ಪಾವಗಡ :

ವೈ.ಎನ್.ಹೊಸಕೋಟೆಯಲ್ಲಿ ಹೋಂ ಕ್ವಾರಂಟೈನ್ನಲ್ಲಿರುವವರನ್ನು ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರ ಮಾಡಬಾರದೆಂದು ದೊಡ್ಡಹಳ್ಳಿ ಗ್ರಾಮದಲ್ಲಿ ತಹಸೀಲ್ದಾರ್ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.
ದೇಶದಲ್ಲಿ ಕೊರೋನಾ ಹರಡುವಿಕೆಯನ್ನು ತಡೆಗಟ್ಟಲು ಏಕಾಏಕಿ ಲಾಕ್ಡೌನ್ ಘೋಷಿಸಿದಾಗ, ತಾಲ್ಲೂಕಿನ ವೈ.ಎನ್.ಹೊಸಕೊಟೆಯ 13 ಜನರು ಗುಜರಾತಿನಲ್ಲಿ ಸಿಲುಕಿಕೊಂಡಿದ್ದರು. ಮೇ 4 ನಂತರ ಲಾಕ್ಡೌನ್ ಸಡಿಲಿಕೆಯಾಗಿ, ಗುಜರಾತ್ ಸರ್ಕಾರ ಕಳಿಸಿದ್ದ 13 ಜನರನ್ನು ತಾಲ್ಲೂಕು ಆಡಳಿತ ಪಟ್ಟಣದ ಕುರುಬರಹಳ್ಳಿ ವುಮೆನ್ಸ್ ಕಾಲೇಜಿನ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಿತು. ಅವರ ಆರೋಗ್ಯ ತಪಾಸಣೆ ನಡೆಸಿದಾಗ 3 ಜನರಿಗೆ ಕೋವಿಡ್ ಇರುವುದು ಪತ್ತೆಯಾಗಿತ್ತು.
ಈ ಸಂದರ್ಭ ವೈ.ಎನ್.ಹೊಸಕೋಟೆಯ 9 ಜನರು ಇವರ ಯೋಗಕ್ಷೇಮ ವಿಚಾರಿಸಲು ತೆರಳಿದ್ದರು. ಇವರನ್ನು ಕೂಡಲೆ ತಾಲ್ಲೂಕು ಆಡಳಿತ ಹೋಂ ಕ್ವಾರಂಟೈನ್ನಲ್ಲಿಟ್ಟು, ಈಗ ದೊಡ್ಡಹಳ್ಳಿ ಗ್ರಾಮದ ಅಟಲ್ ಬಿಹಾರಿ ವಸತಿ ಶಾಲೆಗೆ ಸ್ಥಳಾಂತರಿಸಲು ಸಿದ್ದತೆ ಮಾಡಿ, ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್ ವರದರಾಜು ಹಾಗೂ ಗ್ರಾಮಸ್ಥರ ನಡುವೆ ನಡುರಸ್ತೆಯಲ್ಲಿ ಮಾತಿನ ಚಕಮಕಿ ನಡೆಯಿತು.
ಗ್ರಾಮಸ್ಥರು ಯಾವುದೇ ಕಾರಣಕ್ಕೂ ವೈ.ಎನ್. ಹೊಸಕೋಟೆಯವರನ್ನು ಇಲ್ಲಿ ಕ್ವಾರಂಟೈನ್ ಮಾಡಲು ಬಿಡುವುದಿಲ್ಲ. ಇಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ನಂತರ ಪೋಷಕರು ಮಕ್ಕಳನ್ನು ಇಲ್ಲಿಗೆ ಕಳುಹಿಸಲು ಹೇಗೆ ಒಪ್ಪುತ್ತಾರೆ, ನೀವೆ ಹೇಳಿ ಎಂದು ತಹಸೀಲ್ದಾರ್ ಹಾಗೂ ಟಿಹೆಚ್ಓ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗ ತಹಸೀಲ್ದಾರ್ ವರದರಾಜು, ಇದೇ ಗ್ರಾಮದವರಿಗೆ ಇಂತಹ ಸಂದರ್ಭ ಎದುರಾದಾಗ ಬೇರೆ ಗ್ರಾಮದ ಶಾಲೆಯಲ್ಲಿ ನಾವು ಕ್ವಾರಂಟೈನ್ ಮಾಡಲು ಹೋದಾಗ, ಅವರೂ ಹೀಗೆ ಅಡ್ಡಿಪಡಿಸಿದರೆ ಆಗ ನಿಮ್ಮ ಪರಿಸ್ಥಿತಿ ಏನು? ನಿಮ್ಮನ್ನು ಎಲ್ಲಿ ಇಡಬೇಕು? ಪ್ರತಿಯೊಬ್ಬರು ಮಾನವೀಯ ದೃಷ್ಟಿಯಿಂದ ನೋಡಬೇಕೆ ಹೊರತು, ಬೇರೆ ದೃಷ್ಟಿಯಲ್ಲಿ ಯೋಚಿಸಿದರೆ, ಕಾನೂನು ತನ್ನ ಪಾಡಿಗೆ ತಾನು ತನ್ನ ಕೆಲಸ ಮಾಡಲಿದೆ ಎಂದು ಎಚ್ಚರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








