ಮಧುಗಿರಿ:
ವಿಶ್ವದಲ್ಲಿಯೇ ವೈವಿಧ್ಯ ಕ್ಷೇತ್ರಗಳಲ್ಲಿ ವಿದ್ಯಾದಾನ ಶ್ರೇಷ್ಠ ಹಾಗೂ ಉನ್ನತ ವೃತ್ತಿ ಬಾಂಧವರನ್ನು ಸೃಷ್ಠಿಸುವ ಪವಿತ್ರವಾದ ಮಾತೃ ವೃತ್ತಿ ಶಿಕ್ಷಕ ವೃತ್ತಿಯಾಗಿರುತ್ತದೆ ತುಮಕೂರು ಹಿರೇಮಠ ಸುಕ್ಷೇತ್ರದ ಪೀಠಾಧ್ಯಕ್ಷ ಶ್ರೀಶ್ರೀಶ್ರೀ ಶಿವಾನಂದಶಿವಾಚಾರ್ಯಮಹಾಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣರವರ 131 ನೇ ಜಯಂತಿ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು. ಮಕ್ಕಳು ಕೇಳಿ ತಿಳಿಯುವುದಕ್ಕಿಂತ ನೋಡಿ ಕಲಿಯುವುದೇ ಹೆಚ್ಚು ಆದ್ದರಿಂದ ಶಿಕ್ಷಕರ ಪ್ರತಿ ಕ್ಷಣವೂ ಜಾಗ್ರತೆಯಿಂದಿರಬೇಕು. ಇತ್ತೀಚೆಗೆ ಮಾಧ್ಯಮಗಳು ತ್ವರಿತಗತಿಯಲ್ಲಿರುವುದರಿಂದ ಶಿಕ್ಷಕರು ಪುನಃಚೇತನರಾಗುತ್ತಿರಬೇಕು, ಇಲ್ಲವಾದಲ್ಲಿ ಗುರುದೇವೋಭವ ಅನ್ನುವುದರ ಬದಲು ಗೂಗ್ಲಿ ದೇವೋಭವ ಎನ್ನಬೇಕಾಗುತ್ತದೆ ಎಂದರು.
ಶಾಸಕ ಎಂ.ವಿ.ವೀರಭದ್ರಯ್ಯ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣರವರು ಬಡ ಕುಟುಂಬದಲ್ಲಿ ಸೆಪ್ಟಂಬರ್ 5, ರಂದು ಜನ್ಮ ತಳಿದು ಓದಲೇ ಬೇಕು ಎಂಬ ಹಂಬಲದಿಂದ ತಮಗೆ ಬರುವ ವಿದ್ಯಾರ್ಥಿ ವೇತನದಿಂದಲೇ ವ್ಯಾಸಂಗ ಮಾಡುತ್ತಾ ಪ್ರಾಥಮಿಕ ಪ್ರೌಢ ಶಿಕ್ಷಣವನ್ನು ಮುಗಿಸಿದರು. 20ನೇ ವಯಸ್ಸಿನಲ್ಲಿ ದಿ ಎಥಿಕ್ಸ್ ಆಪ್ ವೇದಾಂತ ಎಂಬ ಪ್ರಬಂಧವನ್ನು ಪ್ರಕಟಣೆ ಮಾಡುತ್ತಾರೆ. ದೇಶದ ಮಹಾನ್ ಚೇತನರಾಗಿದ್ದಾರೆ ಇವರ ಆದರ್ಶಗಳನ್ನು ನೋಡಿ ಅದನ್ನು ಪಾಲಿಸುವ ಕರ್ತವ್ಯ ಶಿಕ್ಷಕರು, ನನ್ನದು, ಸಮಾಜದ್ದು ಸಹ ಆಗಿರುತ್ತದೆ ಎಂದರು.
ತಾಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ, ಉಪನಿರ್ದೇಶಕ ರವಿಶಂಕರರೆಡ್ಡಿ ಡಯಟ್ ಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ, ಕ್ಷೇತ್ರಶಿಕ್ಷಣಾಧಿಕಾರಿ ನರಸಿಂಹಯ್ಯ ಶಿಕ್ಷಕರಾದ ವೆಂಕಟರಂಗಾರೆಡ್ಡಿ, ರಂಗಧಾಮಯ್ಯ, ವೆಂಕಟರಾಮು, ಮಲ್ಲಿಕಾರ್ಜುನಯ್ಯ ಮುಂತಾದವರು ಉಪಸ್ಥಿತರಿದ್ದರು.