ಹಿರಿಯೂರು :
ಈ ದೇಶದ ಪುರಾತನ ವೈದ್ಯಕೀಯ ಪದ್ಧತಿಗಳಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸಹ ಒಂದಾಗಿದ್ದು ಈ ಪ್ರಕೃತಿ ಚಿಕಿತ್ಸಾ ಪದ್ದತಿಗೆ ಅನೇಕ ಮಾರಕ ಖಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆ ಎಂಬುದಾಗಿ ರೋಟರಿಸಂಸ್ಥೆ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಹೇಳಿದರು.
ನಗರದ ರೋಟರಿ ಸಭಾ ಭವನದಲ್ಲಿ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ರೋಟರಿ ಸಂಸ್ಥೆ ಹಾಗೂ ಸೋಲ್ ಟ್ರೇನ್ ರೈಡರ್ಸ್ ಹಿರಿಯೂರು ಇವರುಗಳ ಸಂಯುಕ್ತಾಶ್ರಯದಲ್ಲಿ, ಡಾ||ಎನ್.ಅಪೂರ್ವ ಮತ್ತು ತಂಡದವರಿಂದ ಹಮ್ಮಿಕೊಳ್ಳಲಾಗಿದ್ದ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ದೇಶಿಸಿ ಅವರು ಮಾತನಾಡಿದರು.
ಈಶ್ವರಿ ವಿಶ್ವವಿದ್ಯಾಲಯದ ಗಾಯಿತ್ರಿ ಅಕ್ಕನವರು ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಬಹಳ ಮುಖ್ಯ ಆರೋಗ್ಯ ಇಲ್ಲದಿದ್ದರೆ ನಾವು ಏನನ್ನು ಸಾಧಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ಚಿಕಿತ್ಸಾ ಪದ್ದತಿ ಉತ್ತಮ ಪದ್ದತಿಯಾಗಿದೆ ಎಂದರು.
ಶ್ರೀಮತಿ ಶಶಿಕಲಾ ರವಿಶಂಕರ್ ಮಾತನಾಡಿ, ನಮ್ಮ ಆಧುನಿಕ ವೈದ್ಯ ಪದ್ದತಿಗಳಾದ ಅಲೋಪತಿ ಚಿಕಿತ್ಸೆಯಿಂದ ಅನೇಕ ರೀತಿಯ ಅಡ್ಡಪರಿಣಾಮಗಳನ್ನು ಇಂದು ನಾವು ಕಾಣುತ್ತಿದ್ದು, ಈ ಪ್ರಕೃತಿ ಚಿಕಿತ್ಸಾ ಪದ್ದತಿಯಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ ಎಂಬುದಾಗಿ ಹೇಳಿದರು.
ವೇದಿಕೆಯಲ್ಲಿ ರೆಡ್ಕ್ರಾಸ್ಸಂಸ್ಥೆ ಚೇರ್ಮೆನ್ ಹೆಚ್.ಎಸ್.ಸುಂದರರಾಜ್, ಶ್ರೀಮತಿ ಸೌಭಾಗ್ಯವತಿದೇವರು, ತಾ||ಪತ್ರಕರ್ತರ ಸಂಘದ ಅಧ್ಯಕ್ಷ ಆಲೂರುಹನುಮಂತರಾಯಪ್ಪ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಆಳ್ವಾಸ್ಸಂಸ್ಥೆಯ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ||ಅಪೂರ್ವ, ಡಾ||ಕವನ, ಡಾ||ಯಾಸ್ಮೀನ್, ಡಾ||ವೀಕ್ಷಿತಾ, ಡಾ||ಭಾವನಾ, ಹಾಗೂ ಆದರ್ಶ ಸೇರಿದಂತೆ ವೈದ್ಯಕೀಯ ಸಿಬ್ಬಂದಿ ಹಾಗೂ ತಂಡದವರು ಭಾಗವಹಿಸಿದ್ದರು.