ಜಗಳೂರು :
ಕ್ಷೇತ್ರದಲ್ಲಿನ ಪ್ರತಿಯೊಬ್ಬರಿಗೂ ಸೂರು, ನೀರು ಕಲ್ಪಿಸುವುದೇ ನನ್ನ ಗುರಿಯಾಗಿದ್ದು, ಗುಡಿಸಲು ಮುಕ್ತ ಕ್ಷೇತ್ರವನ್ನಾಗಿ ಮಾಡಲು ಪಣ ತೊಡಲಾಗಿದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ತಾಲೂಕು ಪಂಚಾಯ್ತಿ ಆವರಣದಲ್ಲಿ 2018-19ನೇ ಸಾಲಿನ ಪ್ರಧಾನಮಂತ್ರಿ ಗ್ರಾಮೀಣ ಆವಾಸ್ ಸಮೀಕ್ಷೆ ಯೋಜನೆಯಡಿ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷಾ ಪಟ್ಟಿಗೆ ಹೆಸರು ನೊಂದಾಯಿಸುವ ಪ್ರಚಾರ ಅಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹಾತ್ವಕಾಂಕ್ಷಿ ಯೋಜನೆಯಾಗಿದೆ, ಪ್ರತಿ ಗ್ರಾಮಗಳಲ್ಲೂ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳನ್ನು ಸಮೀಕ್ಷೆ ಮಾಡಿಸಿ, ಸೂರು ಕಲ್ಪಿಸುವುದು, ಇದರಲ್ಲಿ ವಂಚಿತ ಕುಟುಂಬಗಳಿಗೆ ಪುನಃ ಅರ್ಜಿ ಸಲ್ಲಿಸಲು ಇದೇ ದಿನಾಂಕ 28 ಕೊನೆ ದಿನವಾಗಿದ್ದು, ಕ್ಷೇತ್ರದ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಗುಡಿಸಲು ಮುಕ್ತ ತಾಲೂಕಾಗಿ ಮಾಡಲು ಸುವರ್ಣಾವಕಾಶವಿದೆ. ಈಗಾಗಲೇ ಎಲ್ಲಾ ಅರ್ಜಿಗಳನ್ನು ಜಿಪಿಎಸ್ ಕೂಡ ಮಾಡಲಾಗಿದ್ದು ಹಂತ ಹಂತವಾಗಿ ಮನೆಗಳನ್ನು ನಿರ್ಮಿಸಿ ಕೊಡಲಾಗುವುದು. ಗ್ರಾಮ ಪಂಚಾಯ್ತಿಗಳಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಬಡ ಫಲಾನುಭವಿಗಳಿಂದ ಯಾವುದೇ ನಿರೀಕ್ಷೆ ಇಲ್ಲದೆ ಕೆಲಸ ಮಾಡಿಕೊಡಬೇಕು. ಜನರಿಗೆ ತೊಂದರೆಯಾದರೆ ನಾನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ತಾಲೂಕಿನ 53 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ದೊರಕಿದ್ದು ಸಿರಿಗೆರೆ ಶ್ರೀಗಳ ಒತ್ತಡದಿಂದ ಶೀಘ್ರವೇ ಕೆರೆಗಳಿಗೆ ನೀರು ಬರಲಿವೆ. ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಚರ್ಚಿಸಲು ಭರವಸೆ ನೀಡಿದ್ದು, ಶೀಘ್ರವೇ ಹೋರಾಟ ಸಮಿತಿ ನಿಯೋಗವನ್ನು ಕೊಂಡೊಯ್ದು ಜಾರಿಗೆ ಒತ್ತಾಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಸದಸ್ಯರಾದ ಮರೇನಹಳ್ಳಿ ಬಸವರಾಜ್, ಶಂಕರ್ನಾಯ್ಕ, ತಿಮ್ಮಾಬೋವಿ, ಇಒ ಜಾನಕಿರಾಮ್, ಬಿಜೆಪಿ ತಾಲೂಕು ಅಧ್ಯಕ್ಷ ಡಿ.ವಿ.ನಾಗಪ್ಪ, ಯುವ ಮೋರ್ಚಾದ ಅಧ್ಯಕ್ಷ ಬಿದರಕೆರೆ ರವಿಕುಮಾರ್, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಹೆಚ್.ನಾಗರಾಜ್, ಸೇರಿದಂತೆ ಮತ್ತಿತರರು ಹಾಜರಿದ್ದರು.
