ಡ್ಯಾಂ ನಕ್ಷೆ ಬದಲಾವಣೆ: ಸಣ್ಣ ರೈತರಿಗೆ ಅನ್ಯಾಯ

 ಚಿಕ್ಕನಾಯಕನಹಳ್ಳಿ:

      ಕೆಲವೇ ಜನರ ಹಿತ ಕಾಯಲು ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಗಾಗಿ ರೂಪಿಸಿದ್ದ ಡ್ಯಾಂ ನಕ್ಷೆಯನ್ನು ಬದಲಾಯಿಸಿ ಸಣ್ಣ ಹಾಗೂ ಅತಿಸಣ್ಣ ರೈತರ ಜಮೀನುಗಳನ್ನು ಕಬಳಿಸುವ ನಕ್ಷೆ ತಯಾರಿ ನಡೆಯುತ್ತಿದ್ದು ಇದರಿಂದ ಜೀವನ ನಡೆಸಲು ಕೃಷಿ ಭೂಮಿಯನ್ನೇ ನೆಚ್ಚಿಕೊಂಡಿರುವ ರೈತರಿಗೆ ದಿಕ್ಕೇತೋಚದಂತಾಗಿದೆ ಎಂದು ತಾಲ್ಲೂಕಿನ ತಿತ್ತಿಗೊರವನಪಾಳ್ಯ, ಚುಂಗನಹಳ್ಳಿ, ಕೊಡಲಾಗರ, ಶಿವಲಿಂಗನಪಾಳ್ಯ, ಅಲ್ಕೂರಲಿಂಗಯ್ಯನಪಾಳ್ಯ, ಗಂಟಿಗನಪಾಳ್ಯದ ಗ್ರಾಮಸ್ಥರು ಆರೋಪಿಸಿದ್ದಾರೆ.

      ತಾಲ್ಲೂಕಿನ ಈ ಗ್ರಾಮಗಳು ಕೃಷಿ ಆಧಾರಿತ ಗ್ರಾಮಗಳಾಗಿವೆ. ಕಳೆದ ಎರಡು ವರ್ಷಗಳಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಎತ್ತಿನಹೊಳೆ ಯೋಜನೆಯ ಅಡಿಯಲ್ಲಿ ತಾಲ್ಲೂಕಿನ ಅಗಸರಹಳ್ಳಿ ಬಳಿ ನೈಸರ್ಗಿಕವಾಗಿ ಹರಿಯುವ ಹಳ್ಳಿಯೊಂದಕ್ಕೆ ಅಣೆಕಟ್ಟು ಮಾಡಲು ಖಾಸಗಿ ಸಹಭಾಗಿತ್ವದ ಸರ್ವೆ ಕಂಪನಿಯು ಸರ್ವೆ ನಡೆಸಿತ್ತು. ಸ್ಥಳ ನಕ್ಷೆ, ಮಣ್ಣು ಪರೀಕ್ಷೆಯನ್ನೂ ಸಹ ಮಾಡಿಸಲಾಗಿತ್ತು. ಈ ಸ್ಥಳ ಬಹು ಹಿಂದೆ ಮೈಸೂರು ಒಡೆಯರ ಕಾಲದ ಚೆಕ್ ಡ್ಯಾಂ(ಒಡವು) ಜಾಗಕ್ಕೆ ಸರ್ವೆಯವರು ಸ್ಥಳ ಗುರುತಿಸಿದ್ದರೆಂದು ಕಳೆದ ಒಂದು ವರ್ಷದಿಂದಲೂ ಕೇಳಿ ಬರುತ್ತಿತ್ತು. ಜೊತೆಗೆ ಅಂತರ್ಜಾಲದಲ್ಲಿಯೂ ನಕ್ಷೆ ಕೂಡ ತಲುಪಿತ್ತು. ಆದರೆ ಕಳೆದ 15 ದಿನಗಳಿಂದೀಚೆಗೆ ಈಗ ನಡೆಸುತ್ತಿರುವ ಖಾಸಗಿ ಸಹಬಾಗಿತ್ವದ ಸರ್ವೆ ಕಂಪನಿಯು ಮೊದಲಿನ ಡ್ಯಾಂ ಸ್ಥಳವನ್ನು ಬಸಲಾಯಿಸಿ ತಾಲ್ಲೂಕಿನ ಬೇಟೆರಂಗನಹಳ್ಳಿ ಗ್ರಾಮದ ಸರ್ವೆ ನಂಬರ್‍ಗಳಲ್ಲಿ ಮಣ್ಣು ಪರೀಕ್ಷೆ, ಸರ್ವೆ ಮತ್ತು ನಕ್ಷೆಯನ್ನು ಮರುನಿರ್ಮಿಸಿ ಅಳತೆ ಮಾಡಲಾಗುತ್ತಿದೆ. ಇದು ಹೀಗೆ ತಕ್ಷಣ ಬದಲಾಗಲು ಕಾಣದ ಕೈಗಳ ಕೈವಾಡವೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.

