ದಾವಣಗೆರೆ:
ಹಿಂದೂ ಧರ್ಮ, ಸಂಸ್ಕೃತಿ ರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕೆಂದು ಶ್ರೀರಾಮ ಸೇನಾ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಕರೆ ನೀಡಿದರು.
ನಗರದ ಅಪೂರ್ವ ಹೋಟೆಲ್ನ ಸಭಾಂಗಣದಲ್ಲಿ ಶನಿವಾರ ನಡೆದ ಶ್ರೀರಾಮ ಸೇನಾ ಜಿಲ್ಲಾ ಘಟಕದ ಬೈಠಕ್ ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಹೊರಗಡೆಯಿದ್ದ ವಿಛಿದ್ರ ಕಾರಕ ಶಕ್ತಿಗಳು, ಇಂದು ದೇಶದ ಒಳಗೆ ನುಸುಳಿ, ಹಿಂದೂ ಧರ್ಮೀಯರ ಸಂಸ್ಕೃತಿಯನ್ನು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಈ ದೇಶದ್ರೋಹಿಗಳನ್ನು ಹುಟ್ಟಡಗಿಸುವ ಮೂಲಕ ನಮ್ಮ ಧರ್ಮ,ಸಂಸ್ಕೃತಿ ರಕ್ಷಣೆಗೆ ಸಂಕಲ್ಪ ಮಾಡಬೇಕೆಂದು ಕಿವಿಮಾತು ಹೇಳಿದರು.
ಪ್ರಸ್ತುತ ದೇಶದ ನಾನಾ ಭಾಗಗಳಲ್ಲಿ ಲವ್ ಜಿಹಾದ್, ಮತಾಂತರ, ಗೋಹತ್ಯೆಗಳಂಥಹ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ನಮ್ಮ ಧರ್ಮ, ಸಂಸ್ಕೃತಿ ಸಂಚಕಾರ ಎದುರಾಗಿದೆ. ಹೀಗಾಗಿ ಈ ಶಕ್ತಿಗಳನ್ನು ಮಟ್ಟ ಹಾಕಲು ಒಗ್ಗೂಡಬೇಕಾಗಿದೆ. ಇಡೀ ಜಗತ್ತಿಗೆ ಜ್ಞಾನ ಕೊಟ್ಟ ಭಾರತದ ಶ್ರೇಷ್ಠ ಸಂಸ್ಕೃತಿ ಉಳಿಯಬೇಕಾದರೆ ದಿನದ ಒಂದು ತಾಸು ಹಾಗೂ ವಾರಕ್ಕೆ ಒಂದು ದಿನವನ್ನು ಹಿಂದೂ ಧರ್ಮಕ್ಕಾಗಿ ಮೀಸಲಿಡಬೇಕೆಂದು ಸಲಹೆ ನೀಡಿದರು.
ಈ ಜಗತ್ತಿನಲ್ಲಿ 113 ಕ್ರಿಶ್ಚಿಯನ್, 52 ಮುಸ್ಲಿಂ ಹಾಗೂ 12 ಬೌದ್ಧ ರಾಷ್ಟ್ರಗಳಿವೆ. ಅಲ್ಲದೇ, ಕೇವಲ 60 ಲಕ್ಷ ಜನಸಂಖ್ಯೆ ಹೊಂದಿರುವ ಯಹೂದಿಗಳು ಸಹ ಒಂದು ದೇಶ ಹೊಂದಿದ್ದಾರೆ. ಆದರೆ, 100 ಕೋಟಿ ಜನಸಂಖ್ಯೆ ಹೊಂದಿರುವ ಹಿಂದೂಗಳಿಗೆ ಭಾರತ ಬಿಟ್ಟರೇ ಬೇರೆಲ್ಲೂ ನೆಲೆ ಇಲ್ಲವಾಗಿದೆ. ಆದ್ದರಿಂದ ಈ ದೇಶ ಉಳಿಸಿಕೊಳ್ಳುವ ಹೊಣೆಗಾರಿಕೆ, ಅನಿವಾರ್ಯತೆ ನಮ್ಮದಾಗಿದೆ ಎಂದು ಹೇಳಿದರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಡಪಂಥೀಯರು, ಹಿಂದೂ ಶ್ರದ್ಧೆಗಳನ್ನು ಅವಮಾನಿಸುತ್ತಿದ್ದಾರೆ. ಈ ಕಾರಣಕ್ಕೆ ಎಡ ಪಂಥೀಯರನ್ನು ಪ್ರಶ್ನಿಸಿದರೆ, ಕೋಮುವಾದಿ-ಮೂಲಭೂತವಾದಿಗಳೆಂದ ಪಟ್ಟ ಕಟ್ಟಲಾಗುತ್ತದೆ. ಭಾರತವನ್ನು ಒಡೆಯುವವರಿಗೆ ರಾಜಮರ್ಯಾದೆ ಸಿಗುತ್ತಿದೆ. ಭಾರತ ಮಾತೆಗೆ ಜೈಕಾರ ಹಾಕುವವರಿಗೆ ಯಾವುದೇ ಮರ್ಯಾದೆ ಸಿಗುತ್ತಿಲ್ಲ. ಭಾರತ ಮಾತೆಯನ್ನು ಗೌರವಿಸದವರಿಗೆ ಈ ದೇಶದಲ್ಲಿ ಇರುವ ಅರ್ಹತೆ ಇಲ್ಲ. ಅಂಥವರನ್ನು ದೇಶದಿಂದ ಒದ್ದೊಡಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
ಅಸ್ಸಾಂ ರಾಜ್ಯವೊಂದರಲ್ಲೇ 40 ಲಕ್ಷ ಬಾಂಗ್ಲಾ ಅಕ್ರಮ ವಲಸಿಗರು ಇರುವುದಾಗಿ ಸುಪ್ರೀಂ ಕೋರ್ಟ್ ನೇಮಿಸಿದ್ದ ಸಮಿತಿ ವರದಿ ನೀಡಿದೆ. ದೇಶಾದ್ಯಂತ 5 ಕೋಟಿಗೂ ಅಧಿಕ ಬಾಂಗ್ಲಾ ವಲಸಿಗರಿದ್ದಾರೆ. ಓಟ್ ಬ್ಯಾಂಕ್ಗಾಗಿ ಬಾಂಗ್ಲಾದೇಶಿ ವಲಸಿಗರನ್ನು ಸರ್ಕಾರಗಳು ಸಾಕುತ್ತಿವೆ. ಬಾಂಗ್ಲಾ ವಲಸಿಗರು ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದು, ದೇಶದ ಭದ್ರತೆಗೆ ಅಪಾಯಕಾರಿಯಾಗಿದೆ ಎಂದು ಆರೋಪಿಸಿದರು.
