ಹರಪನಹಳ್ಳಿ :
ತಾಲ್ಲೂಕಿನಲ್ಲಿ ತುಂಗಭದ್ರಾ ನದಿ ಉಕ್ಕಿ ಹರಿಯುತ್ತಿದ್ದು ನದಿ ಪಾತ್ರದ ಗ್ರಾಮಗಳಲ್ಲಿ ಮನೆಗಳು, ಗದ್ದೆಗಳಿಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ.
ಬುಧವಾರ ಉಪವಿಭಾಗಾಧಿಕಾರಿ ಜಿ.ನಜ್ಮಾ ಹಾಗೂ ತಹಶೀಲ್ದಾರ ಗುರುಬಸವರಾಜ ಮತ್ತು ಇಒ ತಿಪ್ಪೇಸ್ವಾಮಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತಾಲ್ಲೂಕಿನ ಹಲವಾಗಲು, ಗರ್ಭಗುಡಿ, ನಿಟ್ಟೂರು, ನಿಟ್ಟೂರು ಬಸಾಪುರ, ಕಡತಿ, ನಂದ್ಯಾಲ ಹಾಗೂ ತಾವರಗುಂದಿ ಗ್ರಾಮಗಳ ನದಿ ನೀರು ನುಗ್ಗಿದೆ. 500 ಎಕರೆಯಷ್ಟು ಭತ್ತದ ಗದ್ದೆ ಜಲಾವೃತಗೊಂಡಿದೆ. ಇದೇ ರೀತಿ ಪ್ರವಾಹ ಮುಂದುವರಿದರೆ ತಾವರಗುಂದಿ ಗ್ರಾಮ ಜಲಾವೃತಗೊಳ್ಳುವ ಸಾಧ್ಯತೆಯಿದೆ.
ನದಿಪಾತ್ರದ ಗ್ರಾಮಗಳ ತಗ್ಗು ಪ್ರದೇಶದಲ್ಲಿ ಮನೆ ನಿರ್ಮಿಸಲು ಅನುಮತಿ ನೀಡಬಾರದು. ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಂಬಂಧಿಸಿದ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಇಒ ಅವರು ಸೂಚನೆ ನೀಡಿದ್ದಾರೆ.
ಗರ್ಭಗುಡಿ-ಹಲವಾಗಲು ಮಂಗಳವಾರವೇ ಸಂಪರ್ಕ ಕಡಿತಗೊಂಡಿತ್ತು. ನೀರಿನ ಹರಿವು ಹೆಚ್ಚುತ್ತಿರುವುದರಿಂದ ಬುಧವಾರ ಹಲವಾಗಲು ಹಾಗೂ ಕಣವಿ ತಾಂಡಾ ಸಂಪರ್ಕಿಸುವ ರಸ್ತೆ, ಹಲವಾಗಲು, ಕಡತಿ ರಸ್ತೆ ಸಂಪೂರ್ಣ ಕಡಿತಗೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಈ ಮಾರ್ಗದ ರಸ್ತೆ ಸಂಚಾರ ಹಾಗೂ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿಗಳು ತಾಲ್ಲೂಕು ಸೂಚಿಸಿದರು.
ತುಂಗಾ ಹಾಗೂ ಭದ್ರಾ ಜಲಾಶಯಗಳಿಂದ ನೀರು ಹರಿವು ಹೆಚ್ಚಾದರೆ ತಾಲ್ಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಗಂಜೀಕೇಂದ್ರ ತೆರೆಯಲಾಗುವುದು. ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಗಿ ನದಿ ಬಿಡುವುದು ನಿಲ್ಲಿಸಿದರೆ ನದಿ ಹರಿವು ಯತಾಸ್ಥಿತಿಗೆ ಬರಲಿದೆ ಎಂದು ತಹಶೀಲ್ದಾರ ಕೆ.ಗುರುಬಸವರಾಜ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