      ಮೊದಲಿನ ನಕ್ಷೆಯಲ್ಲಿ ಡ್ಯಾಂ ನಿರ್ಮಿಸಿದರೆ ಈ ಭಾಗದ ಕಡುಬಡವರು ಹಾಗೂ ಸಣ್ಣ, ಅತಿಸಣ್ಣ ಹಿಡುವಳಿದಾರರಿಗೆ ಬಹಳ ಅನುಕೂಲವಾಗುತ್ತಿತ್ತು. ಆದರೆ ಈಗ ಮರು ರೂಪಿಸಿ ಬದಲಾಯಿಸಲಾಗಿರುವ ಸ್ಥಳದಲ್ಲಿ ಸಣ್ಣ ಹಾಗೂ ಅತಿಸಣ್ಣ ರೈತರ ಜಮೀನುಗಳೇ ಬಹುಪಾಲು ಮುಳುಗಡೆಯಾಗಲಿವೆ. ಖಾಸಗಿ ಸರ್ವೆ ಕಂಪನಿಯು ಕೆಲವೇ ಜನರ ಹಿತ ಕಾಯುವಂತಹ ಸರ್ವೆ ನಡೆಸಿ ನಕ್ಷೆ ರೂಪಿಸಿ, ಮಣ್ಣು ಸರ್ವೆ ನಡೆಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರಿಂದ ಸಣ್ಣಹಿಡುವಳಿದಾರರ ಕುಟುಂಬಗಳು ಬೀದಿ ಪಾಲಾಗುವ ಸಂಭವವೇ ಹೆಚ್ಚಾಗಿದೆ ಹಾಗೂ ಖಾಸಗಿ ಸರ್ವೆ ಕಂಪನಿಯ ಮುಖ್ಯಸ್ಥ ಈ ಭಾಗದವರೇ ಆಗಿದ್ದು ತನ್ನವರ ಅನುಕೂಲಕ್ಕೆ ಆಗುವಂತಹ ಸರ್ವೆ ಸ್ಕೆಚ್ ಮಾಡಿ ಡ್ಯಾಂ ನಿರ್ಮಿಸಲು ಹುನ್ನಾರಗಳನ್ನು ಮಾಡುವಂತೆ ಕಾಣುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

