ಕೊರಟಗೆರೆ :
ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿ ಜೀವನದಿಂದಲೇ ತೊಡಗಿಸಿಕೊಂಡರೆ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಪ್ರಿಯದರ್ಶಿನಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಡಾ.ಪಿ.ಎಸ್.ಮಿನ್ಹಾಸ್ ಅಭಿಪ್ರಾಯ ಪಟ್ಟರು.
ಪಟ್ಟಣದ ಹನುಮಂತಪುರದ ಪ್ರಿಯ ದರ್ಶಿನಿ ಪಿ.ಯು.ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಗೆಲವು ಸಾಧಿಸಿದ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಸುಮ್ಮನೆ ಕೂರದೆ ಆದಷ್ಟು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ನಿಮಗೆ ಉತ್ತಮವಾದ ಏಕಾಗ್ರತೆ ಸಿಗುತ್ತದೆ ಇದರಿಂದ ತಮಗೆ ಉತ್ತಮವಾದ ಮನನ ಶಕ್ತಿ ಬರುತ್ತದೆ ಎಂದರು.
ಕಾಲೇಜಿನ ಕ್ರೀಡಾ ವ್ಯವಸ್ಥಾಪಕ ಸಂತೋಷ್ ಮಾತನಾಡಿ ಕ್ರೀಡೆಯು ಕ್ರೀಡಾ ಪಟುಗಳಿಗೆ ಉತ್ತಮವಾದ ಮನೋಸ್ಥೈರ್ಯ ಹಾಗೂ ಆತ್ಮ ವಿಶ್ವಾಸ ತುಂಬುತ್ತದೆ ಇದರಿಂದ ನಮ್ಮ ದೇಶದಲ್ಲಿ ಆತ್ಮಹತ್ಯೆಯಂತಹ ಹೀನ ಕೃತ್ಯಗಳು ಕಡಿಮೆಯಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಿಯದರ್ಶಿನಿ ಪಿಯು ಕಾಲೇಜುನ ಪ್ರಾಂಶುಪಾಲ ಪ್ರಕಾಶ್ ಮಾತನಾಡಿ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳು ಅಲ್ಲದೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಕೂಡ ತಮ್ಮ ಸಾಧನೆ ತೋರಿಸಿದಾಗ ಮಾತ್ರ ನಮ್ಮ ನಾಡಿಗೆ, ನಮ್ಮ ಸಂಸ್ಕೃತಿಗೆ ಹಾಗೂ ನಮ್ಮ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಸಿಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು.ಇದೇ ಸಂಧರ್ಭದಲ್ಲಿ ಉಪನ್ಯಾಸಕರಾದ ನವೀನ್ ಕುಮಾರ್, ಚೈತ್ರ, ಶ್ರೀರಂಗಯ್ಯ, ನರಸಿಂಹರಾಜು, ರುದ್ರೇಶ್, ಪ್ರಕಾಶ್.ಆರ್, ಮಂಜುನಾಥ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
