ಚಳ್ಳಕೆರೆ
ನಗರಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಕಾಂಗ್ರೆಸ್ ಪಕ್ಷವೇ ಎದುರಾಳಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ವಾರ್ಡ್ಗಳಲ್ಲೂ ಸಹ ಬಿಜೆಪಿ ಬಿರುಸಿನ ಸ್ಪರ್ಧೆ ನೀಡಿ, ಹೆಚ್ಚಿನ ಸ್ಥಾನವನ್ನು ಗಳಿಸಲಿದೆ ಎಂಬ ಆತ್ಮವಿಶ್ವಾಸವನ್ನು ಬಿಜೆಪಿ ಮಂಡಲಾಧ್ಯಕ್ಷ ಬಿ.ವಿ.ಸಿರಿಯಣ್ಣ ಹೊಂದಿದ್ದಾರೆ.
ಅವರು, ಸೋಮವಾರ ನಗರಸಭೆ 11ನೇ ವಾರ್ಡ್ ಅಭ್ಯರ್ಥಿ ಎಸ್.ಜಯಣ್ಣ, 14ನೇ ವಾರ್ಡ್ ಅಭ್ಯರ್ಥಿ ನಾಗೇಶ್ರವರ ಪರ ಬಿರುಸಿನ ಪ್ರಚಾರ ನಡೆಸಿ ಪತ್ರಿಕೆಯೊಂದಿಗೆ ಮಾತನಾಡಿ, ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಬಿಜೆಪಿಗೆ ಕಾಂಗ್ರೆಸ್ ಪಕ್ಷವೇ ಎದುರಾಳಿ ಎಂದರು. ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ಹಿಂದಕ್ಕೆ ತಳ್ಳಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಗರಸಭೆಗೆ ಆಯ್ಕೆಯಾಗಲಿದ್ದಾರೆ. ನಗರದ ಅಭಿವೃದ್ಧಿಗೆ ಭಾರತೀಯ ಜನತಾ ಪಕ್ಷ ತನ್ನದೇಯಾದ ವಿಶೇಷ ಕಾರ್ಯತಂತ್ರದ ಮೂಲಕ ಶ್ರಮಿಸಲಿದೆ ಎಂದರು.
11ನೇ ವಾರ್ಡ್ ಅಧ್ಯಕ್ಷ ಎಸ್.ಜಯಣ್ಣ ಮಾತನಾಡಿ, ಈ ಭಾಗದಲ್ಲಿ ನಾನು ಈಗ ಮೂರನೇ ಬಾರಿಗೆ ಸ್ಪರ್ಧೆಗೆ ಇಳಿದಿದ್ದೇನೆ. ಈ ಹಿಂದೆ ನನ್ನ ಪತ್ನಿ ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ನಾನು ಸಹ ಕಳೆದ 2008ರ ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. 2013ರ ಪುರಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿ ಸೋಲು ಕಂಡಿದ್ದೆ. 20018ರ ಚುನಾವಣೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನಪರ ಕಾರ್ಯಕ್ರಮಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಈ ಬಾರಿಯ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದರು.
ಪ್ರಚಾರ ಕಾರ್ಯದಲ್ಲಿ ಶಕುಂತಲ, ಮಂಗಳಮ್ಮ, ಶಾಮಲ, ಉಮಾ, ರೇಖಾ, ರಮೇಶ್, ರಾಮಣ್ಣ, ಕಾಟಯ್ಯ, ತಿಪ್ಪೇಸ್ವಾಮಿ, ಹರ್ಷಿತ, ಕೇಶವಣ್ಣ, ನಗರ ಘಟಕದ ಅಧ್ಯಕ್ಷ ಜೆಎಂಸಿ ವೀರೇಶ್, 14ನೇ ವಾರ್ಡ್ ಅಭ್ಯರ್ಥಿ ಆರ್.ನಾಗೇಶ್ ಮುಂತಾದವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
