ಹರಿಹರ:
ನಗರ, ಪಟ್ಟಣಗಳಲ್ಲಿ ಸೃಷ್ಟಿಯಾಗುವ ಟನ್ನುಗಟ್ಟಲೆ ಕಸವನ್ನು ಸಮರ್ಪಕವಾಗಿ ಬಳಸಿಕೊಂಡರೆ ಸ್ಥಳೀಯ ಸಂಸ್ಥೆಗಳು ಆರ್ಥಿಕವಾಗಿ ಸ್ವಾವಲಂಬಿಯಾಗುತ್ತವೆ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ, ಪರಿಸರ ತಜ್ಞ ಅನಂತ ಹೆಗಡೆ ಆಶೀಸರ್ ಹೇಳಿದರು.
ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆ, ಪತ್ರಕರ್ತರ ಸಂಘ, ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ನಿಂದ ಶನಿವಾರ ಆಯೋಜಿಸಿದ್ದ ಜೈವಿಕ ಅನಿಲ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಕಸದಿಂದ ರಸ ಎಂಬ ಗಾದೆ ಮಾತನ್ನು ಪಾಲಿಕೆ, ನಗರಸಭೆ, ಪುರಸಭೆ, ಪಪಂ ಪಾಲಿಸಬೇಕು. ಉತ್ಪತ್ತಿಯಾಗುವ ಕಸವನ್ನು ಆದಾಯದ ಮೂಲವಾಗಿಸಬೇಕು. ಇದರಿಂದ ಬಯೋ ಗ್ಯಾಸ್, ವಿದ್ಯುತ್, ಗೊಬ್ಬರ ಉತ್ಪಾದಿಸಬೇಕು. ಇದರಿಂದ ಬರುವ ಆದಾಯ ಆ ಪಾಲಿಕೆಯ ವಾರ್ಷಿಕ ವೆಚ್ಚವನ್ನು ಭರಿಸಿ ಉಳಿತಾಯವನ್ನೂ ಮಾಡಬಹುದು. ಸರಕಾರದ ಅನುದಾನಕ್ಕೆ ಕೈಯೊಡ್ಡುವ ಅಗತ್ಯವಿಲ್ಲ ಎಂದರು.
ಸೋಲಾರ್ ಬಳಸಿ: ಸ್ಥಳೀಯ ಸಂಸ್ಥೆಗಳು ತಮ್ಮ ಕಚೇರಿಗಳಿಗೆ ಬೇಕಾದ ವಿದ್ಯುತ್ತನ್ನು ಸೋಲಾರ್ ಘಟಕದ ಮೂಲಕ ಪಡೆಯಬೇಕು. ಇದರಿಂದ ವಾರ್ಷಿಕ ಲಕ್ಷಾಂತರ ರೂ. ಉಳಿತಾಯವಾಗುತ್ತದೆ. ನನ್ನ ಮನೆಯಲ್ಲಿ ಅಳವಡಿಸಿರುವ ಸೋಲಾರ್ ಘಟಕದಿಂದ 2 ಕೆವಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದು ಇದರಲ್ಲಿ ಅರ್ಧ ಕೆವಿ ಬಳಸಿ ಉಳಿದ 1.50 ಕೆವಿ ವಿದ್ಯುತ್ ಕೆಇಬಿಗೆ 9.50 ರೂ. ಒಂದು ಯುನಿಟ್ನಂತೆ ಮಾರಾಟ ಮಾಡುತ್ತಿದ್ದೇನೆ ಎಂದರು.
ಬಯೋ ಗ್ಯಾಸ್: ಕಲ್ಯಾಣ ಮಂಟಪ, ಹೋಟಲ್, ಹಾಸ್ಟೆಲ್, ಅಕ್ಷರ ದಾಸೋಹ, ಅನ್ನ ದಾಸೋಹ ಮಾಡುವ ದೇವಸ್ಥಾನಗಳು ಕಿಚನ್ ವೇಸ್ಟಿನಿಂದ ಅಡುಗೆಗೆ ಬೇಕಾದ ಅನಿಲ ಉತ್ಪಾದಿಸಬಹುದು. ಇದು ನಾಲ್ವರು ಇರುವ ಚಿಕ್ಕ ಕುಟುಂಬದವರೂ ಅನುಸರಿಸಬಹುದು. ಮನೆಯ ಬಯೋ ಗ್ಯಾಸ್ಗೆ 20 ಸಾವಿರ ರೂ., ಹೋಟಲ್ ಇತರೆಡೆಗೆ 50 ಸಾವಿರ ರೂ. ವೆಚ್ಚದಲ್ಲಿ ಅಳವಡಿಸುವ ಬಯೋ ಗ್ಯಾಸ್ ಘಟಕದಿಂದ ಕೇವಲ 2 ವರ್ಷದಲ್ಲಿ ಹಾಕಿದ ಬಂಡವಾಳ ವಾಪಸ್ ಬರುತ್ತದೆ. ಅಡುಗೆ ಅನಿಲ ಖರೀದಿಸುವ ಅಗತ್ಯವೇ ಇರುವುದಿಲ್ಲ ಎಂದರು.
