ಮಧುಗಿರಿ
ಸ್ಥಳೀಯ ಗ್ರಾಪಂ, ತಾಪಂ ಸೇರಿದಂತೆ ತಾಲ್ಲೂಕು ಆಡಳಿತದಿಂದ ನಿವೇಶನ ರಹಿತರನ್ನು ಗುರುತಿಸಿ ವಸತಿ ಸೌಲಭ್ಯ ಕಲ್ಪಿಸಿ ಕೊಡದೆ ಮಾನವ ಜೀವಿಸುವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಉಪವಿಭಾಗಾಧಿಕಾರಿ ಡಾ.ವೆಂಕಟೇಶಯ್ಯರವರಿಗೆ ಹಾಗೂ ತಾಪಂ ಇಒ ಮೋಹನ್ ಕುಮಾರ್ ರವರಿಗೆ ಬ್ಯಾಲ್ಯ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದರು.
ತಾಲ್ಲೂಕಿನ ಪುರವರ ಹೋಬಳಿಯ ಬ್ಯಾಲ್ಯ ಗ್ರಾಮದಲ್ಲಿ ತೀರಾ ಹಿಂದುಳಿದ ತಳ ಸಮುದಾಯಗಳ ನಾಗರಿಕರು ಹಲವು ಬಾರಿ ನಿವೇಶನ ನೀಡುವಂತೆ ಗ್ರಾಪಂಗೆ ದಾಖಲೆಗಳ ಸಮೇತ ಮನವಿ ನೀಡುತ್ತಾ ಬಂದಿದ್ದರೂ ಸಹ, ಅವರ ಮನವಿಗಳಿಗೆ ಇದೂವರೆವಿಗೂ ಸ್ಪಂದಿಸಿಲ್ಲ. ಈ ಬಗ್ಗೆ ಗ್ರಾಪಂನಲ್ಲಿ ವಿಚಾರಿಸಿದರೆ ಜಾಗ ಖಾಲಿ ಇಲ್ಲವೆಂದು ಹೇಳಿ ನಾವುಗಳು ನೀಡಿರುವ ಅರ್ಜಿಗಳನ್ನು ಕಸದ ಬುಟ್ಟಿಯಲ್ಲಿ ಹಾಕಿ ಅಧಿಕಾರಿಗಳು ಉಡಾಫೆ ಉತ್ತರಗಳನ್ನು ನೀಡುತ್ತಿದ್ದಾರೆಂದು ಮನವಿಯಲ್ಲಿ ಆರೋಪಿಸಲಾಗಿದೆ.
ಭೂಮಿ ಮತ್ತು ವಸತಿಯ ತಾಲ್ಲೂಕು ಕಾರ್ಯದರ್ಶಿ ಹಂದ್ರಾಳು ನಾಗಭೂಷಣ್ ಮಾತನಾಡಿ, ಗ್ರಾಮಸ್ಥರು ಸಮಸ್ಯೆಯ ಬಗ್ಗೆ ತಿಳಿಸಿದ್ದಾರೆ. ಜತೆಗೆ ಒಂದೇ ಮನೆಯಲ್ಲಿ ಹಲವು ಕುಟುಂಬಗಳು ಹಾಗೂ ಬಾಡಿಗೆ ಮನೆಯಲ್ಲಿ ಈ ಜನರು ವಾಸವಿದ್ದಾರೆ. ಬ್ಯಾಲ್ಯ ಗ್ರಾಪಂ ವ್ಯಾಪ್ತ್ತಿಯ ಸ.ನಂ.97ರಲ್ಲಿ ನಾನಾ ಉದ್ದೇಶಗಳಿಗೆ ನಿವೇಶನ ನೀಡಲಾಗಿದೆ. ಅದರಲ್ಲಿ ಇನ್ನೂ ಜಾಗವಿರುವುದರಿಂದ ನೊಂದ ಬಡವರಿಗೆ ನಿವೇಶನ ನೀಡಿ ಆರ್ಹರಿಗೆ ಸರಕಾರಿ ಸೌಲಭ್ಯಗಳನ್ನು ದೊರಕಿಸಿ ಕೊಡಬೇಕಾಗಿದೆ. ಈ ಹಿಂದೆÀ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ವ್ಯವಸ್ಥಾಪಕ ನಿರ್ದೇಶಕರು ರಾಜೀವ್ ಗಾಂಧಿ ಗ್ರಾಮೀಣಾ ವಸತಿ ನಿಗಮ ನಿಯಮಿತಕ್ಕೆ ಈ ಸಮಸ್ಯೆಯ ದೂರು ನೀಡಲಾಗಿತ್ತು. ಆದರೆ ತಾಪಂ ಇಓ ಆಗಲಿ, ಜಿಲ್ಲಾಧಿಕಾರಿಗಳಾಗಲಿ ಸಮಸ್ಯೆಯನ್ನು ಪರಿಹರಿಸಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆಯ ಮೂಲಕ ಹೋರಾಟದ ಹಾದಿ ಹಿಡಿಯ ಬೇಕಾಗಿದೆ ಎಂದರು.
ತಾಪಂ ಇ.ಓ.ಮೋಹನ್ ಕುಮಾರ್ ಮಾತನಾಡಿ, ಗ್ರಾಮಸ್ಥರು ನೀಡಿರುವ ಅರ್ಜಿಯನ್ನು ಬ್ಯಾಲ್ಯ ಗ್ರಾಪಂ ಕಳುಹಿಸಿ ಕೊಡಲಾಗುವುದು ಮತ್ತು ಗ್ರಾಮಸ್ಥರೆ ತಿಳಿಸಿರುವ ಜಮೀನಿನ ಬಗ್ಗೆ ಮಾಹಿತಿ ಪಡೆದು ಕಂದಾಯ ಇಲಾಖೆಯಿಂದ ಹಸ್ತಾಂತರಕ್ಕೆ ಕ್ರಮ ಕೈಗೊಂಡು ಅರ್ಹರಿಗೆ ವಿತರಿಸಲಾಗುವುದು ಎಂದರು.
ಶ್ರೀನಿವಾಸ್, ಆನಂದ್, ವಾಜೀದ್, ಮಂಜಮ್ಮ, ಸರೋಜಮ್ಮ, ಹನುಮಕ್ಕ, ಲಲಿತಮ್ಮ, ಉಮಾದೇವಿ, ವೆಂಕಟಲಕ್ಷ್ಮೀ, ನಾಗಮ್ಮ, ಶಾನು, ಮೆಹಬೂಬ, ಜಬಿನ್ ತಾಜ್ ಮತ್ತಿತರರು ಉಪಸ್ಥಿತರಿದ್ದರು.
