ನವದೆಹಲಿ:

ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ಬಾಲಿವುಡ್ ಚಿತ್ರ ‘ಅಬೀರ್ ಗುಲಾಲ್’ ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ವಾಣಿ ಕಪೂರ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜಮ್ಮು-ಕಾಶ್ಮೀರದ ಪಹಲ್ಗಾಮ್ನಲ್ಲಿ ಏಪ್ರಿಲ್ 22ರ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ಬೆನ್ನಲ್ಲೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸಂಬಂಧಿಸಿದ ಮೂಲಗಳು ತಿಳಿಸಿವೆ.
‘ಅಬೀರ್ ಗುಲಾಲ್’ ಚಿತ್ರದ ಮೂಲಕ ಫವಾದ್ ಖಾನ್ ಒಂಬತ್ತು ವರ್ಷಗಳ ಬಳಿಕ ಬಾಲಿವುಡ್ಗೆ ಕಮ್ಬ್ಯಾಕ್ ಮಾಡುತ್ತಿದ್ರು. ಇದಕ್ಕೂ ಮುನ್ನ ಅವರು ‘ಖೂಬ್ಸೂರತ್’ (2014), ‘ಕಪೂರ್ ಆಂಡ್ ಸನ್ಸ್’ (2016) ಮತ್ತು ‘ಏ ದಿಲ್ ಹೈ ಮುಶ್ಕಿಲ್’ (2016) ಚಿತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಗಳು ಭಾರತೀಯ ಪ್ರೇಕ್ಷಕರಲ್ಲಿ ಅವರ ಜನಪ್ರಿಯತೆಯಿಂದ ಗಮನ ಸೆಳೆದಿದ್ದವು.
2016ರಉರಿ ಭಯೋತ್ಪಾದಕ ದಾಳಿಯ ನಂತರ ಭಾರತೀಯ ಚಿತ್ರರಂಗದಲ್ಲಿ ಪಾಕಿಸ್ತಾನಿ ಕಲಾವಿದರಿಗೆ ನಿಷೇಧ ಹೇರಲಾಯಿತು. ಇಂಡಿಯನ್ ಮೋಷನ್ ಪಿಕ್ಚರ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ (IMPPA) ಮತ್ತು ಆಲ್ ಇಂಡಿಯನ್ ಸಿನೆ ವರ್ಕರ್ಸ್ ಅಸೋಸಿಯೇಷನ್ (AICWA) ಸೇರಿದಂತೆ ಪ್ರಮುಖ ಸಂಸ್ಥೆಗಳು ಪಾಕಿಸ್ತಾನಿ ಕಲಾವಿದರನ್ನು ಭಾರತೀಯ ಚಿತ್ರಗಳಿಂದ ದೂರವಿಡುವ ಘೋಷಣೆ ಮಾಡಿದ್ದವು. 2023ರಲ್ಲಿ ಬಾಂಬೆ ಹೈಕೋರ್ಟ್ ಈ ನಿಷೇಧವನ್ನು ಔಪಚಾರಿಕಗೊಳಿಸುವ ಅರ್ಜಿಯನ್ನು ತಿರಸ್ಕರಿಸಿದರೂ, 2016ರಿಂದಲೂ ಅನೌಪಚಾರಿಕವಾಗಿ ಪಾಕಿಸ್ತಾನಿ ಕಲಾವಿದರೊಂದಿಗಿನ ಸಹಕಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.
ಅಬೀರ್ ಗುಲಾಲ್’ ಚಿತ್ರದ ಬಿಡುಗಡೆಗೆ ಈಗಾಗಲೇ ಕೆಲವರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ಪಹಲ್ಗಾಮ್ನಲ್ಲಿ ಲಷ್ಕರ್-ಎ-ತೊಯ್ಬಾದ ಶಾಖೆ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಭಯೋತ್ಪಾದಕರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಪ್ರತಿಭಟನೆಗಳು ತೀವ್ರಗೊಂಡಿವೆ.
ಫವಾದ್ ಖಾನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಪಹಲ್ಗಾಮ್ನ ಭೀಕರ ದಾಳಿಯ ಸುದ್ದಿಯಿಂದ ತೀವ್ರವಾಗಿ ದುಃಖಿತನಾಗಿದ್ದೇನೆ. ಈ ಭಯಾನಕ ಘಟನೆಯ ಸಂತ್ರಸ್ತರ ಕುಟುಂಬಗಳಿಗೆ ಶಕ್ತಿ ನೀಡುವಂತೆ ಮತ್ತು ಶೀಘ್ರ ಗುಣಮುಖರಾಗಲು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದರು. ವಾಣಿ ಕಪೂರ್ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ, “ಪಹಲ್ಗಾಮ್ನಲ್ಲಿ ನಿರಪರಾಧಿಗಳ ಮೇಲಿನ ದಾಳಿಯಿಂದ ಮೌನವಾಗಿದ್ದೇನೆ, ಶಬ್ದಗಳಿಲ್ಲ. ಕುಟುಂಬಗಳಿಗೆ ನನ್ನ ಸಂತಾಪ” ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.
