ಹುಳಿಯಾರು
ಹುಳಿಯಾರು ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಅಪೂರ್ಣಗೊಂಡಿರುವ ಶುದ್ಧ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮದ ಜನರಿಗೆ ಶುದ್ಧ ನೀರು ಪೂರೈಸುವಂತೆ ಗ್ರಾಮಸ್ಥ ಟಿ.ಸಿ.ಮಂಜುನಾಥ್ ಅವರು ಮನವಿ ಮಾಡಿದ್ದಾರೆ.
ತೊರೆಸೂರಗೊಂಡನಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರು ಸಿಗದೆ ಇಲ್ಲಿನ ನಿವಾಸಿಗಳು ಹುಳಿಯಾರಿನಿಂದ ನೀರು ಕೊಂಡೊಯ್ಯು ತ್ತಿದ್ದರು. ನಿತ್ಯ ಮೂರ್ನಲ್ಕು ಕಿ.ಮೀ ನೀರಿಗಾಗಿ ಬಂದೋಗುವ ಸಮಸ್ಯೆ ಅರಿತ ಅಂದಿನ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರು ತಮ್ಮ ಅನುದಾನದಲ್ಲಿ ಗ್ರಾಮಕ್ಕೆ ಶುದ್ಧ ನೀರಿನ ಘಟಕ ಮಂಜೂರು ಮಾಡಿಸಿದ್ದರು.
ಗುತ್ತಿಗೆದಾರರೂ ಸಹ ಮಂಜೂರಾದ ತಕ್ಷಣ ಕಾಮಗಾರಿಯನ್ನು ಆರಂಭಿಸಿ ಘಟಕದ ಕೊಠಡಿ ನಿರ್ಮಾಣ ಮಾಡಿದರು. ಈ ಮಾರ್ಗದಲ್ಲಿ ಪ್ರವಾಸದಲ್ಲಿದ್ದ ಎಸ್.ಪಿ.ಮುದ್ಧಹನುಮೇಗೌಡ ಅವರನ್ನು ಕರೆತಂದು ಕಾಮಗಾರಿ ತೋರಿಸಿದರು. ನಂತರದ ದಿನದಲ್ಲಿ ಲೋಕಸಭಾ ಚುನಾವಣೆ ನೆಪದಲ್ಲಿ ಕಾಮಗಾರಿ ಸ್ಥಗಿತ ಮಾಡಿದವರು ಚುನಾವಣೆ ಮುಗಿದು ಆರೇಳು ತಿಂಗಳಾಗಿದ್ದರೂ ಸಹ ಇತ್ತ ತಿರುಗಿ ನೋಡುತ್ತಿಲ್ಲ.
ಕೊಳವೆಬಾವಿಯಿಂದ ಪೈಪ್ ಲೈನ್ ಮಾಡಿ ನೀರಿನ ಸಂಪರ್ಕ ಕೊಡುವ, ಆರ್ಓ ಪ್ಲಾಂಟ್ ಸ್ಥಾಪಿಸುವ ಕೆಲಸಗಳು ಇನ್ನೂ ಬಾಕಿ ಉಳಿದಿದೆ.
ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸಿ ಗ್ರಾಮದ ಜನರಿಗೆ ಶುದ್ಧ ನೀರು ಕೊಡುವಂತೆ ಗುತ್ತಿಗೆದಾರರಿಗೆ ಖಡಕ್ ಸೂಚನೆ ಕೊಟ್ಟು ಕೆಲಸ ಮಾಡಿಸಬೇಕಿದೆ. ಗ್ರಾಮದ ಜನರಿಗೆ ಶುದ್ಧ ನೀರು ಕುಡಿಯುವ ಭಾಗ್ಯ ಕೊಟ್ಟು ಈ ಮೂಲಕ ನಿತ್ಯ ನೀರು ತರಲು ಹುಳಿಯಾರಿಗೆ ಟಿ.ಎಸ್.ಹಳ್ಳಿ ಜನ ಓಡಾಡುವುದನ್ನು ತಪ್ಪಿಸಬೇಕಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
