ಚಳ್ಳಕೆರೆ

ತಾಲ್ಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಗಂಗಮ್ಮಸಣ್ಣ ಬೋರಪ್ಪ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ. ಸೋಮವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಗಂಗಮ್ಮಸಣ್ಣ ಬೋರಪ್ಪ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು, ಬೇರೆಯಾರೂ ಅರ್ಜಿ ಸಲ್ಲಿಸದ ಕಾರಣ ಗಂಗಮ್ಮಸಣ್ಣಬೋರಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದೇರೆಂದು ಚುನಾವಣಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಲ್.ವೆಂಕಟೇಶಪ್ಪ ತಿಳಿಸಿದರು.
ನಗರಂಗೆರೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 22 ಜನ ಸದಸ್ಯರಿದ್ದು ಮಾರ್ಚ್ 26ರಂದು ಅಧ್ಯಕ್ಷರ ಆಯ್ಕೆಯಾಗಿ ಸಭೆ ಕರೆದಿದ್ದು, ಹಾಜರಾತಿ ಇಲ್ಲದ ಕಾರಣ ಸಭೆ ಮುಂದೂಡಿ ಏ.15ಕ್ಕೆ ನಿಗದಿಯಾಗಿತ್ತು. ಸೋಮವಾರವೂ ಸಹ ಗ್ರಾಮ ಪಂಚಾಯಿತಿ ಬಹುತೇಕ ಸದಸ್ಯ ಗೈರು ಹಾಜರಿ ಕಂಡು ಬಂದಿದ್ದು, ಸದಸ್ಯರಾದ ಗಂಗಮ್ಮ, ಮಳ್ಳಪ್ಪ, ಜಗಲ್ಯೂರಪ್ಪ, ಎಚ್.ರಮೇಶ್, ಎಂ.ರಮೇಶ್, ಶೈಲಜಾ ಮಾತ್ರ ಸಭೆಗೆ ಹಾಜರಾಗಿದ್ದರು. ಗ್ರಾಮ ಪಂಚಾಯಿತಿ ಅಧಿನಿಯಮದ ಪ್ರಕಾರ ಎರಡನೇ ಬಾರಿಗೆ ಸಭೆ ಕರೆದಾಗ ಹಾಜರಿದ್ದ ಸದಸ್ಯರ ಸಮಕ್ಷಮದಲ್ಲೇ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಅದೇ ರೀತಿ ಸೋಮವಾರವೂ ಸಹ ಗಂಗಮ್ಮ ಸಣ್ಣಬೋರಪ್ಪ ಎರಡನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷೆ ಗಂಗಮ್ಮಸಣ್ಣಬೋರಪ್ಪ ಭರವಸೆ :- ನಗರಂಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಅ.2018ರಲ್ಲಿ ಅವಿಶ್ವಾಸ ನಿರ್ಣಯ ಹಿನ್ನೆಲೆಯಲ್ಲಿ ನನ್ನನ್ನು ಅಧಿಕಾರದಿಂದ ಪದಚ್ಯುತಿಗೊಳಿಸಿದ್ದು, ನ್ಯಾಯಾಲಯ ಸದರಿ ಆದೇಶವನ್ನು ತಿರಸ್ಕರಿಸಿ ಪುನಃ ಮಾರ್ಚ್ 26ರಂದು ಅಧ್ಯಕ್ಷರ ಆಯ್ಕೆಗೆ ಸೂಚನೆ ನೀಡಿತ್ತು.
ನನ್ನ ಮೊದಲ ಅವಧಿಯಲ್ಲೇ ನಗರಂಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ಸಮರ್ಪಕ ಕಂದಾಯವನ್ನು ವಸೂಲಿ ಮಾಡಿ, ಮೂಲಭೂತ ಸೌಕರ್ಯವನ್ನು ನೀಡಿದ ಹಿನ್ನೆಲೆಯಲ್ಲಿ ನಮ್ಮ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರ ದೊರಕಿತ್ತು. ಮತ್ತೊಮ್ಮೆ ಸದಸ್ಯರ ಸಹಕಾರ ಗ್ರಾಮದ ಎಲ್ಲಾ ಸಮುದಾಯದ ಬೆಂಬಲ ಹಿನ್ನೆಲೆಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ನನ್ನಗೆ ದೊರಕಿದ್ದು, ಈ ಅವಧಿಯಲ್ಲೂ ಸಹ ಉತ್ತಮ ಸೇವೆ ಮಾಡುವ ಭರವಸೆ ನೀಡಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಂ.ರಾಮಚಂದ್ರಪ್ಪ ಮಾಹಿತಿ ನೀಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೂ ಕುಡಿಯುವ ನೀರಿನ ಅಭಾವವಿಲ್ಲ. ನೂತನ ಅಧ್ಯಕ್ಷರ ಮಾರ್ಗದರ್ಶನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ವಿವಿಧ ಯೋಜನೆಗಳ ಅನ್ವಯ ಸವಲತ್ತುಗಳನ್ನು ನೀಡುವ ನಿಟ್ಟಿನಲ್ಲಿ ಸಭೆ ಕರೆದು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ನಾಗರಾಜು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಮಂಜುನಾಥ, ಬಾಬು, ಇನ್ನಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಗಂಗಮ್ಮಸಣ್ಣಬೋರಪ್ಪ ಆಯ್ಕೆಯಾದ ಹಿನ್ನೆಲೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂತಸ ವ್ಯಕ್ತ ಪಡಿಸಿದರಲ್ಲದೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
