ತುಮಕೂರು :
ನಗರದ ಎಸ್ಪಿ ಕಚೇರಿ ಸಮೀಪ, ಬಿ.ಹೆಚ್.ರಸ್ತೆಯ ಜನನಿಬಿಡ ಪ್ರದೇಶದಲ್ಲಿ ಬುಧವಾರ ರಾತ್ರಿ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ರೌಡಿ ಶೀಟರ್ ಮಂಜುನಾಥ್(35) ಎಂಬಾತನನ್ನು ಗುಂಪೊಂದು ಕೊಲೆ ಮಾಡಿ ಪರಾರಿಯಾಗಿದೆ.
ಎಸ್ಪಿ ಡಾ. ವಂಶಿಕೃಷ್ಣ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹೊಸಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ ನೇತೃತ್ವದಲ್ಲಿ ತಿಲಕ್ ಪಾಕ್ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಮುನಿರಾಜು, ನಗರ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಒಳಗೊಂಡ ತಂಡ ರಚಿಸಲಾಗಿದೆ.
ಬಟವಾಡಿ ಪ್ರದೇಶದಲ್ಲಿ ಮತ್ತೊಂದು ಕೊಲೆ ಇದಾಗಿದೆ. 22ನೇ ವಾರ್ಡ್ ಬಟವಾಡಿಯ ಹಿಂದಿನ ನಗರ ಸಭೆ ಸದಸ್ಯ ಆಂಜನಪ್ಪನನ್ನು ಅಗ್ನಿಶಾಮಕ ದಳ ಕಚೇರಿ ಸಮೀಪ ರೈಲ್ವೇ ಗೇಟ್ ಬಳಿ ಕೊಲೆ ಮಾಡಲಾಗಿತ್ತು, ಆದಾದ ನಂತರ ನಗರಪಾಲಿಕೆ ಮಾಜಿ ಮೇಯರ್, ಇದೇ ವಾರ್ಡಿನ ಕಾರ್ಪೊರೇಟರ್ ರವಿಕುಮಾರ್ನನ್ನು ಗುಂಪೊಂದು ಬಟವಾಡಿ ಸೇತುವೆ ಕೆಳಗೆ ಬರ್ಬರವಾಗಿ ಹತ್ಯೆ ಮಾಡಿತ್ತು. ಈಗ ಮಂಜುನಾಥನ ಕೊಲೆಯು ಈ ಗುಂಪುಗಳ ಮನಸ್ತಾಪದ ಮುಂದುವರೆದ ಕೊಲೆ ಪ್ರಕರಣ ಎಂದು ಪೊಲಿಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ 10.30ರ ಸಮಾರಿನಲ್ಲಿ ಎಸ್ಐಟಿ ಸಮೀಪರ ಮಂಜುಶ್ರೀ ಲಿಕ್ಕರ್ನಲ್ಲಿ ಮದ್ಯಸೇವಿಸಿ ಮಂಜುನಾಥ್ ಹೊರಗೆ ಬರುತ್ತಿದ್ದಂತೆ ಅಲ್ಲಿ ಹೋಚು ಹಾಕಿದ್ದ ಗುಂಪು ಮಂಜುನಾಥನಿಗೆ ಹಿಂಬದಿಯಿಂದ ಡ್ರಾಗರ್ನಲ್ಲಿ ಇರಿದು, ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಮಂಜುನಾಥನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ವಿಫಲವಾಗಿ ಆತ ರಾತ್ರಿ 11.30ರ ಸುಮಾರಿಗೆ ಮೃತಪಟ್ಟನು ಎಂದು ಹೇಳಲಾಗಿದೆ.
ಆರೋಪಿಗಳ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆರೋಪಿಗಳು ಸೆರೆ ಸಿಕ್ಕ ಮೇಲೆ ಗೊತ್ತಾಗುತ್ತದೆ. ಒಂದೆರಡು ದಿನಗಳಲ್ಲಿ ಪತ್ತೆ ಮಾಡಿ ಬಂಧಿಸಲಾಗುವುದು. ಆರೋಪಿಗಳ ಸುಳಿವಿಗೆ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಾ ಫೂಟೇಜ್ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಎಸ್ಪಿ ಡಾ. ವಂಶಿಕೃಷ್ಣ ಹೇಳಿದರು.
ಇಸ್ಪೀಟ್, ಬಡ್ಡಿ ದಂಧೆ ಸಂಬಂಧ 2013ರಲ್ಲಿ ಮಂಜುನಾಥನ ವಿರುದ್ಧ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಜೊತೆಗೆ ಈತ ಪೊಲೀಸ್ ಮಾಹಿತಿದಾರನಾಗಿದ್ದ ಎಂದು ಹೇಳಲಾಗಿದೆ.
ಮೂರು ದಿನಗಳ ಹಿಂದೆ ಮಂಜುನಾಥ್ ಒಳಗೊಂಡ ಎರಡು ತಂಡಗಳ ನಡುವೆ ಜಗಳವಾಗಿತ್ತು. ಜಗಳವಾಡದಂತೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ಗೊತ್ತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/12/IMG-20201203-WA0021.jpg)