ಚಿತ್ರದುರ್ಗ:
ಸಿನಿಮಾ ನಟರ ಅಭಿಮಾನಿಗಳ ಸಂಘಟನೆಗಳು ರಾಜ್ಯದಲ್ಲಿ ನೂರಾರಿವೆ. ಅವುಗಳು ಕೇವಲ ಸಿನಿಮಾ ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ ಅತಿವೃಷ್ಠಿ ಅನಾವೃಷ್ಟಿ, ಬರಗಾಲದಿಂದ ತತ್ತರಿಸಿದ ಪ್ರದೇಶಗಳ ದತ್ತು ಪಡೆದು ಸೇವಾ ಕಾರ್ಯ ಮಾಡಬೇಕು ಎಂದು ಅಖಿಲ ಕರ್ನಾಟಕ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ದಾವಣಗೆರೆ ಜಿಲ್ಲಾಧ್ಯಕ್ಷ ಎಂ.ಮನು ಹೇಳಿದರು.
ಚಿತ್ರದುರ್ಗ ನಗರದ ದುರ್ಗದ ಸಿರಿ ಹೋಟೆಲ್ನಲ್ಲಿ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಕ್ರೇಜಿಸ್ಟಾರ್ ಅಭಿಮಾನಿಗಳ ಸಂಘದ ಸಭೆಯಲ್ಲಿ ಮಾತನಾಡಿ ಕೊಡಗು ಜಿಲ್ಲೆ ಜಲಪ್ರಳಯಕ್ಕೆ ಸಿಲುಕಿದಾಗ ರವಿಚಂದ್ರನ್ ಅಭಿಮಾನಿಗಳು ತೆರಳಿ ಅವರಿಗೆ ಬೇಕಾದ ಮೂಲಸೌಲಭ್ಯಗಳನ್ನು ನೀಡಿದ್ದೆವು. ಅದು ನಮ್ಮ ಸಂಘಟನೆ ಹೆಮ್ಮೆ. ನಾವು ಕೇವಲ ಖುಷಿಯನ್ನಷ್ಟೇ ಅನುಭವಿಸದೆ ಕಷ್ಟದಲ್ಲಿರುವವರನ್ನು ಕೈ ಹಿಡಿಯಬೇಕಾದುದು ನಮ್ಮ ಕರ್ತವ್ಯ ಎಂದರು.
ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಒಂದೆಡೆ ಹಿರಿಯ ನಟರಾಗಿದ್ದರೇ ಇನ್ನೊಂದೆಡೆ ಸದಾ ಪರಿಸರ ಜಾಗೃತಿ ಮೂಡಿಸುವ ಆಲೋಚನೆ ಹೊಂದಿದ್ಧಾರೆ, ಪ್ರಾಣಿ ಪಕ್ಷಿಗಳ ಬಗ್ಗೆ ಪ್ರೀತಿ ಹೊಂದಿದ್ದು ಅವರ ಆಶಯದಂತೆ ನಾವು ನಡೆಯೋಣ. ನಮ್ಮ ಸಂಘಟನೆಗಳ ಮೂಲದ ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಅದು ಸಾಮಾಜಿಕವಾಗಿ ಬೆಳೆಯಬೇಕು ಎಂದರು.
ಚಿತ್ರದುರ್ಗ ಜಿಲ್ಲಾಧ್ಯಕ್ಷ ಜೆ.ಎಸ್. ಶಂಭು ಮಾತನಾಡಿ ಚಿತ್ರದುರ್ಗ ಕೋಟೆ ಐತಿಹಾಸಿಕವಾಗಿದ್ದು ಇಲ್ಲಿ ಅನೇಕ ಸಿನಿಮಾಗಳು ಚಿತ್ರೀಕರಣವಾಗಿವೆ ರವಿಚಂದ್ರನ್ ಸಾರಥ್ಯದಲ್ಲಿ ಪಡ್ಡೆಹುಲಿ ಸಿನಿಮಾ ಚಿತ್ರಿಕರಣವಾಗತ್ತಿದ್ದು ಮತ್ತು ಇದಕ್ಕಾಗಿ ಕೋಟೆಯನ್ನು ಕನ್ನಡದ ಬಾವುಟಗಳಿಂದ ಸಿಂಗಾರ ಮಾಡಿದ್ದು ಈ ಮೂಲಕ ಚಿತ್ರದುರ್ಗದ ಕೋಟೆ ನಾಡಿನ ಜನ ನೋಡುವಂತಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಖ್ಯಾತನಟ ರವಿಚಂದ್ರನ್ ಅವರನ್ನು ಜಿಲ್ಲಾ ಘಟಕದಿಂದ ಸನ್ಮಾನಿಸಲಾಯಿತು. ಪಡ್ಡೆಹುಲಿ ಸಿನಿಮಾ ನಿರ್ಮಾಪಕ ಕೆ.ಮಂಜು, ಚಿತ್ರದುರ್ಗ ಸದಸ್ಯರಾದ ಸಂದೀಪ್, ಕುಮಾರ್, ದಾವಣಗೆರೆ ಮಾಲಾ ಹನುಮಂತಪ್ಪ, ಮಂಜುಳ, ಗೀತಾ, ಕರ್ನಾಟಕ ಯುವ ಪರಿಷತ್ತು ಪಧಾದಿಕಾರಿಗಳು ಅಖಿಲ ಕರ್ನಾಟಕ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿಮಾನಿಗಳ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