ನಮ್ಮಲ್ಲಿ ಉತ್ಪನ್ನವಾಗುವ ಕಸದಲ್ಲಿ ಶೇ.80 ರಷ್ಟನ್ನು ನಾವೆ ಮರು ಬಳಕೆ ಮಾಡಬಹುದಾಗಿದೆ. ಇದರಿಂದ ನಮಗೆ ಆರ್ಥಿಕ ಲಾಭವಾಗುತ್ತದೆ. ಸ್ಥಳೀಯ ಸಂಸ್ಥೆಗಳಿಗೆ ಕಸ ನಿರ್ವಹಣೆ ಹೊರೆ ಕಡಿಮೆಯಾಗುತ್ತದೆ ಜೊತೆಗೆ ಇಂಧನ ಖರೀದಿಯ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದರು.
ನಗರಸಭಾಧ್ಯಕ್ಷೆ ಸುಜಾತಾ ರೇವಣಸಿದ್ದಪ್ಪ ಹಾಗೂ ಪೌರಾಯುಕ್ತೆ ಎಸ್.ಲಕ್ಷ್ಮಿ ಮಾತನಾಡಿ, ಆಶೀಸರ್ರವರು ನೀಡಿರುವ ಸಲಹೆಗಳನ್ನು ಪಾಲನೆ ಮಾಡುತ್ತೇವೆ. ಮಾದರಿಯಾಗಿ ಕೆಲವು ಬಯೋಗ್ಯಾಸ್ ಘಟಕಗಳನ್ನು ಸ್ಥಾಪನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶೇಖರ್ ಗೌಡ ಪಾಟೀಲ್ ಮಾತನಾಡಿ, ಮನಸ್ಸಿದ್ದರೆ ಮಾರ್ಗ ಎಂಬಂತೆ ಇಂತಹ ಪರಿಸರ ಪೂರಕ ಘಟಕಗಳನ್ನು ಸ್ಥಾಪಿಸಲು ಹೋಟಲ್, ಕಲ್ಯಾಣ ಮಂಟಪದವರು ಮುಂದಡಿ ಇಡಬೇಕು. ಬಯೋ ಗ್ಯಾಸ್, ಸೋಲಾರ್ ಕುರಿತು ನಗರಸಭೆ ಜನರಲ್ಲಿ ವ್ಯಾಪಕ ಪ್ರಚಾರ ಮಾಡಬೇಕೆಂದರು.
ಸಿವಿಲ್ ಇಂಜಿನಿಯರ್ಸ್ ಸಂಘದ ಶಿವಪ್ರಕಾಶ್ ಶಾಸ್ತ್ರಿ, ನಗರಸಭಾ ಸದಸ್ಯರಾದ ಶಂಕರ್ ಖಟಾವ್ಕರ್, ಕೆ.ಮರಿದೇವ, ನಾಗರಾಜ್ ಮೆಹರ್ವಾಡೆ, ಎಇಇ ಬಿ.ಎಸ್.ಪಾಟೀಲ್, ಪರಿಸರ ಇಂಜಿನಿಯರ್ ಮಹೇಶ್ ಕೋಡಬಾಳ್, ಜೆಇ ಮಾಲತೇಶ್, ಟಿ.ನೌಷಾದ್, ಅಬ್ದುಲ್ ಹಮೀದ್, ಆರೋಗ್ಯ ನಿರೀಕ್ಷಕರಾದ ರವಿಪ್ರಕಾಶ್, ಬೀಮರಾಯ, ಸಂತೋಷ್, ಹೋಟಲ್ ಮಾಲಿಕ ರಾಘವೇಂದ್ರ, ಪ್ರಕಾಶ್ ಕೋಳೂರು, ಎಂ.ಗುರುನಾಥ್, ಕೆ.ಬಿ.ರಾಜಶೇಖರ್ ಇತರರಿದ್ದರು
