ಆಂಧ್ರಪ್ರದೇಶ :
ಸಚಿವರೊಬ್ಬರ ತಮ್ಮ ಸಾರ್ವಜನಿಕ ಸ್ಥಳದಲ್ಲಿ ಎಲ್ಲರ ಎದುರೇ ಪೊಲೀಸ್ ಕಾನ್ಸ್ಟೇಬಲ್ಗೆ ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ. ಸಚಿವ ಬಿ.ಸಿ. ಜನಾರ್ದನ ರೆಡ್ಡಿ ಅವರ ಸಹೋದರ ಮದನ್ ಭೂಪಾಲ್ ರೆಡ್ಡಿ, ಕರ್ನೂಲ್ ಜಿಲ್ಲೆಯ ಕೊಲಿಮಿಗುಂಡ್ಲಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕವಾಗಿ ಕಾನ್ಸ್ಟೆಬಲ್ ಒಬ್ಬರ ಕೆನ್ನೆಗೆ ಬಾರಿಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್(Viral Video) ಆಗುತ್ತಿದೆ.
ಇನ್ನು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ವಿರೋಧ ಪಕ್ಷದ ನಾಯಕರು ಸರ್ಕಾರದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದಾರೆ. ಇದು ಸಚಿವರ ಬೆಂಬಲಿಗರ ದುರಂಹಕಾರಕ್ಕೆ ನಿದರ್ಶನ ಎಂದು ಅವರು ಆರೋಪಿಸಿದ್ದಾರೆ. ರಾಜ್ಯ ಸರ್ಕಾರ ಪೊಲೀಸ್ ಪಡೆಯನ್ನು ರಾಜಕೀಯ ಒತ್ತಡದಲ್ಲಿ ಇರಿಸಿದೆ ಎಂದು ಆರೋಪಿಸಿದ್ದಾರೆ.
ಕರ್ನೂಲ್ ಜಿಲ್ಲೆಯ ಕೊಲಿಮಿಗುಂಡ್ಲಾದ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯದ ಉದ್ಘಾಟನೆಯ ಸಂದರ್ಭದಲ್ಲಿ ಬುಧವಾರ ಈ ಹಲ್ಲೆ ಘಟನೆ ನಡೆದಿದ್ದು, ಅಲ್ಲಿ ಹೆಚ್ಚಿನ ಸಂಖ್ಯೆಯ ಜನರು ಹಾಜರಿದ್ದರು. ಟಿಡಿಪಿ ನಾಯಕನ ಸಹೋದರ ತಕ್ಷಣ ದೇವಾಲಯಕ್ಕೆ ಪ್ರವೇಶಿಸುವಂತೆ ಒತ್ತಾಯಿಸಿ, ಕರ್ತವ್ಯದಲ್ಲಿದ್ದ ಜಶ್ವಂತ್ ಎಂಬ ಕಾನ್ಸೇಬಲ್ ಜೊತೆ ತೀವ್ರ ವಾಗ್ವಾದ ನಡೆಸಿದ್ದಾರೆ. ಜಶ್ವಂತ್ ಎಷ್ಟೇ ವಿನಂತಿ ಮಾಡಿಕೊಂಡರೂ ಮದನ್ ಭೂಪಾಲ್ ರೆಡ್ಡಿ ದೇಗುಲದೊಳಗೆ ಪ್ರವೇಶಿಸಲು ಮುಂದಾಗಿದ್ದಾರೆ. ಇದಕ್ಕೆ ಅಡ್ಡಪಡಿಸಿದಾಗ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆಯಿತು.
ಸಿಟ್ಟಿಗೆದ್ದ ಮದನ್ ಕಾನ್ಸ್ಟೇಬಲ್ ಜಶ್ವಂತ್ ಕೆನ್ನೆಗೆ ಬಾರಿಸಿ, ಹಲ್ಲೆಗೆ ಮುಂದಾಗಿದ್ದಾರೆ. ಆಗ ತಕ್ಷಣ ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಿದ ನಂತರ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಟಿಡಿಪಿ ಸಚಿವರು ದಾಳಿಯನ್ನು ಖಂಡಿಸಿದ್ದಾರೆ. ತಮ್ಮ ಸಹೋದರನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಕರೆ ನೀಡಿದ್ದಾರೆ.
ವೈಎಸ್ಆರ್ಸಿಪಿ ಎಕ್ಸ್ನಲ್ಲಿ ವೀಡಿಯೊವನ್ನು ಹಂಚಿಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿತು. “ಟಿಡಿಪಿ ಸಚಿವ ಬಿ.ಸಿ. ಜನಾರ್ದನ ರೆಡ್ಡಿ ಅವರ ಸಹೋದರ ಕರ್ತವ್ಯದಲ್ಲಿದ್ದ ಪೊಲೀಸ್ ಕಾನ್ಸ್ಟೆಬಲ್ಗೆ ಕಪಾಳಮೋಕ್ಷ ಮಾಡಿದರು, ಟಿಡಿಪಿ ನಾಯಕರು ಮತ್ತು ಅವರ ಕುಟುಂಬ ಸಾರ್ವಜನಿಕರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಇದು. ಸಾರ್ವಜನಿಕರ ದೃಷ್ಟಿಯಲ್ಲಿ ಹಲ್ಲೆ ನಡೆದರೂ, ಸರ್ಕಾರ ತಕ್ಷಣ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ವೈಎಸ್ಆರ್ಸಿಪಿ ಟ್ವೀಟ್ ಮಾಡಿದೆ.
