ಕುಣಿಗಲ್
ರೈತರೊಬ್ಬರು ತನ್ನ ಜಮೀನೊಂದರಲ್ಲಿ ಬೆಳೆದು ಫಸಲಿಗೆ ಬಂದಿದ್ದ ನೂರಾರು ಪರಂಗಿ ಹಣ್ಣಿನ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಳುಗೆಡವಿ ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆಯನ್ನು ನಾಶಮಾಡಿರುವ ಘಟನೆ ಕುಣಿಗಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾಲ್ಲೂಕಿನ ಕಸಬಾ ಹೋಬಳಿ ಬೈರನಾಯ್ಕನಹಳ್ಳಿ ಗ್ರಾಮದ ಸೋಮಶೇಖರ್ ನವರಿಗೆ ಸೇರಿದ ಸ.ನಂ.23ರಲ್ಲಿ 1 ಎಕರೆ 23 ಗುಂಟೆ ಸ್ವಂತ ಜಮೀನಿದ್ದು ಅದರಲ್ಲಿ ಪರಂಗಿ ಗಿಡ ಬೆಳೆದಿದ್ದು ಈಗಾಗಲೇ ಫಸಲು ಕಟಾವುಮಾಡುವ ಹಂತದಲ್ಲಿತ್ತು.
ಆದರೆ ಹುತ್ರಿದುರ್ಗ ಹೋಬಳಿಯ ಕುಂದೂರು ಗ್ರಾಮದ ಕುಂಟಯ್ಯ ಮತ್ತು ಮಕ್ಕಳಾದ ನಾರಾಯಣ್ ಹಾಗೂ ಗಜೇಂದ್ರರವರಿಗೂ ಮತ್ತು ರಾಮಯ್ಯನಿಗೆ ಬೇರೊಂದು ಜಮೀನಿನ ಬಗ್ಗೆ ತಕರಾರಿದ್ದು ತುಮಕೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು ಈ ಜಮೀನಿನ ವಿವಾದದ ದ್ವೇಷದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ 6 ಗಂಟೆ ಸಮಯದಲ್ಲಿ ಈ ಮೂರು ಜನರೂ ಸೇರಿ ವಿವಾದವಿಲ್ಲದ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಮನೆಯನ್ನು ಅಡವಿಟ್ಟು ಸಾಲ ಸೂಲ ಮಾಡಿ ಬೆಳೆದಿದ್ದ ಲಕ್ಷಾಂತರ ರೂ. ಬೆಲೆಬಾಳುವ ಸುಮಾರು 250 ಫಸಲು ಬೆಳೆದು ರಸಭರಿತವಾಗಿದ್ದ ಪರಂಗಿ ಗಿಡಗಳನ್ನು ಕತ್ತರಿಸಿಹಾಕಿ ನಾಶಪಡಿಸಿದ್ದಾರೆಂದು ಪೊಲೀಸ್ ಠಾಣೆಗೆ ದೂರಿದ್ದಾರೆ.
ಜಮೀನಿನ ಮಾಲೀಕ ರೈತ ರಾಮಯ್ಯ ಮಾತನಾಡಿ ಲಕ್ಷಾಂತರ ರೂ. ಖರ್ಚುಮಾಡಿ ಕಷ್ಟಪಟ್ಟು ಸಸಿಗಳನ್ನು ನೆಟ್ಟು ನಾಟಿ ಮಾಡಿದ್ದೆವು. ಉತ್ತಮ ಫಸಲು ಬಂದಿತ್ತು, ಅದರಿಂದ ಆದಾಯ ನೋಡುವಷ್ಟರಲ್ಲಿ ಈ ಪಾಪಿಗಳು ಗಿಡಗಳನ್ನು ಕತ್ತರಿಸಿ ನಾಶ ಪಡಿಸಿದ್ದಾರೆ. ನಮ್ಮ ಕುಟುಂಬ ಬೀದಿಪಾಲಾಗಿದೆ. ಇವರುಗಳು ಮೊದಲಿನಿಂದಲೂ ನಮ್ಮಮೇಲೆ ಗಲಾಟೆ ಮಾಡುತ್ತ ಕೊಲೆಬೆದರಿಕೆಯೊಡ್ಡಿದ್ದರು.
ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದೆವು, ಈದಿನ ವಿವಾದವಿಲ್ಲದ ನನ್ನ ಜಮೀನಿಗೆ ನುಗ್ಗಿ ಗಿಡಗಳನ್ನು ಕತ್ತರಿಸಿ ಹಾಕಿ ನಾಶ ಮಾಡಿದ್ದಾರೆಂದು ರಾಮಯ್ಯ ಹೆಂಡತಿ ಮತ್ತು ಮಗ ಸೋಮ ಶೇಖರ್ ತಮ್ಮ ಅಳಲನ್ನು ತೋಡಿಕೊಂಡರು. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.
