ದಾವಣಗೆರೆ:
ಪರೀಕ್ಷೆಗೆ ಹಾಜರಾಗಿದ್ದರೂ, ಫಲಿತಾಂಶದಲ್ಲಿ ಗೈರು ತೋರಿಸಿರುವ ದಾವಣಗೆರೆ ವಿವಿಯ ಕ್ರಮ ಖಂಡಿಸಿ ಹಾಗೂ ಫಲಿತಾಂಶದ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಒತ್ತಾಯಿಸಿ ಎಐಡಿಎಸ್ಒ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ದಾವಣಗೆರೆ ವಿವಿ ವ್ಯಾಪ್ತಿಯ ಚಿತ್ರದುರ್ಗ ಮತ್ತು ದಾವಣಗೆರೆಯ ವಿವಿಧ ಕಾಲೇಜುಗಳು “ಕಂಪ್ಯೂಟರ್ ಅಪ್ಲಿಕೇóನ್ 16SD94” ವಿಷಯದ ಪರೀಕ್ಷೆಗೆ ಹಾಜರಾಗಿದ್ದರೂ, ಫಲಿತಾಂಶದಲ್ಲಿ ಮಾತ್ರ ವಿವಿಯು ಗೈರುಹಾಜರೆಂದು ಪ್ರಕಟಿಸಿ ವಿದ್ಯಾರ್ಥಿಗಳನ್ನು ಗೊಂದಲಕ್ಕೆ ಸಿಲುಕಿಸಿದೆ ಎಂದು ಆರೋಪಿಸಿದರು.
ಈ ವಿಷಯ ತಿಳಿದ ವಿದ್ಯಾರ್ಥಿಗಳು ಚಿತ್ರದುರ್ಗದ ವಿದ್ಯಾರ್ಥಿಗಳು ಎಐಡಿವೈಓ ಸಂಘಟನೆಯ ಜಿಲ್ಲಾ ಘಟಕದೊಂದಿಗೆ ದಾವಣಗೆರೆ ವಿ.ವಿ.ಗೆ ಆಗಮಿಸಿ, ವಿಶ್ವ ವಿದ್ಯಾನಿಲಯದ ದೋಷದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಫಲಿತಾಂಶದ ಬಗ್ಗೆ ಸ್ಪಷ್ಟೀಕರಣ ನೀಡಬೇಕೆಂದು ಪಟ್ಟುಹಿಡಿದರು.
ಈ ವೇಳೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ ಮಾತನಾಡಿದ ದಾವಣಗೆರೆ ವಿವಿಯ ಅಧಿಕಾರಿಗಳು ಒಂದು ವಾರದೊಳಗೆ ಮರುಮೌಲ್ಯಮಾಪನ ಮಾಡಿಸಿ, ಆಗಿರುವ ದೋಷವನ್ನು ಸರಿಪಡಿಸಿ ಫಲಿತಾಂಶ ಪ್ರಕಟಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಚಿತ್ರದುರ್ಗದ ಎಐಡಿವೈಒ ಮುಖಂಡರಾದ ವಿನಾಯಕ, ಲಿಂಗರಾಜ್, ದಾವಣಗೆರೆ ಎಐಡಿಎಸ್ಒ ಮುಖಂಡರುಗಳಾದ ಸೌಮ್ಯ, ನಾಗಜ್ಯೋತಿ, ಸ್ಮೀತಾ, ನೇತ್ರ, ಬಸವರಾಜು, ಕಾವ್ಯ ಮತ್ತಿತರರು ಹಾಜರಿದ್ದರು.
