ತುಮಕೂರು:
ತುಮಕೂರು ನಗರದ ಕ್ಯಾತಸಂದ್ರ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 8 ಜನ ಮೊಬೈಲ್ ಫೋನ್ ಕಳ್ಳರನ್ನು ಬಂಧಿಸಿ, ಅವರಿಂದ ಸುಮಾರು 15 ಲಕ್ಷ ರೂ. ಮೌಲ್ಯದ 90 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತುಮಕೂರು ತಾಲ್ಲೂಕು ಬಸದಿ ಬೆಟ್ಟದ ಬಳಿ ಆಗಸ್ಟ್ 24 ರಂದು ಅಲ್ಲಿಗೆ ಬರುವ ಪ್ರವಾಸಿಗರ ಬಳಿ ಮೊಬೈಲ್, ನಗದು, ಚಿನ್ನಾಭರಣ ಇತ್ಯಾದಿ ದೋಚಲು ಸಂಚುಹಾಕಿದ್ದ 8 ಜನರನ್ನು ಕ್ಯಾತಸಂದ್ರ ಠಾಣೆಯ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದಾಗ ಇವರುಗಳ ಅಸಲಿ ಕೃತ್ಯ ಬೆಳಕಿಗೆ ಬಂದಿದೆ. ಇವರ ಬಳಿ ಇದ್ದ ಸುಮಾರು 15 ಲಕ್ಷ ರೂ. ಮೌಲ್ಯದ ಒಟ್ಟು 90 ಮೊಬೈಲ್ ಫೋನ್ಗಳನ್ನು ಮತ್ತು ಮಾರಕಾಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಧರ್ಮರಾಜ್ (30), ಉಮೇಶ (32), ಪ್ರವೀಣ (18), ರವಿ (31), ರಾಜಪ್ಪ (50), ಟಿ.ವಿಶ್ವನಾಥ (35), ರವಿ (37) ಮತ್ತು ಗುರುಮೂರ್ತಿ (40) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಬೋವಿ ಕಾಲೋನಿಯವರೆಂದು ತಿಳಿದಿದೆ.
ಹಬ್ಬ ಹರಿದಿನಗಳಂದು ಇವರುಗಳು ತುಮಕೂರು ನಗರಕ್ಕೆ ಬಂದು, ವಸತಿ ಗೃಹಗಳಲ್ಲಿ ತಂಗಿದ್ದುಕೊಂಡು ಬಳಿಕ ಮೊಬೈಲ್ ಕಳ್ಳತನ ಮಾಡುತ್ತಿದ್ದರೆಂದು ಹಾಗೂ ಇವರುಗಳ ವಿರುದ್ಧ ಬೆಂಗಳೂರು ನಗರ, ಭದ್ರಾವತಿ, ಮಂಡ್ಯ, ಬಳ್ಳಾರಿ, ಶಿವಮೊಗ್ಗ ಪೊಲೀಸ್ ಠಾಣೆಗಳಲ್ಲಿ ಕಳ್ಳತನದ ಪ್ರಕರಣಗಳು ದಾಖಲಾಗಿವೆ ಎಂಬುದೂ ಬೆಳಕಿಗೆ ಬಂದಿವೆ.
ಈ ಆರೋಪಿಗಳು ತುಮಕೂರು ನಗರದಲ್ಲಿ ಕಳೆದ 20 ದಿನಗಳಿಂದ ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಅಂತರಸನಹಳ್ಳಿ ತರಕಾರಿ ಮಾರುಕಟ್ಟೆ, ಜೆ.ಸಿ. ರಸ್ತೆಯ ತರಕಾರಿ ಮಾರುಕಟ್ಟೆ, ಮಂಡಿಪೇಟೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಕದಿಯುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಡಾ. ದಿವ್ಯ ವಿ.ಗೋಪಿನಾಥ್ ಮತ್ತು ಅಡಿಷನಲ್ ಎಸ್ಪಿ ಡಾ. ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ತುಮಕೂರು ನಗರ ಡಿವೈಎಸ್ಪಿ ಕೆ.ಎಸ್.ನಾಗರಾಜ್ ಮತ್ತು ಕ್ಯಾತಸಂದ್ರ ಸರ್ಕಲ್ ಇನ್ಸ್ಪೆಕ್ಟರ್ ಸಿ.ಎಚ್.ರಾಮಕೃಷ್ಣಯ್ಯ ಅವರ ನೇತೃತ್ವದಲ್ಲಿ ಕ್ಯಾತಸಂದ್ರ ಸಬ್ಇನ್ಸ್ಪೆಕ್ಟರ್ ಡಿ.ಎಲ್.ರಾಜು ಮತ್ತು ಸಿಬ್ಬಂದಿಗಳಾದ ಎಎಸ್ಸೆ‘ ಸಿದ್ದಪ್ಪ, ಮೋಹನ್ ಕುಮಾರ್, ಲೋಕೇಶ್ ಬಾಬು, ಕುಮಾರ್, ದ್ವಾರಕೀಶ್, ಕೆ.ರಮೇಶ್, ಮಹೇಶ್, ಓಂಕಾರೇಶ್ವರ, ರಂಗಸ್ವಾಮಿ, ಚಿದಾನಂದ, ಮಂಜಪ್ಪ ಅವರು ಈ ಪ್ರಕರಣವನ್ನು ಪತ್ತೆ ಮಾಡಿದ್ದಾರೆ. ಇವರ ಈ ಯಶಸ್ಸನ್ನು ಎಸ್ಪಿ ದಿವ್ಯ ವಿ.ಗೋಪಿನಾಥ್ ಪ್ರಶಂಸಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
