ದಾವಣಗೆರೆ: ವಿನಾಯಕ ಪೂಜಾರ್
ಸ್ಮಾರ್ಟ್ಸಿಟಿಯಾಗಿ ಅಭಿವೃದ್ಧಿಯಾಗುತ್ತಿರುವ ದಾವಣಗೆರೆಯ ಸೌಂದರ್ಯಕ್ಕೆ ಮತ್ತಷ್ಟು ಮೆರಗು ನೀಡುವ ಉದ್ದೇಶದಿಂದ, ಕೇಂದ್ರ ಸರ್ಕಾರ ಪಾಲಿಕೆ ವ್ಯಾಪ್ತಿಯ ಪಾರ್ಕ್ಗಳ ಅಭಿವೃದ್ಧಿಗೆ ಅಮೃತ್ ಸಿಟಿ ಯೋಜನೆಯಡಿ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಆದರೆ, ಪಾಲಿಕೆಯ ನಿರ್ಲಕ್ಷ್ಯದಿಂದ ಉದ್ಯಾನವನಗಳ ಅಭಿವೃದ್ಧಿಗೆ ಗರ ಬಡಿದಂತಾಗಿದೆ.
ಹೌದು… ಕೇಂದ್ರ ಸರ್ಕಾರ ದಾವಣಗೆರೆಯ 9 ಪಾರ್ಕ್ಗಳಿಗೆ ಆಧುನಿಕ ಸ್ಪರ್ಷ ನೀಡುವ ಉದ್ದೇಶದಿಂದ ಅಮೃತ್ ಸಿಟಿ ಯೋಜನೆಯಡಿ ಐದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಮೂರು ವರ್ಷವೇ ಕಳೆದಿದೆ. ಆದರೆ, ಮಹಾನಗರ ಪಾಲಿಕೆ ಮಾತ್ರ ಈ ವರೆಗೆ ಕುಂದುವಾಡ ಕೆರೆಯ ಸಮೀಪ ನಿರ್ಮಾಣ ಆಗುತ್ತಿರುವ ಗಾಜಿನ ಮನೆ ಬಳಿಯ ಉದ್ಯಾನವನ್ನು ಹೊರತು ಪಡಿಸಿದರೆ, ಬೇರೆ ಯಾವ ಪಾರ್ಕ್ಗಳ ಅಭಿವೃದ್ಧಿಗೆ ಮುಂದಾಗಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಪಾರ್ಕ್ಗಳಿಗೆ ಆಧುನಿಕ ಸ್ಪರ್ಷ ನೀಡುವ ಉದ್ದೇಶ ಸಂಪೂರ್ಣ ಹಳ್ಳ ಹಿಡಿದಂತಾಗಿದೆ.
ಯಾವ್ಯಾವ ಪಾರ್ಕ್ ಅಭಿವೃದ್ಧಿ:
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅಮೃತ್ ಸಿಟಿ ಯೋಜನೆಯ 5 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ 60 ಲಕ್ಷ ರೂ. ವೆಚ್ಚದಲ್ಲಿ ಕುಂದುವಾಡ ಕೆರೆ ಸಮೀಪದಲ್ಲಿ ನಿರ್ಮಾಣ ಆಗಿರುವ ಗ್ಲಾಸ್ ಹೌಸ್ ಬಳಿಯ ಉದ್ಯಾನವನ ಒಂದು ಮಾತ್ರವೇ ಅಭಿವೃದ್ಧಿ ಆಗುತ್ತಿದ್ದು, ಇನ್ನುಳಿದಂತೆ 4.40 ಕೋಟಿ ರೂ. ವೆಚ್ಚದಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 36ನೇ ವಾರ್ಡ್ನ ಚಿಕ್ಕಮಣ್ಣಿ ದೇವರಾಜ್ ಅರಸ್ ಬಡಾವಣೆ ಪಾಠಿರ್ïಗೆ 46 ಲಕ್ಷ ರೂ, 29ನೇ ವಾರ್ಡ್ನ ಲಕ್ಮೀಫ್ಲೋರ್ ಮಿಲ್ ಸಮೀಪದ ಪಾರ್ಕ್ಗೆ 58 ಲಕ್ಷ ರೂ., 30ನೇ ವಾರ್ಡ್ನ ಶಾಮನೂರಿನ ಪಾರ್ಕ್ಗೆ 92 ಲಕ್ಷ ರೂ., 9ನೇ ವಾರ್ಡ್ ವ್ಯಾಪ್ತಿಯ ದೇವರಾಜ್ ಅರಸು ಬಡಾವಣೆ ಬಿ ಬ್ಲಾಕ್ನಲ್ಲಿರುವ ಪಾರ್ಕ್ಗೆ 85 ಲಕ್ಷ ರೂ., 33ನೇ ವಾರ್ಡ್ನ ಡಾಂಗೇ ಪಾರ್ಕ್ಗೆ 20 ಲಕ್ಷ ರೂ., 39ನೇ ವಾರ್ಡ್ನ ಆಂಜನೇಯ ಬಡಾವಣೆಯಲ್ಲಿರುವ 13ನೇ ಕ್ರಾಸ್ನಲ್ಲಿರುವ ಪಾರ್ಕ್ 12 ಲಕ್ಷ ರೂ., 38ನೇ ವಾರ್ಡ್ ವ್ಯಾಪ್ತಿಯ ವಿದ್ಯಾನಗರದ ಪಾರ್ಕ್ಗೆ 6 ಲಕ್ಷ ರೂ. ಅನುದಾನ ನಿಗದಿ ಮಾಡಿ, ಈ ಪಾರ್ಕ್ಗಳಿಗೆ ಹೈಟೆಕ್ ಸ್ಪರ್ಷ ನೀಡಲು ಉದ್ದೇಶಿಸಲಾಗಿದೆ. ಆದರೆ, ಈ ಪಾರ್ಕ್ಗಳಲ್ಲಿ ಕೆಲ ನಾಮಕಾವಸ್ಥೆ ಕೆಲಸಗಳು ಆಗಿರುವುದು ಬಿಟ್ಟರೇ, ಅಭಿವೃದ್ಧಿಯೇ ಆಗದಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಈ ಮೇಲಿನ ಪಾರ್ಕ್ಗಳ ಪೈಕಿ ಕೆಲ ಉದ್ಯಾನವನಗಳಲ್ಲಿ ಸಣ್ಣಪುಟ್ಟ ಕಾಮಗಾರಿ ನಡೆಯುತ್ತಿದ್ದರೆ, ಇನ್ನೂ ಕೆಲ ಪಾರ್ಕ್ಗಳಲ್ಲಿ ಬಿಲ್ ಆಗಿಲ್ಲ ಎಂಬ ಕಾರಣಕ್ಕೆ ಕೆಲಸವೇ ಆರಂಭಿಸಿಲ್ಲ. ದೇವರಾಜ್ ಅರಸ್ ಬಡಾವಣೆಯ ಬಿ ಬ್ಲಾಕ್ನ ಪಾರ್ಕ್ನ ಕಾಮಗಾರಿಗಳು ಕೆಲ ತಾಂತ್ರಿಕ ಕಾರಣಗಳಿಂದ ಆರಂಭವಾಗದಿದ್ದರೆ, ಡಾಂಗೇ ಪಾರ್ಕ್ನಲ್ಲಿ ಮಳೆ ನೀರು ಕೊಯ್ಲು ಬಿಟ್ಟರೇ ಬೇರ್ಯಾವ ಕೆಲಸವೂ ಆಗಿಲ್ಲ. ಹೀಗೆ ಒಟ್ಟಾರೆಯಾಗಿ ಯಾವ ಪಾರ್ಕ್ಗಳೂ ಶೇ.100ರಷ್ಟು ಅಭಿವೃದ್ಧಿಯಾಗಿಲ್ಲ.
ಏನೇನು ಸೌಲಭ್ಯ:
ಅಮೃತ್ಸಿಟಿ ಯೋಜನೆಯಡಿ ಆಯ್ಕೆಯಾಗಿರುವ ಈ 9 ಪಾರ್ಕ್ಗಳಲ್ಲೂ ಉದ್ಯಾನವನಕ್ಕೆ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವಾಕಿಂಗ್ ಪಾಥ್ ನಿರ್ಮಾಣ, ಲಘು ವ್ಯಾಯಾಮ ಮಾಡಲು ಅನುವು ಆಗುವಂತೆ ಒಪನ್ ಜಿಮ್, ಮಳೆ ನೀರು ಕೊಯ್ಲು ಘಟಕ ನಿರ್ಮಾಣ, ಸಾರ್ವಜನಿಕರಿಗೆ ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಆಸನಗಳ ಅಳವಡಿಕೆ, ಕುಡಿವ ನೀರಿನ ವ್ಯವಸ್ಥೆ, ಹಸಿರೀಕರಣ ಸೇರಿದಂತೆ ಹಲವು ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ಆಧುನಿಕ ಸ್ಪರ್ಷ ನೀಡಲು ಉದ್ದೇಶಿಸಲಾಗಿದೆ. ಆದರೆ, ಇನ್ನೂ ಓಪನ್ ಜಿಮ್ಗೆ ಇನ್ನೂ ವ್ಯಾಯಾಮ ಸಲಕರಣೆ ಬಂದಿಲ್ಲ. ಅಲ್ಲದೆ, ಓಡಾಟಕ್ಕೆ ಯೋಗ್ಯವಾದ ವಾಕಿಂಗ್ ಪಾಥ್ಗಳಿಲ್ಲ. ಕುಡಿಯಲು ನೀರಿನ ಸೌಲಭ್ಯ ಸಹ ಇಲ್ಲವಾಗಿದೆ. ಆದ್ದರಿಂದ ವಾಯುವಿಹಾರಕ್ಕೆ, ವಿಶ್ರಾಂತಿಗೆ ಬರುವ ನಾಗೀಕರು ಪಾಲಿಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
