆ ಮೂವತ್ತು ಸಾವಿರ ಕೋಟಿ ರೂಪಾಯಿಗಳು ವೆಚ್ಚವಾಗಲಿದ್ದು ದೇಶದಲ್ಲಿ ಅತ್ಯಂತ ದೊಡ್ಡ ಭದ್ರತಾ ಖಾತರಿ ಯೋಜನೆಯಾಗಲಿದೆ ಎಂದಿದ್ದಾರೆ.

ಒಟ್ಟು135 ಪುಟಗಳನ್ನು ಹೊಂದಿರುವ ಬಜೆಟ್ ಪುಸಕ್ತದಲ್ಲಿ ಸಾಮಾಜಿಕ ನ್ಯಾಯದ ಅಗತ್ಯವನ್ನು ಪ್ರಸ್ತಾಪಿಸಿರುವ ಸಿದ್ದರಾಮಯ್ಯ,ಇದಕ್ಕಾಗಿ ಹಲವು ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳುವ ಮಾತನಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap