ಪಾವಗಡ:
ಭೀಕರ ಪ್ರವಾಹ ಪಿಡಿತ ಚೆನ್ನೈ ಕಡೆ ಪಯಣ
ಇದೀಗ ತಾನೇ ಕೇರಳ ರಾಜ್ಯದ ಅನೇಕ ಪ್ರದೇಶಗಳಲ್ಲಿನ ಪ್ರವಾಹ ಪೀಡಿತ ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಿ ಮರಳಿ ಬಂದಿರುವ ಸ್ವಾಮಿ ಜಪಾನಂದಜೀ ರವರು, ಚೆನ್ನೈ ಮಹಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪ್ರವಾಹ ಪರಿಹಾರ ಕಾರ್ಯವನ್ನು ಆರಂಭಿಸಲು ಅಣಿಯಾಗುತ್ತಿದ್ದಾರೆ. ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡು ಭೀಕರ ಮಳೆಯಿಂದ ತತ್ತರಿಸುತ್ತಿರುವ ಆ ಜನರಿಗೆ ಸೇವೆ ಸಲ್ಲಿಸಲು ಮುಂದಾಗಿದ್ದಾರೆ. ಪರಿಹಾರ ಸಾಮಗ್ರಿಗಳಾದ ದಿನಸಿ ಕಿಟ್ಟ್ಟುಗಳು, ವಸ್ತ್ರಗಳು, ಚಾಪೆ, ತುರ್ತು ತಯಾರಾಗುವ ಆಹಾರ ಸಾಮಗ್ರಿಗಳ ಪೊಟ್ಟಣಗಳು ಮುಂತಾದವುಗಳನ್ನು, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಹಕಾರದಿಂದ ಟಾರ್ಪಾಲಿನ್ಗಳು, ಸೊಳ್ಳೆ ಪರದೆಗಳು ಇತ್ಯಾದಿಗಳನ್ನು ಕೊಂಡೊಯ್ಯುತ್ತಿದ್ದಾರೆ.
ಮುಖ್ಯವಾಗಿ ಚೆನ್ನೈ ಮಹಾನಗರದಿಂದ ಕಡಲ ಸಮೀಪದಲ್ಲಿರುವ ಕೊರಕ್ಕುಪೇಟೆ ಪ್ರದೇಶಗಳಲ್ಲಿನ ಎಲ್ಲಾ ತಗ್ಗು ಪ್ರದೇಶಗಳಲ್ಲಿನ ಕೊಳಚೆ ಪ್ರದೇಶದ ನಿವಾಸಿಗಳಿಗೆ ಎಲ್ಲ ರೀತಿಯ ಸಹಾಯ ನೀಡುವ ಸಲುವಾಗಿ ಮಳೆಯ ಭೀಕರ ಆರ್ಭಟ ಹಾಗೂ ಚಂಡಮಾರುತದ ರಭಸ ಕಡಿಮೆಯಾದ ತಕ್ಷಣಕ್ಕೆ ಸ್ವಾಮಿ ಜಪಾನಂದಜೀ ರವರು ತಮ್ಮ ತಂಡದೊಂದಿಗೆ ಪ್ರವಾಹ ಪರಿಹಾರ ಕಾರ್ಯಕ್ಕೆ ತೆರಳುತ್ತಿದ್ದಾರೆ. 2021 ವರ್ಷಪೂರ್ತಿ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ಒಂದಲ್ಲಾ ಒಂದು ಸಾಮಾಜಿಕ ಸೇವಾ ಯೋಜನೆಗಳಲ್ಲಿ ಅದರಲ್ಲಿಯೂ ಕೋವಿಡ್, ಉತ್ತರ ಕರ್ನಾಟಕದ ಪ್ರವಾಹ ಪರಿಹಾರ ಕಾರ್ಯ, ಕೇರಳ ರಾಜ್ಯದ ಪ್ರವಾಹ ಪರಿಹಾರ ಕಾರ್ಯ ಹೀಗೆ ಏಕಪ್ರಕಾರವಾಗಿ “ಜೀವನಲ್ಲಿ ಶಿವನನ್ನು ಕಾಣುವ” ಆದರ್ಶವನ್ನು ನಿರಂತರವಾಗಿ ಅನುಷ್ಠಾನರೂಪಕ್ಕೆ ತರುತ್ತಿರುವ ಸ್ವಾಮೀಜಿಯವರು ತಮ್ಮ ಎಲ್ಲ ಯೋಜನೆಗಳ ಬಗ್ಗೆ ಸಂತೃಪ್ತಿಯನ್ನು ಹೊಂದಿರುವರು. ಈ ಎಲ್ಲ ಸೇವಾ ಯೋಜನೆಗಳಿಗೆ ಇನ್ಫೋಸಿಸ್ ಫೌಂಡೇಷನ್, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಹಾಗೂ ಅನೇಕ ಭಕ್ತರು, ಹಿತೈಷಿಗಳ ಸಹಕಾರದಿಂದ ತ್ರಿಶಕ್ತಿಗಳ ಹೆಸರಿನಲ್ಲಿ ಈ ಸೇವಾ ಯೋಜನೆ ನಿರಂತರವಾಗಿ ನಡೆಯುತ್ತಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2021/11/Chennai-floods-5.png)