ಪ್ರಶಸ್ತಿಗಾಗಿ ದುಂಬಾಲು ಬೀಳುವುದು ಸಲ್ಲ

ದಾವಣಗೆರೆ :

       ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿ, ದುಂಬಾಲು ಬೀಳುವ ಮೂಲಕ ಶಿಫಾರಸು ಪತ್ರಗಳ ಮೂಲಕ ಲಾಬಿ ನಡೆಸುವುದು ಸರಿಯಲ್ಲ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

      ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಲಿಂಗ ರಂಗ ಜಿಲ್ಲಾ ಸಾಹಿತ್ಯ ಪ್ರಶಸ್ತಿ, ಮಹಾನಗರ ಸಿರಿ ಹಾಗೂ ಗ್ರಾಮೀಣ ಸಿರಿ ಪ್ರಶಸ್ತಿಗಳ ಪ್ರದಾನ ಮತ್ತು ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

       ಪ್ರಶಸ್ತಿಗಳು ಅರ್ಹರನ್ನು ಹುಡುಕಿಕೊಂಡು ಬರಬೇಕು. ಆದರೆ, ಪ್ರಸ್ತುತ ನಿಜವಾದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿಲ್ಲ. ಬದಲಿಗೆ ಪ್ರಶಸ್ತಿಗಳಿಗಾಗಿ ಅರ್ಜಿ ಸಲ್ಲಿಸಿ, ರಾಜಕಾರಣಿಗಳ ದುಂಬಾಲು ಬಿದ್ದು, ಶಿಫಾರಸು ಪತ್ರಗಳನ್ನು ಪಡೆದು ಲಾಬಿ ನಡೆಸಿ, ಪ್ರಶಸ್ತಿ ಪಡೆಯುತ್ತಿರುವುದು ದುರ್ಲಭವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.

     ಸಮಾಜಕ್ಕೆ ಕೊಡುಗೆ ನೀಡಿದ ಅರ್ಹರನ್ನು ಗುರುತಿಸಿ, ಗೌರವಿಸಿದಾಗಲೇ ಪ್ರಶಸ್ತಿಗಳಿಗೆ ನಿಜವಾದ ಅರ್ಥ ಬರಲಿದೆ. ಸಾಹಿತ್ಯ ಪರಿಷತ್ತಿನಿಂದ ಇಂತಹದ್ದೊಂದು ಕೆಲಸ ಆಗುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖವಾಡ ಹಾಕಿಕೊಂಡು ಬದುಕುತ್ತಿರುವ ಹಲವರಿಗೆ ಮಾನ-ಸಮ್ಮಾನ ದೊರೆಯುತ್ತಿವೆ.

      ಸ್ವಾರ್ಥಪರ ಚಿಂತನೆಯುಳ್ಳವರು ಹಾರ-ತುರಾಯಿ ಹಾಕಿಸಿಕೊಂಡು ಮೆರೆಯುತ್ತಿದ್ದಾರೆಂದು ಬೇಸರಿಸಿದ ಶ್ರೀಗಳು, ರವಿ ಕಾಣದ್ದನ್ನು ಕವಿ ಕಂಡ ಎನ್ನುತ್ತಾರೆ. ಇಂತಹದೇ ವಿಶಾಲ ದೃಷ್ಟಿಕೋನದಿಂದ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯ ನಿರ್ವಹಿಸುತ್ತಿದೆ. ಕಾಣದ ಕೈಗಳ ಸೇವೆಯಿಂದಲೇ ನಾಡು ಸುಭಿಕ್ಷವಾಗಿದೆ. ಸಮಾಜದ ಏಳಿಗೆಯಲ್ಲಿ ಮುಗ್ಧ ಸಾಧಕರ ಕೊಡುಗೆ ಸಾಕಷ್ಟಿದೆ. ಅಂತಹ ಸಾಧಕರನ್ನು ಗುರುತಿಸಿ, ಗೌರವಿಸುವ ಕೆಲಸ ಆಗಬೇಕೆಂದು ಸಲಹೆ ನೀಡಿದರು.

       ಜಗಳೂರು ನಳಂದ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಜಿ.ಎಸ್.ಸುಭಾಷ್‍ಚಂದ್ರ ಬೋಸ್ ಅಭಿನಂದನಾ ನುಡಿಗಳನ್ನಾಡಿ, ಮಹಲಿಂಗ ರಂಗ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಎರ್ರಿಸ್ವಾಮಿಯವರು ಬ್ಯಾಂಕ್ ಅಧಿಕಾರಿಯಾಗಿದ್ದರೂ ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

      ಇವರು ಹಣಕಾಸು ವ್ಯವಹಾರದ ಜೊತೆ, ಜೊತೆಯಲ್ಲೇ ಸಾಹಿತ್ಯ ಕೃಷಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಕೃತಿಗಳ ಮೂಲಕ ಜನರಲ್ಲಿ ಆರ್ಥಿಕ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇಂತಹ ಅಪರೂಪದ ವ್ಯಕ್ತಿಗೆ ಮಹಲಿಂಗ ರಂಗ ಪ್ರಶಸ್ತಿ ನೀಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ ಎಂದರು.

      ಈ ಸಂದರ್ಭದಲ್ಲಿ ಕೆನರಾ ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಎನ್.ಟಿ.ಎರ್ರಿಸ್ವಾಮಿ ಅವರಿಗೆ ಮಹಲಿಂಗ ರಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಸೇವೆಗಾಗಿ ಸಿದ್ಧಗಂಗಾ ಶಾಲೆಯ ಜಸ್ಟಿನ್ ಡಿ’ಸೌಜಾ ಹಾಗೂ ಸಮಾಜ ಸೇವೆಗಾಗಿ ಮಹಾನಗರ ಪಾಲಿಕೆ ಕಂದಾಯ ಪರಿವೀಕ್ಷಕ ಕೆ.ಎಸ್.ಗೋವಿಂದರಾಜು ಅವರುಗಳಿಗೆ ಮಹಾನಗರ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿರುವ ಪತ್ರಕರ್ತ ಪ್ರಕಾಶ ಕುಗ್ವೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಜಿಲ್ಲೆಯ 12 ಮಂದಿಗೆ ಗ್ರಾಮೀಣ ಸಿರಿ ಪ್ರಶಸ್ತಿ ನೀಡಲಾಯಿತು.

       ಕಸಾಪ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮಕುಮಾರಿ ಲೀಲಾಜಿ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷರುಗಳಾದ ಬಿ.ಎಂ.ಸದಾಶಿವಪ್ಪ ಶ್ಯಾಗಲೆ, ಎ.ಆರ್.ಉಜ್ಜನಪ್ಪ, ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link