ಭಾರತದಲ್ಲಿ 1947ರ ಸಂದರ್ಭದಲ್ಲಿ ಶೇ.87ರಷ್ಟಿದ್ದ ಹಿಂದೂಗಳ ಸಂಖ್ಯೆ ಇಂದು ಶೇ.82ಕ್ಕೆ ಇಳಿದಿದೆ. ಶೇ.4ರಷ್ಟಿದ್ದ ಮುಸ್ಲಿಮರ ಸಂಖ್ಯೆ ಶೇ.16ರಷ್ಟಾಗಿದ್ದರೆ, ಶೇ.1ರಷ್ಟಿದ್ದ ಕ್ರಿಶ್ಚಿಯನ್ನರು ಶೇ.4ರಷ್ಟಾಗಿದ್ದಾರೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಕಾಶ್ಮೀರ, ಕೇರಳ, ಪಶ್ಚಿಮ ಬಂಗಾಳ ಮಾತ್ರವಲ್ಲದೆ, ಕರ್ನಾಟಕದ ಭಟ್ಕಳ, ಬೆಂಗಳೂರಿನ ಶಿವಾಜಿ ನಗರ, ಗೌರಿಪಾಳ್ಯಗಳಲ್ಲಿ ಹಿಂದೂಗಳು ನೆಲೆ ಕಳೆದುಕೊಳ್ಳುತ್ತಿದ್ದಾರೆ. ಈಶಾನ್ಯ ರಾಜ್ಯಗಳಲ್ಲಿ ಕ್ರಿಶ್ಚಿಯನ್ನರ ಉಪಟಳ ಮಿತಿಮೀರಿದೆ ಎಂದು ದೂರಿದರು.
ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿರುವ ಭಾಗಗಳಲ್ಲಿ ದೇಶದ ಸುರಕ್ಷತೆಗೆ ಅಪಾಯ ಬಂದೊದಗಿದೆ. ಆದ್ದರಿಂದ ದೇಶವನ್ನು ಉಳಿಸಿಕೊಳ್ಳಲು ಪ್ರತಿ ಮನೆಯಲ್ಲೂ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣರಂತಹ ದೇಶಭಕ್ತರು ಜನ್ಮ ಎತ್ತಿಬರಬೇಕೆಂದು ಆಶಯ ವ್ಯಕ್ತಪಡಿಸಿದರು.
ಪದಾಧಿಕಾರಿಗಳ ನೇಮಕ:
ಇದೇ ಸಂದರ್ಭದಲ್ಲಿ ಶ್ರೀರಾಮ ಸೇನಾದ ನೂತನ ಜಿಲ್ಲಾ ಅಧ್ಯಕ್ಷರಾಗಿ ಪ್ರಶಾಂತ್ ಮತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ದೊರೈಸ್ವಾಮಿ, ಹೋರಾಟ ಪ್ರಮುಖರಾಗಿ ವೇಣುಗೋಪಾಲ ನಾಯ್ಕ, ಮಾಧ್ಯಮ ಪ್ರಮುಖರಾಗಿ ಡಿ.ಬಿ.ವಿನೋದ ರಾಜ, ಕಾನೂನು ಸಲಹೆಗಾರರಾಗಿ ಸಿ.ತಿಪ್ಪೇಸ್ವಾಮಿ ನಾಯ್ಕ ರಾಥೋಡ್, ಸಂಪರ್ಕ ಪ್ರಮುಖರಾಗಿ ಅಭಿಷೇಕ್ ಎನ್.ರಾವ್ ಅವರುಗಳನ್ನು ನೇಮಕ ಮಾಡಲಾಯಿತು.
ಬೈಠಕ್ನಲ್ಲಿ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾಲಿಂಗಣ್ಣ ಗುಂಜಗಾವಿ, ಸಂಪರ್ಕ ಪ್ರಮುಖ್ ಪರಶುರಾಮ ನಡುಮನಿ, ಚಿತ್ರದುರ್ಗ ಜಿಲ್ಲಾಧ್ಯಕ್ಷ ಪೃಥ್ವಿ, ಮಾಲತೇಶರಾವ್ ಸುರ್ವೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
