ದಾವಣಗೆರೆ :
ದೈವಜ್ಞ ಬ್ರಾಹ್ಮಣರಿಗೆ ತಕ್ಷಣವೇ 2ಎ ಜಾತಿ ಪ್ರಮಾಣಪತ್ರ ಕೊಡಿಸುವುದಾಗಿ ಸಂಸದ ಜಿ.ಎಂ.ಸಿದ್ದೇಶ್ವರ ಭರವಸೆ ನೀಡಿದರು.
ನಗರದ ಶ್ರೀಮತಿ ಗೌರಮ್ಮ ನರಹರಿ ಶೇಟ್ ಸಭಾಭವನದಲ್ಲಿ ಶನಿವಾರ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿಯಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ದೈವಜ್ಞ ಬ್ರಾಹ್ಮಣ ಮಹಿಳಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ದೈವಜ್ಞ ಬ್ರಾಹ್ಮಣರನ್ನು 2ಎ ವ್ಯಾಪ್ತಿಯಲ್ಲೂ ತಂದರೂ ಕೆಲ ತಹಶೀಲ್ದಾರ್ಗಳು ನಿಮಗೆ 2ಎ ಜಾತಿ ಪ್ರಮಾಣಪತ್ರ ನೀಡಲು ನಿರಾಕರಣೆ ಹಾಗೂ ಕೊಟ್ಟರೂ ವಿಳಂಬ ಮಾಡುತ್ತಿರುವ ಬಗ್ಗೆ ಕೇಳಿ ಬಂದಿದೆ. ಆದ್ದರಿಂದ ನಿಮ್ಮ ಸಮುದಾಯದವರಿಗೆ 2ಎ ಜಾತಿ ಪ್ರಮಾಣಪತ್ರ ನೀಡಲು ತಹಶೀಲ್ದಾರ್ಗಳಿಗೆ ನಿರ್ದೇಶನ ನೀಡುತ್ತೇನೆ ಎಂದರು.
ಇನ್ನೂ ಯಾರೋ ಕಳ್ಳರು ಬಂದು ನಿಮ್ಮ ಅಂಗಡಿಗಳ ಮುಂದೆ ನಿಂತು ಕಳ್ಳ ಮಾಲು ನಿಮಗೆ ಕೊಟ್ಟಿರುವುದಾಗಿ, ಪೊಲೀಸರಿಗೆ ಹೇಳಿದಾಕ್ಷಣ ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂಬುದು ನಿಮ್ಮ ಆರೋಪವಾಗಿದೆ. ಆದರೆ, ನೀವು ಕಳ್ಳ ಮಾಲು ತಗೊಂಡಿರೋ ಬಿಟ್ಟೋರೋ ನನಗೆ ಗೊತ್ತಿಲ್ಲ. ಅಕಸ್ಮಾತ್ ಯಾವುದೇ ಕಳ್ಳ ಮಾಲು ತಗೆದುಕೊಳ್ಳದೇ ಪ್ರಾಮಾಣಿಕವಾಗಿದ್ದರೆ, ನಿಮಗೆ ಪೊಲೀಸರು ನೀಡುವ ಅನಗತ್ಯ ಕಿರುಕುಳ ತಪ್ಪಿಸುತ್ತೇನೆಂದು ವಾಗ್ದಾನ ಮಾಡಿದರು
ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು 2022ರ ವೇಳೆಗೆ ದೇಶದ ಸರ್ವರಿಗೂ ಸೂರು ಕಲ್ಪಿಸಲು ನಿರ್ಧಾರ ಮಾಡಿದ್ದು, ನಿಮ್ಮ ಸಮುದಾಯದಲ್ಲಿ ನಿವೇಶನ ಇರುವವರು ಪಾಲಿಕೆಗೆ ಪ್ರಧಾನಮಂತ್ರಿ ಅವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿದರೆ, ಪಾಲಿಕೆ ಆಯುಕ್ತರೊಂದಿಗೆ ಮಾತನಾಡಿ, ಮನೆ ಕಟ್ಟಿಸಿಕೊಳ್ಳಲು ಆರ್ಥಿಕ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ದೈವಜ್ಞ ಸಮಾಜ ಗೌರವಯುತ ಸಮಾಜವಾಗಿದ್ದು, ಯಾರಿಗೂ ತೊಂದರೆ ಕೊಡದೇ, ಚಿನ್ನ-ಬೆಳ್ಳಿ ಕೆಲಸ ಮಾಡಿಕೊಂಡು ಸ್ವಾಭಿಮಾನದಿಂದ ಬದುಕುತ್ತಿದ್ದು, ಯಾರೂ ಸಹ ಸೋಮಾರಿಗಳಿಲ್ಲ. ಮಹಿಳೆಯರು ಸಹ ಪುರುಷರಂತೆ ಚಿನ್ನ-ಬೆಳ್ಳಿ ವ್ಯಾಪಾರ ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದೆ ಆಸ್ತಿ, ದುಡ್ಡು ಮಾಡುವವರಿಗೆ ಬೆಲೆ ಇತ್ತು. ಆದರೆ, ಇಂದು ವಿದ್ಯೆಗೆ ಬೆಲೆ ಇದ್ದು, ನಿಮ್ಮ ಮಕ್ಕಳನ್ನು ನಿಮ್ಮ ಕುಲ ಕಸುಬಿಗೆ ಬಳಸಿಕೊಳ್ಳದೇ, ವಿದ್ಯಾವಂತರನ್ನಾಗಿ ಮಾಡಿ, ದೇಶದ ಆಸ್ತಿಯನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.ದೈವಜ್ಞ ಬ್ರಾಹ್ಮಣ ಸಮಾಜದ ರಾಜ್ಯಾಧ್ಯಕ್ಷ ರಾಮರಾವ್ ವಿ. ರಾಯ್ಕರ್ ಮಾತನಾಡಿ, ನಮ್ಮ ಸಮಾಜದ ಮಾತೆಯರ ಮಾರ್ಗದರ್ಶನದ ಮೂಲಕ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಕೇವಲ ಚಿನ್ನ-ಬೆಳ್ಳಿ ಕೆಲಸಕ್ಕೆ ಸೀಮಿತವಾಗದೇ ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಸಾಗುತ್ತಿದ್ದಾರೆ. ನಮ್ಮದು ಚಿನ್ನಾಭರಣಗಳ ವ್ಯಾಪಾರವಾಗಿರುವುದರಿಂದ ಕೆಲ ಸಂದರ್ಭಗಳಲ್ಲಿ ಪೊಲೀಸರು ಕಿರುಕುಳ ನೀಡುತ್ತಾರೆ. ಆ ಸಂದರ್ಭದಲ್ಲಿ ಮಾತೆಯರು ಪುರುಷರಿಗೆ ಬೆನ್ನೆಲಬಾಗಿ ನಿಲ್ಲಬೇಕೆಂದು ಸಲಹೆ ನೀಡಿದರು.
ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಮಹಿಳೆಯರಿಗೆ ಪ್ರೋತ್ಸಾಹ ನೀಡಿದರೆ, ಅವರು ಸಹ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆಗೈಯ್ಯಲು ಸಹಕಾರಿಯಾಗಲಿದೆ. ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದರೆ, ಸಮಾಜವು ಮುನ್ನಡೆಯಲಿದೆ. ಸರ್ಕಾರ ಮಹಿಳೆಯರಿಗೆ ಉದ್ದಿಮೆ ಸ್ಥಾಪಿಸಲು ಸಾಕಷ್ಟು ಸಾಲ ಸೌಲಭ್ಯಳನ್ನು ನೀಡುತ್ತಿದೆ. ಆದರೆ, ಮಾಹಿತಿಯ ಕೊರತೆಯಿಂದ ಯಾರೂ ಸಹ ಸೌಲಭ್ಯ ಪಡೆಯಲು ಮುಂದಾಗುತ್ತಿಲ್ಲ. ಇಂತಹ ಸಮಾವೇಶಗಳ ಮೂಲಕ ಸರ್ಕಾರಿ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿದರೆ, ಸಮಾವೇಶಕ್ಕೂ ಸಾರ್ಥಕತೆ ಸಿಗಲಿದೆ ಎಂದರು.
ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಮಂಡಳಿಯ ರಾಜ್ಯಾಧ್ಯಕ್ಷೆ ವಿನಯಾ ಆರ್. ರಾಯ್ಕರ್ ಹಾಗೂ ಕಮಲಾ ಸುರೇಶ್ ಪುರುಷನ್ ಮಾತನಾಡಿ, ನಮ್ಮ ಸಮಾಜದ ಮಹಿಳೆಯರ ಶಿಕ್ಷಣಕ್ಕಾಗಿ ಮಹಿಳಾ ವಸತಿ ನಿಲಯ ಸ್ಥಾಪನೆಗೆ ಸರ್ಕಾರದಿಂದ ನಿವೇಶನ ಕೊಡಿಸಬೇಕು. ಕೌಶಲ್ಯ ತರಬೇತಿ ಕೊಡಿಸುವ ಮೂಲಕ ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಲು ಸರ್ಕಾರದಿಂದ ಸಾಲ ಸೌಲಭ್ಯ ಕೊಡಿಸಬೇಕು. ನಮ್ಮ ಕಸುಬಿನ ವೇಳೆಯಲ್ಲಿ ಪೊಲೀಸರಿಂದ ಆಗುತ್ತಿರುವ ಅನಗತ್ಯ ಕಿರುಕುಳ ತಡೆಯಬೇಕು. ಗೋಶಾಲೆ ಆರಂಭಿಸಲು ನಿವೇಶನ ನೀಡಬೇಕು. ದೈವಜ್ಞ ಬ್ರಾಹ್ಮಣ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸದರನ್ನು ಒತ್ತಾಯಿಸಿದರು.
ವನಮಾಲ ದತ್ತಾತ್ರೇಯ ಪ್ರಾಸ್ತಾವಿಕ ಮಾತನಾಡಿದರು. ಜಯಂತಿ ನಾಗರಾಜ್ ಹಾಗೂ ಶಶಿಕಲಾ ಸತ್ಯಾನಾರಾಯಣ ರಾಯ್ಕರ್ ವಾರ್ಷಿಕ ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರೀಸ್ನ ಬ್ರಹ್ಮಕುಮಾರಿ ಲೀಲಾಜಿ, ಮಹಾರಾಷ್ಟ್ರದ ಸಂಜಯ ಘೋಡಾವತ ವಿವಿಯ ಉಪಕುಲಪತಿ ಡಾ.ವೆಂಕಟೇಶ್ ಎ. ರಾಯ್ಕರ್, ಮೈಸೂರು ವಿವಿಯ ವಿಶ್ರಾಂತ ಕುಲಪತಿ ಡಾ.ಸುಧಾರಾವ್, ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿಯ ವಿಜಯಾ ಶಂಕರ್ ವಿಠ್ಠಲ್ಕರ್, ದೈವಜ್ಞ ಬ್ರಾಹ್ಮಣ ಸಮಾಜ ಅಧ್ಯಕ್ಷ ಸತ್ಯನಾರಾಯಣ ರಾಯ್ಕರ್, ಕಾಂಗ್ರೆಸ್ ಮುಖಂಡ ಎ.ನಾಗರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
