ಶಿರಾ
ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಮಂಜೂರಾದ ಶೌಚಾಲಯಗಳನ್ನು ಅರ್ಹ ಫಲಾನುಭವಿಗಳು ತ್ವರಿತಗತಿಯಲ್ಲಿ ನಿರ್ಮಾಣ ಮಾಡಿಕೊಳ್ಳುವಂತೆ ತಾ.ಪಂ. ಕಾರ್ಯನಿರ್ವಾಕ ಅಧಿಕಾರಿ ಡಾ. ಕೆ.ನಾಗಣ್ಣ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಶಿರಾ ಕ್ಷೇತ್ರಕ್ಕೆ ಮಂಜೂರಾದ ಶೌಚಾಲಯ ನಿರ್ಮಾಣಗಳ ಪೈಕಿ 6722 ಮಂದಿ ಅರ್ಹ ಫಲಾನುಭವಿಗಳು ಈಗಲೂ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಂಡಿಲ್ಲ. ಅಂದರೆ ಈವರೆಗೆ ಶೇ.86 ರಷ್ಟು ಶೌಚಾಲಯಗಳು ಸಂಪೂರ್ಣಗೊಂಡಿರುವುದು ಶ್ಲಾಘನಾರ್ಹ ಸಂಗತಿಯೂ ಆಗಿದ್ದು, ಉಳಿದ ಫಲಾನುಭವಿಗಳು ಕೂಡಲೇ ಶೌಚಾಲಯ ನಿರ್ಮಾಣ ಮಾಡಿಕೊಳ್ಳುವುದು ಅಗತ್ಯ ಎಂದರು.
ಆಯಾ ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಈ ಸಂಬಂಧ ಪಂಚಾಯ್ತಿಗಳ ಜನ ಪ್ರತಿನಿಧಿಗಳು ಕೂಡ ಉಳಿದ ಶೌಚಾಲಯಗಳ ನಿರ್ಮಾಣದತ್ತ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಅವರು ತಿಳಿಸಿದರು.