      ಒಂದು ವರ್ಷದ ಹಿಂದೆ ಗುರುತಿಸಿದ ನಕ್ಷೆ ಮತ್ತು ಸರ್ವೆ ಸ್ಥಳವನ್ನು ಈಗ ಏಕೆ ಕೈಬಿಡಲಾಯಿತು ಎಂಬ ಪ್ರಶ್ನೆ ಹಾಕಿರುವ ಗ್ರಾಮಸ್ಥರು ಈಗ ಮಾಡಲಾಗುತ್ತಿರುವ ಸರ್ವೆಯಿಂದಾಗಿ ಸಣ್ಣ ಹಿಡುವಳಿದಾರರನ್ನು ಒಕ್ಕಲೆಬ್ಬಿಸುವಂತಿದೆ. ಸಣ್ಣ ಹಿಡುವಳಿದಾರರಾದ ನಾವು ಇರುವ ಭೂಮಿಯನ್ನೇ ಹೊಟ್ಟೆಪಾಡಿನ ಮೂಲವನ್ನಾಗಿ ಮಾಡಿಕೊಂಡು ಬದುಕುತ್ತಿದ್ದೇವೆ. ನಮಗೆ ಭೂಮಿಯೇ ಮುಖ್ಯ, ನಮ್ಮ ಜಮೀನಿನಲ್ಲಿ ಮಣ್ಣು ಪರೀಕ್ಷೆ ಮಾಡುತ್ತಿರುವ ಬಗ್ಗೆ ತಡೆಯಲು ಹೋದರೆ ಬೆದರಿಕೆಯನ್ನು ಹಾಕುತ್ತಿದ್ದಾರೆ. ಅವರ ಬೆದರಿಕೆಗೆ ಧ್ವನಿಯಿಲ್ಲದೆ ಪತ್ರಿಕೆಗೆ ಮಾಹಿತಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಎತ್ತಿನಹೊಳೆ ಯೋಜನೆ ಬೇಡವೆಂದು ಹೇಳುತ್ತಿಲ್ಲ :

      ಎತ್ತಿನಹೊಳೆ ಯೋಜನೆಯ ಬಗ್ಗೆ ಮೊದಲು ಸರ್ವೆ ಕಾರ್ಯ ನಡೆಸಿದ್ದ ಜಾಗದಲ್ಲೇ (ಅಗಸರಹಳ್ಳಿ ಭಾಗದಲ್ಲಿ )ಯೋಜನೆ ರೂಪಿಸಿ ಆದರೆ ಜಮೀನನ್ನೇ ನಂಬಿಕೊಂಡು ಜೀವನ ನಿರ್ವಹಿಸುತ್ತಿರುವ ಸಣ್ಣಹಿಡುವಳಿದಾರರ ಭೂಮಿಗೆ ಕೈ ಹಾಕಬೇಡಿ ಎಂದಿರುವ ಅವರು, ಎತ್ತಿನಹೊಳೆ ನೀರು ಹರಿಯುವ ಭಾಗದಲ್ಲಿ ಸುಮಾರು 32ಕೆರೆಗಳನ್ನು ಹೇಮಾವತಿ ಕಾಲುವೆ ಮೂಲಕವಾಗಲಿ ಅಥವಾ ಎತ್ತಿನ ಹೊಳೆ ಯೋಜನೆ ಮೂಲಕವಾಗಲಿ ನೀರು ತುಂಬಿಸಿದರೆ ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಕುಡಿಯುವ ನೀರಿನ ಕೊಳವೆ ಬಾವಿಗಳು ನೀರು ತುಂಬಿಕೊಳ್ಳುತ್ತವೆ ಆಗ ಕುಡಿಯುವ ನೀರಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕೃಷಿಗೆ ಬೇಕಾಗುವ ನೀರು ದೊರಕಿದಂತೆಯೂ ಆಗುತ್ತದೆ ಎಂದಿದ್ದಾರೆ.

ಹೋರಾಟಕ್ಕೆ ಸಿದ್ದ :

     ಸ್ವಹಿತ ಸಾಧನೆಗಾಗಿ ಕೆಲವೇ ಜನರ ಪ್ರೇರಣೆಯಿಂದ ನಮ್ಮ ಭಾಗದಲ್ಲಿ ಸರ್ವೆ ಮಾಡಲು ಬಂದಿರುವ ಸರ್ವೆ ಕಂಪನಿಯ ವಿರುದ್ದ ಯಾವುದೇ ಸ್ವರೂಪದ ಹೋರಾಟಕ್ಕೂ ಸಿದ್ದವಾಗಬೇಕಾಗುತ್ತದೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Recent Articles

spot_img

Related Stories

Share via
Copy link