ಪರಿಹಾರ ನಿಧಿ ಸಂಗ್ರಹಣೆಗಾಗಿ ಪಾದಯಾತ್ರೆ

ತುರುವೇಕೆರೆ

             ರಾಜ್ಯದ ಪ್ರವಾಹ ಪೀಡಿತ ಕೊಡಗು ಜಿಲ್ಲೆಯ ನಿರಾಶ್ರಿತ ಜನರಿಗೆ ಆಹಾರ ಮತ್ತು ಇನ್ನಿತರ ಮೂಲಭೂತ ವಸ್ತುಗಳನ್ನು ಕಳುಹಿಸಿಕೊಡಲು ಶಾಸಕ ಮಸಾಲಾಜಯರಾಮ್ ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪರಿಹಾರ ನಿಧಿ ಹಣ ಸಂಗ್ರಹಣೆ ಮಾಡುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿದರು.

               ತಾಲ್ಲೂಕಿನ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಸದಸ್ಯರು, ತಾಲ್ಲೂಕು ಸರ್ಕಾರಿ ನೌಕರರ ಸಂಘ ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳÀ ಪದಾಧಿಕಾರಿಗಳು ಪಕ್ಷಭೇದ ಮರೆತು ಪರಿಹಾರ ಸಂಗ್ರಹಿಸುವ ಕಾರ್ಯಕ್ಕೆ ಕೈಜೋಡಿಸಿದರು.

              ತಾಲ್ಲೂಕು ಕಚೇರಿ ಮುಂಭಾಗದಿಂದ ಶಾಸಕರ ನೇತೃತ್ವದಲ್ಲಿ ದಬ್ಬೇಘಟ್ಟ ರಸ್ತೆಯಲ್ಲಿ ಎಪಿಎಂಸಿ ಮಾರುಕಟ್ಟೆವರೆಗೆ, ಬಾಣಸಂದ್ರ ರಸ್ತೆ, ತಿಪಟೂರು ರಸ್ತೆ, ಸಂತೆ ಮೈದಾನಕ್ಕೆ ತೆರಳಿ ಸಾರ್ವಜನಿಕರಿಂದ ಸಂತ್ರಸ್ಥರಿಗೆ ಪರಿಹಾರದ ಹಣ ಸಂಗ್ರಹಿಸಲಾಯಿತು. ಸಾರ್ವಜನಿಕರು ಹಾಗೂ ವ್ಯಾಪಾರಿಗಳು ತಮ್ಮ ಕೈಲಾದ ದೇಣಿಗೆ ನೀಡಿ ಸಹಕರಿಸಿದರು.

               ಸಂಗ್ರಹವಾದ ಹಣದಿಂದ ಬಟ್ಟೆ, ಆಹಾರ ಮತ್ತು ಇನ್ನಿತರ ಅಗತ್ಯ ವಸ್ತುಗಳ ಪಟ್ಟಣವನ್ನು ನಿರಾಶ್ರಿತರ ಸ್ಥಳಕ್ಕೆ ಕಳುಹಿಸಿಕೊಡುವ ತೀರ್ಮಾನವನ್ನು ಶಾಸಕರು ವ್ಯಕ್ತಪಡಿಸಿ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ಶಾಸಕರ ನೇತೃತ್ವದಲ್ಲಿ ಸಂಗ್ರಹಿಸಿದ ಹಣ 1,93,294 ರೂಪಾಯಿಗಳು. ಜೊತೆಗೆ ಅಪಾರ ಪ್ರಮಾಣದ ಅಕ್ಕಿ, ದವಸಧಾನ್ಯ, ಹೊದಿಕೆ, ಚಾಪೆ, ಔಷಧಿಗಳು ಸಂಗ್ರಹವಾಗಿವೆ.

               ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ದುಂಡಾರೇಣುಕಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀನರಸಿಂಹ, ಒಕ್ಕಲಿಗರ ಸಂಘದ ಅಧ್ಯಕ್ಷ ಕಡೇಹಳ್ಲಿ ಸಿದ್ದೆಗೌಡ, ಪ್ರೊ|| ಪುಟ್ಟರಂಗಪ್ಪ, ಕಸಾಪ ಅಧ್ಯಕ್ಷ ನಂ.ರಾಜು, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ಅರಳೀಕೆರೆ ಶಿವಯ್ಯ, ಡಿ.ಆರ್.ಬಸವರಾಜು, ಹಾವಾಳ ರಾಮೇಗೌಡ, ಕೆಂಪೇಗೌಡ, ಪ್ರಹ್ಲಾದ್, ನವೀನ್ ಬಾಬು, ಶಿವಲಿಂಗಪ್ಪ, ಆನಂದ್, ಜಯಶೀಲ, ರೇಣುಕೇಶ್, ಪ್ರಕಾಶ್, ಬೇಲೂರಪ್ಪ, ಶಂಕರಪ್ಪ, ರವಿ, ಜಯಣ್ಣ ಸೇರಿದಂತೆ ಅನೇಕ ಪದಾಧಿಕಾರಿಗಳು ನಿಧಿ ಸಂಗ್ರಹಣೆಯಲ್ಲಿ ತೊಡಗಿದ್ದರು.

Recent Articles

spot_img

Related Stories

Share via
Copy link